1990
ಈ ನಡುವೆ ಲತಾ ಮತ್ತು ರೇಷ್ಮಾ, ಆ್ಯಸಿಡ್ನಿಂದ ವಿರೂಪಗೊಂಡಿದ್ದ ಇನ್ನೂ ಏಳು ವೇಶ್ಯೆಯರನ್ನು ಠಾಣೆಗೆ ಕರೆತಂದರು! ಇಷ್ಟು ಘೋರ ಕೃತ್ಯ ನಡೆದಿದ್ದರೂ ಇದಕ್ಕೆ ಸಂಬಂಧಿಸಿದ ಯಾವುದೇ ಠಾಣೆಯಲ್ಲೂ ಪ್ರಕರಣ ದಾಖಲಾಗಿರಲಿಲ್ಲ! ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, 9 ಪ್ರಕರಣಗಳನ್ನು ನಾನಾ ಠಾಣೆಗಳಲ್ಲಿ ದಾಖಲಿಸೆದೆ. ಅವರನ್ನೆಲ್ಲ ವಿಚಾರಿಸುತ್ತಿದ್ದಾಗ, ಮಾಲಾ ಎಂಬ ಮತ್ತೊಬ್ಬ ವೇಶ್ಯೆಗೆ ಖಚಿತ ಮಾಹಿತ ಇರುವ ಸಂಗತಿ ಗೊತ್ತಾಯಿತು. ಆಕೆಗಾಗಿ ಬೀದಿಬೀದಿ ಸುತ್ತಿದೆವು. ರೇಷ್ಮಾ ಮತ್ತು ಲತಾ ಜತೆ ನಾನು ಬೆಳಗಿನ ಜಾವ 4 ಗಂಟೆಗೆ ಆಟೊದಲ್ಲಿ ಹೋಗಿ ಕಲಾಸಿಪಾಳ್ಯದ ಶೌಚಾಲಯದ ಬಳಿ ಕಾದು ನಿಂತೆ. ಏಕೆಂದರೆ, ಮಾರ್ಕೆಟ್ ಸುತ್ತಮುತ್ತಲಿನ ವೇಶ್ಯೆಯರು ರಾತ್ರಿ ಪಾಳಿ ಮುಗಿಸಿ ಬೆಳಗಿನ ಜಾವ ಅಲ್ಲಿಗೆ ಬಂದು ‘ಪರಿಶುದ್ಧ’ರಾಗಿ ಹೋಗುತ್ತಿದ್ದರು.
ಮಾಲಾಳನ್ನು ಪತ್ತೆ ಹಚ್ಚಿದಾಗ ಆಕೆ ಮತ್ತೊಂದು ದಿಕ್ಕು ತೋರಿಸಿದಳು. ‘ಯುಬಿ ಫ್ಯಾಕ್ಟರಿ ಸಮೀಪದ ಅಪಾರ್ಟ್ಮೆಂಟ್ನ ಮನೆಯೊಂದರಲ್ಲಿ ರಾಣಿ ಎಂಬಾಕೆ ಕೆಲಸ ಮಾಡುತ್ತಾಳೆ. ಆಕೆ ಅಲ್ಲಿಂದ ನಿತ್ಯ ಸಂಜೆ 6 ಗಂಟೆಗೆ ಕಬ್ಬನ್ಪಾರ್ಕ್ ಮೂಲಕ ನಡೆದು ಹೋಗಿ ವಿಧಾನಸೌಧ ಮುಂಭಾಗದ ಬಿಟಿಎಸ್ ನಿಲ್ದಾಣದಿಂದ ಬಸ್ ಏರಿ ರಾಮಮೂರ್ತಿನಗರಕ್ಕೆ (ಆಗ ಇದು ಬೆಂಗಳೂರಿನ ಹೊರವಲಯ ಎನಿಸಿಕೊಂಡಿತ್ತು) ಹೋಗುತ್ತಾಳೆ. ಆಕೆಯನ್ನು ಆ್ಯಸಿಡ್ ರಾಜಾ ಬೆದರಿಸಿ ಮಡಗಿಕೊಂಡಿದ್ದಾನೆ.’ ಎಂಬ ಮಾಹಿತಿ ನೀಡಿದಳು. ನಿಜವಾಗಲೂ ನಮ್ಮ ಪಾಲಿಗೆ ಇದು ಬ್ರೇಕಿಂಗ್ ನ್ಯೂಸ್ ಆಗಿತ್ತು. ಸಂಜೆ ನಾವೆಲ್ಲ ಅಪಾರ್ಟ್ಮೆಂಟ್ ಬಳಿ ರಾಣಿಗಾಗಿ ಕಾದೆವು. ಆಕೆ ಹೊರಬಂದು ವಿಧಾನಸೌಧದ ಕಡೆ ನಡೆಯಲಾರಂಭಿಸಿದಳು. ನನ್ನ ‘ಮೊರಿಸ್ ಮೈನರ್’ ಕಾರಿನಲ್ಲಿ ನಾವೆಲ್ಲ ಆಕೆ ಹತ್ತಿದ ಬಸ್ ಫಾಲೋ ಮಾಡಿದೆವು.
