ಕಲ್ಪ ಮೀಡಿಯಾ ಹೌಸ್ | ಸೊರಬ |
ಅಕ್ರಮ ನೇಮಕಾತಿಗೆ ಪಂಚಾಯತ ರಾಜ್ ನಿಯಮ, ಕಾನೂನು ಗೊತ್ತಿಲ್ಲದ, ಸರ್ಕಾರಿ ವೃತ್ತಿಯನ್ನು ದುರಪಯೋಗ ಮಾಡಿಕೊಂಡಿರುವ ಕಾರ್ಯನಿರ್ವಹಣಾಧಿಕಾರಿ ಹೊಣೆಯಾಗಿದ್ದು, ಈ ಕೂಡಲೆ ಅವರನ್ನು ಅಮಾನತ್ತುಗೊಳಿಸಿ, ಪಂಚಾಯತ್ ನಿಯಮ ತಿಳಿದ ಬೇರೆ ಅಧಿಕಾರಿಯನ್ನು ಕೂಡಲೇ ನೇಮಿಸಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಪಟ್ಟಣದ ತಾಪಂ ಕಚೇರಿ ಎದುರು ಪ್ರತಿಭಟಿಸಿದ ಅವರು ಅಕ್ರಮ ನೇಮಕಾತಿಯ ಸಮಗ್ರ ದಾಖಲೆಗಳನ್ನು ಬಿಚ್ಚಿಟ್ಟರು.
ಪ್ರಕರಣ
ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮ ನೇಮಕಾತಿ ಪ್ರಕರಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಣ್ಣಿಗೆ ಬಿದ್ದಿದೆ. ಪಕ್ಕೀರಪ್ಪ ಎಂಬುವವರು ತೀರಿ ಹೋದ ಬಳಿಕ ಅವರ ಮಗ, ಕಿರಣ.ಪಿ., ಅವರ ನೇಮಕಾತಿ ಅನುಕಂಪ ಆಧಾರದಲ್ಲಿ 2021ರ ಜೂನ್ 22 ರಂದು ಅಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸುಮಾ.ಎನ್. ಅವರಿಂದ ನಿರ್ಣಯ ಮಾಡಲಾಯಿತು. ಆದರೆ, ಕಿರಣ.ಪಿ ಅವರು ನೀರಗಂಟಿ ಕೆಲಸವನ್ನು ತ್ಯಜಿಸಿ, ಅಥಿತಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
Also read: ಲಿಂಗಾಯತ ಮಹಾಸಭೆ 2ನೇ ಹಂತದ ಚುನಾವಣೆ | ಕೇಂದ್ರ ಕಾರ್ಯಕಾರಿ ಸಮಿತಿಗೆ ಬಿ.ವೈ. ರಾಘವೇಂದ್ರ ನಾಮಪತ್ರ
ಕಳೆದ ವರ್ಷ, ಪುನಃ ಎಣ್ಣೆಕೊಪ್ಪ ಗ್ರಾಮಕ್ಕೆ ವರ್ಗಾವಣೆಗೊಂಡ ಸುಮಾ.ಎನ್., ಹಳೆಯ ನೇಮಕಾತಿ ಪ್ರಕ್ರಿಯೆಯನ್ನು ಸಂಜೀವ ನೇರಲಗಿ ಎಂಬ ರಾಜಕೀಯ ಮುಖಂಡನ ಆದೇಶದಂತೆ ತಿದ್ದುಪಡಿ ಮಾಡಿ, 1993ರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ 54ನೇ ಪ್ರಕರಣವನ್ನು ಉಲ್ಲಂಘಿಸಿ, 2024ರ ಜೂನ್ ಮತ್ತು ಜುಲೈ ತಿಂಗಳ ಹಾಜರಾತಿ ಪುಸ್ತಕದಲ್ಲಿ ಕಾನೂನು ಮೀರಿ ಕಿರಣ್ ಪಿ ಕೆಲಸದಲ್ಲಿ ಇಲ್ಲದೆ ಇದ್ದರು ಹಾಜರಾತಿಯನ್ನು ದಾಖಲಿಸಿಕೊಂಡಿದ್ದಾರೆ.
