ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸುವ ಕುತಂತ್ರ ಖಂಡಿಸಿ ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಹಿಂದುಳಿದ ವರ್ಗಗಳ ಒಕ್ಕೂಟ ಅಹಿಂದ ಒಕ್ಕೂಟ ಜನಪರ ಸಂಘಟನೆಗಳ ಒಕ್ಕೂಟ ಶೋಷಿತ ಸಮುದಾಯಗಳ ಒಕ್ಕೂಟದ ವತಿಯಿಂದ ಒಂದು ದಿನದ ಸಾಂಕೇತಿಕ ಉಪವಾಸ ಮುಷ್ಕರವನ್ನು ಹಮ್ಮಿಕೊಳ್ಳಲಾಗಿತ್ತು.
ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮೂಡ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಆದರೂ ಮೈಸೂರು ಪಾದಯಾತ್ರೆ ನಡೆಸುತ್ತಿರುವುದು ಸರ್ಕಾರ ಬೀಳಿಸುವ ಹುನ್ನಾರ ಎಂದು ಧರಣಿ ನಿರತರು ಆರೋಪಿಸಿದರು.
ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ , ನಿಗಮದ ಎಂಡಿ ಹಾಗೂ ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಲಾಗಿದೆ. ಹೀಗಿದ್ದರೂ ಸಿದ್ದರಾಮಯ್ಯ ಅವರನ್ನು ವಿನಾಕಾರಣ ಇದರಲ್ಲಿ ಸಿಲುಕಿಸುವ ಯತ್ನ ನಡೆದಿದೆ ಎಂದರು.
ತಮ್ಮ ಮೇಲೆ ಆರೋಪ ಬಂದಾಗ ಸ್ವಂತ ಮುಖ್ಯಮಂತ್ರಿಗಳು ತನಿಖಾ ಆಯೋಗ ರಚಿಸಿದ್ದರೂ, ಬಿಜೆಪಿಯವರು ಸಲ್ಲದ ಷಡ್ಯಂತ್ರ ಮಾಡುತ್ತಿದ್ದಾರೆ, ದೇಶದ ಅತ್ಯುತ್ತಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸುದ್ದಿ ಸಂಸ್ಥೆಗಳೇ ವರದಿ ಮಾಡಿವೆ ಎಂದು ಉಪಾವಾಸ ನಿರತರು ತಿಳಿಸಿದರು.
ಸಿದ್ದರಾಮಯ್ಯ ವಿರುದ್ಧದ ಷಡ್ಯಂತರ ಇಲ್ಲಿಗೆ ನಿಲ್ಲಬೇಕು. ಇಲ್ಲದಿದ್ದರೆ ಹೋರಾಟ ತೀವ್ರ ಗೊಳಿಸಲಾಗುವುದು. ಶೀಘ್ರದಲ್ಲಿಯೇ ರಾಜ್ಯಮಟ್ಟದ ಶೋಷಿತರ ಅಹಿಂದ ಮತ್ತು ಹಿಂದುಳಿದ ವರ್ಗದವರ ಎಚ್ಚರಿಕೆ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಬಿಜಿಪಿ ಮತ್ತು ಜೆಡಿಎಸ್ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಎಸ್ ಪಿ ಶೇಷಾದ್ರಿ, ಅಹಿಂದ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಇಕ್ಕೆರಿ ರಮೇಶ್ ಅಹಿಂದಾ ಜಿಲ್ಲಾದ್ಯಕ್ಷ ಚಂದ್ರಭೂಪಲ್, ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ, ಪ್ರಮುಖರಾದ ಕಲಗೋಡು ರತ್ನಾಕಾರ್, ಕೆ.ರಂಗನಾಥ, ಶರತ್ ಮರಿಯಪ್ಪ, ಕೆ.ಪಿ.ಬಾಲಪ್ಪ,ಎಸ್.ಬಿ.ಆಶೋಕ್ ಕುಮಾರ್, ಮಮತಾ ಸಿಂಗ್, ಸ್ಟೇಲಾ ಮಾರ್ಟಿನ್, ಅಫ್ರೀದಿ ಶ್ರೀನಿವಾಸ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