1951ರ ಮಾಡೆಲ್ನ ಆ ಕಾರನ್ನು ನಾನು 6 ಸಾವಿರಕ್ಕೆ ಖರೀದಿಸಿದ್ದೆ! ರಾತ್ರಿ ಸುಮಾರು 8ಗಂಟೆಗೆ ಆಕೆ ರಾಮಮೂರ್ತಿ ನಗರದಲ್ಲಿ ಬಸ್ ಇಳಿದು ಸಣ್ಣ ಗುಡಿಸಲಿನತ್ತ ನಡೆಯಲಾರಂಭಿಸಿದಳು. ಆಕೆ ಮನೆಯ ಬಾಗಿಲು ತೆರೆಯುತ್ತಿದ್ದಂತೆ ನಾವೆಲ್ಲ ಒಳಗೆ ನುಗ್ಗಿ ಬಾಗಿಲು ಹಾಕಿಬಿಟ್ಟೆವು. ಆಕೆ ಕಕ್ಕಾಬಿಕ್ಕಿ. ಮನೆಯೊಳಗೆ ಸುಮಾರು 5 ವರ್ಷದ ವಿಕಲಚೇತನ ಮಗ ಒಂಟಿಯಾಗಿದ್ದ. ಈ ವಿಷಯ ಮೊದಲೇ ಗೊತ್ತಿದ್ದರಿಂದ ನಾನು ಚಾಕೊಲೆಟ್ ತೆಗೆದುಕೊಂಡು ಹೋಗಿದ್ದೆ. ಆತನಿಗೆ ಕೊಟ್ಟು. ರಾಣಿಯೊಡನೆ ಗೌರವದಿಂದ ಮಾತನಾಡಿದೆ. ಆಕೆ ತನ್ನ ದುರಂತ ಜೀವನದ ಕತೆ ಬಿಚ್ಚಿಟ್ಟು ಬಿಕ್ಕಳಿಸಿದಳು. ಮುರುಕು ಕೋಣೆಯಲ್ಲಿ ಕದ್ದ ಕಾರುಗಳ ಬಿಡಿ ಭಾಗ, ಸಾವಿರಾರು ಆಡಿಯೋ ಕ್ಯಾಸೆಟ್, ಬೆಲೆ ಬಾಳುವ ಪರ್ಸ್ಗಳು, ಆಭರಣಗಳ ಬಾಕ್ಸ್ಗಳು ರಾಶಿ ಬಿದ್ದಿದ್ದವು. ಮತ್ತೊಂದು ಕೋಣೆಯಲ್ಲಿ ಎರಡು-ಮೂರು ಮಂಕಿ ಕ್ಯಾಪ್ಗಳನ್ನು ಗೋಡೆಗೆ ನೇತು ಹಾಕಲಾಗಿತ್ತು. ಅಡುಗೆ ಮನೆಯಲ್ಲಿದ್ದ ಒಂದು ದೊಡ್ಡ ಕ್ಯಾನ್ನಲ್ಲಿ ಸುಮಾರು 15 ಲೀಟರ್ ಆ್ಯಸಿಡ್ ಬಚ್ಚಿಡಲಾಗಿತ್ತು. ನಾಲ್ಕೈದು ಚಿಕ್ಕ ಪಿಚಕಾರಿಗಳಲ್ಲಿ ಆ್ಯಸಿಡ್ ತುಂಬಿಸಿಡಲಾಗಿತ್ತು.
