ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರು-ಶಿವಮೊಗ್ಗ ನಡುವೆ ವಂದೇ ಭಾರತ್ ಸೂಪರ್ ಫಾಸ್ಟ್ ರೈಲು #Vandebharath ಸಂಚಾರ ಆರಂಭದ ಪ್ರಯತ್ನದ ನಡುವೆಯೇ, ಈ ರೈಲನ್ನು ತಾಪಗುಪ್ಪವರೆಗೂ ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ #V Somanna ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಯಶವಂತಪುರ-ಶಿವಮೊಗ್ಗ ನಡುವೆ ವಾರಕ್ಕೆ ಮೂರು ಬಾರಿ ಸಂಚರಿಸುತ್ತಿರುವ ರೈಲನ್ನು ವಾರದ ಏಳು ದಿನಗಳ ಚಲಿಸುವಂತೆ ಹಾಗೂ ವಂದೇಭಾರತ್ ರೈಲು ಮಾರ್ಗವನ್ನು ಬೆಂಗಳೂರಿನಿಂದ ತಾಳಗುಪ್ಪವರೆಗೆ ವಿಸ್ತರಿಸಲು ವಿಶೇಷ ಗಮನಹರಿಸಲಾಗುವುದು ಎಂದರು.
ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ಈ ವಿಷಯದ ಬಗ್ಗೆ ಗಮನಹರಿಸಲಾಗುವುದು ಎಂದ ಅವರು, ಹಲವು ದಶಕಗಳ ಅನೇಕ ಸಮಸ್ಯೆಗಳನ್ನು ಇತ್ಯರ್ಥಪಡಿಸುವಲ್ಲಿ ರೈಲ್ವೇ ಇಲಾಖೆ ವಿಶೇಷ ಗಮನಹರಿಸಿದೆ ಎಂದರು.
Also read: ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ | ಕೇಂದ್ರ ಸಚಿವ ಸೋಮಣ್ಣ ಮಹತ್ವದ ಹೇಳಿಕೆ
ಇದರೊಂದಿಗೆ ಸಿರ್ಸಿ-ತಾಳಗುಪ್ಪ-ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ 158 ಕಿ.ಮೀ ದೂರದ ರೈಲ್ವೇ ಕಾಮಗಾರಿ ಪೂರ್ವ ಸರ್ವೇ ನಡೆಸಲು ಆದೇಶ ಹೊರಡಿಸಲಾಗಿದೆ. ಅಂಕೋಲ-ತಾಳಗುಪ್ಪ ಮಾರ್ಗದ ಬಗ್ಗೆಯೂ ಗಮನಹರಿಸಲಾಗುವುದು ಎಂದು ತಿಳಿಸಿದರು.
ಉಷಾ ನರ್ಸಿಂಗ್ ಬಳಿಯ ವರ್ತುಲ ನವೀಕರಣಕ್ಕೆ ರೈಲ್ವೇ ಇಲಾಖೆಯಿಂದ ಮಹಾನಗರಪಾಲಿಕೆಗೆ ಈಗಾಗಲೇ 2ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಅಗತ್ಯವಿರುವ ಇನ್ನೂ 2.50ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾಗುವ ನಿರೀಕ್ಷೆಯಿಂದ ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತ ಕವಿತಾ ಯೋಗಪ್ಪನವರ್ ಅವರು ಹೇಳಿದರು.
ರೈಲ್ವೇ ಇಲಾಖಾಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ರೈಲ್ವೇ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸ್ಥಳೀಯ ಇಲಾಖಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಬೇಕು. ಅಮೃತ್ ಭಾರತ್ ಯೋಜನೆಯಡಿ ಶಿವಮೊಗ್ಗ, ಜಂಬಗಾರು ಹಾಗೂ ತಾಳಗುಪ್ಪ ರೈಲ್ವೇ ನಿಲ್ದಾಣಗಳ ಉನ್ನತೀಕರಣ ಕಾಮಕಾರಿಗಳಿಗಾಗಿ ಅಗತ್ಯ ಅನುದಾನವನ್ನು ಮಂಜೂರು ಮಾಡಿದೆ. ರೈಲ್ವೇ ಇಲಾಖೆಯ ಅಧಿಕಾರಿಗಳು ರಾಜ್ಯದ ಪ್ರತಿಷ್ಟಿತ ಜಿಲ್ಲೆಯಾಗಿರುವ ಶಿವಮೊಗ್ಗದ ವಿವಿಧ ರೈಲ್ವೇ ನಿಲ್ದಾಣಗಳನ್ನು ದೇಶದ ಮಾದರಿ ರೈಲ್ವೇನಿಲ್ದಾಣಗಳನ್ನಾಗಿ ನಿರ್ಮಿಸಬೇಕು. ಅದಕ್ಕಾಗಿ ಸ್ಥಳೀಯ ಅಧಿಕಾರಿ-ಜನಪ್ರತಿನಿಧಿಗಳ ಸಹಕಾರ ಪಡೆದು, ನೀಲನಕ್ಷೆ ತಯಾರಿಸುವಂತೆ ಅವರು ಸಲಹೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post