ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡುವ ವೇಳೆ ಗುಂಡಿಗೆ ಎದೆಕೊಟ್ಟು ವೀರಸ್ವರ್ಗ ಸೇರಿದ ಕ್ಯಾ.ಪ್ರಾಂಜಲ್ Captain Pranjal ಅವರ ಅಂತಿಮ ಯಾತ್ರೆ ಆರಂಭವಾಗಿದ್ದು, ದಾರಿಯುದ್ದಕ್ಕೂ ಸಾವಿರಾರು ಮಂದಿ ನೆರೆದು ಕಣ್ಣೀರ ವಿದಾಯ ಹೇಳುತ್ತಿದ್ದಾರೆ.
ಜಿಗಣಿಯಲ್ಲಿರುವ ಕ್ಯಾ.ಪ್ರಾಂಜಲ್ ಅವರ ನಿವಾಸದಲ್ಲಿ ಸೇನೆ ಹಾಗೂ ಪೊಲೀಸ್ ಪಡೆಗಳಿಂದ ಅಂತಿಮ ಗೌರವ ನಮನ ಸಲ್ಲಿಸಲಾಯಿತು. ಆನಂತರ ಕುಟುಂಬಸ್ಥರಿಂದ ಅಂತಿಮ ವಿಧಿವಿಧಾನ ನೆರವೇರಿಸಿದರು.
ಅಂತಿಮ ವಿಧಿವಿಧಾನದ ನಂತರ ಅಲಂಕೃತ ಸೇನಾ ವಾಹನದಲ್ಲಿ ಜಿಗಣಿಯಿಂದ ಕೂಡ್ಲು ಗೇಟ್’ವರೆಗೂ ಅಂತಿಮ ಯಾತ್ರೆ ಆರಂಭವಾಗಿದೆ.
Also read: ಹುತಾತ್ಮ ಕ್ಯಾ.ಪ್ರಾಂಜಲ್’ಗೆ ಕಣ್ಣೀರ ವಿದಾಯ | ಸೇನೆ, ಪೊಲೀಸ್ ಪಡೆಯಿಂದ ಅಂತಿಮ ಗೌರವ
ಜಿಗಣಿಯ ನಂದನವನದಿಂದ ಆರಂಭವಾಗಿರುವ ಅಂತಿಮ ಯಾತ್ರೆ ಸುಮಾರು 30 ಕಿಲೋ ಮೀಟರ್ ನಗರದಲ್ಲಿ ಸಾಗಿ ಕೂಡ್ಲು ಗೇಟ್’ವರೆಗೂ ಸಾಗಲಿದೆ.
ಅಂತಿಮ ಯಾತ್ರೆ ಸಾಗುತ್ತಿರುವ ಮಾರ್ಗದುದ್ದಕ್ಕೂ ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದು ಅಗಲಿದ ಯೋಧನಿಗೆ ನಮನ ಸಲ್ಲಿಸುತ್ತಿದ್ದಾರೆ. ಯಾತ್ರೆ ಸಾಗುತ್ತಿರುವ ಮಾರ್ಗದ ಪ್ರತಿ ಬಡಾವಣೆಯ ಪ್ರತಿ ರಸ್ತೆಯಲ್ಲೂ ಸಹ ಎಲ್ಲ ವಯೋಮಾನದ ಸಾರ್ವಜನಿಕರು ಸಾಲುಗಟ್ಟಿ ನಿಂತಿದ್ದಾರೆ. ಅಲ್ಲದೇ, ವಿವಿಧ ಸಂಘ ಸಂಸ್ಥೆಗಳವರು, ಕನ್ನಡ ಸಂಘಗಳ ಸದಸ್ಯರುಗಳು ನೆರೆದು ನಮನ ಸಲ್ಲಿಸುತ್ತಿದ್ದಾರೆ. ಎಲ್ಲೆಲ್ಲೂ ದೇಶದ ಭಾವುಟ ರಾರಾಜಿಸುತ್ತಿದೆ.
ನಮಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧನಿಗೆ ಕಂಬನಿ ನಿಮಿದು, ಪುಷ್ಪವೃಷ್ಠಿ ಮಾಡಿ, ಸೆಲ್ಯೂಟ್ ಮಾಡಿ ವಿದಾಯದ ನಮನ ಸಲ್ಲಿಸುತ್ತಿದ್ದಾರೆ. ಕ್ಯಾಪ್ಟರ್ ಪ್ರಾಂಜಲ್ ಅಮರ್ ರಹೇ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತಾ ಜನರು ನಮನ ಸಲ್ಲಿಸುತ್ತಿದ್ದಾರೆ.
ಮಾರ್ಗದುದ್ದಕ್ಕೂ ಜನರು ಸಾಲುಗಟ್ಟಿ ನಿಂತಿರುವ ಕಾರಣ ಮೆರವಣಿಗೆ ನಿಧಾನಗತಿಯಲ್ಲಿ ಸಾಗುತ್ತಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