ಇಒ ಅವರಿಗೆ ಪಂ ರಾಜ್ ಇಲಾಖೆಯ ಸುತ್ತೋಲೆ ಮತ್ತು ಕಾನೂನು ಬಗ್ಗೆ ಎಳ್ಳಷ್ಟೂ ಅರಿವಿರುವುದಿಲ್ಲ. ಇಂತಹ ತಪ್ಪು ಕ್ರಮಕ್ಕೆ ಜನಸಾಮಾನ್ಯರೂ ಹಾಗೂ ಪಂ ರಾಜ್ ಅಭಿವೃಧ್ದಿ ಕೆಲಸಗಳಿಗೆ ಹಿನ್ನೆಡೆ ಆಗಿರುತ್ತದೆ. ಈ ಕೂಡಲೆ ಇವರನ್ನು ಅವರ ಮೂಲ ಇಲಾಖೆ ವರ್ಗಾಯಿಸಬೇಕು ಮತ್ತು ತಾಲ್ಲೂಕು ಪಂಚಾಯತ್’ಗೆ ಸೂಕ್ತ ಅಭ್ಯರ್ಥಿಯನ್ನು ನೇಮಕಗೊಳಿಸಬೇಕು.
-ಮಹೇಶ್ ಶಕುನವಳ್ಳಿ, ತಾಲ್ಲೂಕು ಘಟಕದ ಅಧ್ಯಕ್ಷ
ಕ್ರಮಕೈಗೊಳ್ಳಿ
ಮೇಲಾಧಿಕಾರಿ ಇಒ ಪ್ರದೀಪ್ ಕುಮಾರ್ ಅವರ ಯಾವುದೇ ಅನುಮತಿ ಇಲ್ಲದೆ, ಕಾನೂನು ಪ್ರಕ್ರಿಯೆಗಳನ್ನು ಮೀರಿಸಿ, ಅಧಿಕಾರ ದುರುಪಯೋಗ ಮಾಡಿರುವುದು ಜನಸಾಮಾನ್ಯರ ಗಮನಕ್ಕೆ ಬಂದಿದೆ. ಹಾಜರಾತಿ ಪುಸ್ತಕದಲ್ಲಿ ಸಹಿ ಪಡೆಯಲಾಗಿದೆ. ಕಿರಣ ಅವರನ್ನು ನೇಮಕ ಮಾಡಿಕೊಳ್ಳದಂತೆ ಶಾಸಕರು ಮೌಖಿಕವಾಗಿ ತಿಳಿಸಿದ್ದರೂ ಅವರ ಗಮನಕ್ಕೆ ತರದೆ ತಾಪಂ ಅಧಿಕಾರಿ ಶ್ರೀರಾಮ್ ಅವರು ಖುದ್ದು ಸಂಜೀವ ನೇರಲಿಗೆ ಅವರ ಖಾಸಗಿ ವಾಹನದಲ್ಲಿ ಜಿಪಂಗೆ ತೆರಳಿ ತಾಪಂನಿಂದ ಪಿಡಿಒ ಕಳುಹಿಸಿದ ನೇಮಕಾತಿ ಕಡತ ಇಒ ಶಿಫಾರಸ್ಸು ಪತ್ರವನ್ನು 24 ತಾಸಿನೊಳಗೆ ಜಿಪಂ ಸಲ್ಲಿಸಿದ್ದಾರೆ. ಕಿರಣ ಕೆಲಸ ನಿರ್ವಹಿಸದೆ ಇದ್ದಾಗಲೂ ವೇತನ ನೀಡಲಾಗಿದೆ. ನೇಮಕಾತಿಯಲ್ಲಿ ಅಕ್ರಮ ನಡೆದಿದ್ದರೂ ಪಿಡಿಒ ಮೇಲೆ ಇಒ ಪ್ರದೀಪಕುಮಾರ್ ಕ್ರಮ ಜರುಗಿಸಿಲ್ಲ. ಅಮಿಷಕ್ಕೆ ಒಳಗಾಗಿ ಅಕ್ರಮ ನೇಮಕಾತಿ ನಡೆಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣದ ಕುರಿತಾಗಿ ಸತ್ಯಾಸತ್ಯತೆ ಹೊರಕ್ಕೆ ಬರಲು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಸೊರಬ ತಾಲ್ಲೂಕು ಪಂಚಾಯಿತಿಯ ಕಚೇರಿ ಮುಂಭಾಗದಲ್ಲಿ ತಮಟೆ ಚಳುವಳಿಯನ್ನು ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ ಶಕುನವಳ್ಳಿ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ಜಿಲ್ಲಾ ಸಂಚಾಲಕ ಬಂಗಾರಪ್ಪ ನಿಟ್ಟಕ್ಕಿ, ನಾಗರಾಜ್ ಹುರುಳಿ, ಹರೀಶ್ ಚಿಟ್ಟೂರು, ಪ್ರಭಾಕರ ಹಿರೇಚೌಟಿ ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