ಆ್ಯಸಿಡ್ ರಾಜಾನನ್ನು ಆಕೆ ಪ್ರೀತಿಸಿ ಮದುವೆಯಾಗಿದ್ದಳು. ಆ ಬಳಿಕ ಆತನ ದುಷ್ಟತನದಿಂದ ಬೇಸತ್ತು ಎರಡು ಬಾರಿ ತಪ್ಪಿಸಿಕೊಂಡು ಹೋಗಿದ್ದಳು. ಆದರ ಆತ ಹುಡುಕಿ, ಆ್ಯಸಿಡ್ನಿಂದ ಗಾಯಗೊಳಿಸಿ ಮತ್ತೆ ತನ್ನ ಜತೆ ಇಟ್ಟುಕೊಂಡಿದ್ದ. ಕಾನ್ಸ್ಟೇಬಲ್ ವೆಂಕಟೇಶ್ನನ್ನು ಮನೆಯೊಳಗೆ ಬಿಟ್ಟು. ವಿಜಯ್ಕುಮಾರ್ ಮತ್ತು ನಾಗರಾಜ್ ಕಟ್ಟಿಮನಿ ಜತೆ ನಾನು ಕಾರಿನೊಳಗೆ ಕುಳಿತೆ. 12:30ರ ಸುಮಾರಿಗೆ ಆತ ಬಂದು ಬಾಗಿಲು ಬಡಿಯತೊಡಗಿದ. ನಾನು ಹಿಂದಿನಿಂದ ನುಗ್ಗಿ, ಮಿಸುಕಾಡಲೂ ಬಿಡದಂತೆ ಹಿಡಿದುಕೊಂಡೆ. ಉಳಿದವರು ಓಡಿಬಂದು ಆತನ ಕೈಗೆ ಕೋಳ ಬಿಗಿದರು. ಆತನನ್ನು ಕೋರ್ಟ್ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಲಾಕಪ್ನಲ್ಲಿ ಇಟ್ಟುಕೊಂಡಿದ್ದೆ. ಆತನಿಂದ ಆ್ಯಸಿಡ್ ದಾಳಿಗೊಳಗಾಗಿ ನೊಂದಿದ್ದ ಕಾನ್ಸ್ಟೇಬಲ್ ರಾಮಕೃಷ್ಣಯ್ಯ ಠಾಣೆಗೆ ಬಂದು, ಆರೋಪಿಯನ್ನು ನೋಡಬೇಕು ಸಾರ್ ಎಂದರು. ಆತನನ್ನು ಎನ್ಕೌಂಟರ್ ಮಾಡಿ ಮುಗಿಸಿ ಎಂದು ಇವರು ಹಿಂದೊಮ್ಮೆ ವಿನಂತಿಸಿದ್ದರು.
ನೋಡಿ ನೋಡಿ ಎಂದು ಖುಷಿಯಿಂದ ಲಾಕಪ್ ತೋರಿಸಿದೆ. ‘ಸ್ವಲ್ಪ ಕೀ ತೆಗೀರಿ ಸಾರ್ ಹತ್ತಿರದಿಂದ ನೋಡುಬೇಕು.’ ಎಂದರು. ನಾನು ಕೀ ತೆಗೆಸಿದೆ. ಆರೋಪಿಯನ್ನು ದುರುಗುಟ್ಟಿ ನೋಡಿದ ರಾಮಕೃಷ್ಣಯ್ಯ ಹೂಂಕರಿಸುತ್ತ. ಶರ್ಟ್ ಒಳಗೆ ಬಚ್ಚಿಟ್ಟುಕೊಂಡಿದ್ದ ಕಬ್ಬಿಣದ ರಾಡ್ ತೆಗೆದು ತಲೆಯತ್ತ ಗುರಿ ಇಟ್ಟು ಬೀಸಿದರು. ತಕ್ಷಣ ರಾನು ಆರೋಪಿಯನ್ನು ಪಕ್ಕ ಎಳೆದುಕೊಂಡೆ. ಏಟು ಹೆಗಲಿಗೆ ಬಿತ್ತು. ತಲೆಗೇನಾದರೂ ಬಿದ್ದಿದ್ದರೆ ಆತ ಸ್ಥಳದಲ್ಲೇ ಸತ್ತು ಹೋಗುತ್ತಿದ್ದ. ಲಾಕಪ್ ಡೆತ್ ಕೇಸ್ನಲ್ಲಿ ನಾನು ಜೈಲಿಗೆ ಹೋಗಬೇಕಾಗುತ್ತಿತ್ತು! ಆಕ್ರೋಶದಿಂದ ಕುದಿಯುತ್ತಿದ್ದ ರಾಮಕೃಷ್ಣಯ್ಯರನ್ನು ಸಮಾಧಾನ ಮಾಡಿದೆವು.
ಹೀಗೆ ಆ್ಯಸಿಡ್ ರಾಜಾನನ್ನು ಸೆರೆ ಹಿಡಿಯಲು ನಾವು ಕ್ರಮಿಸಿದ ಹಾದಿ ರೋಚಕ. ಆತನನ್ನು ಬಂಧಿಸಿದ್ದಕ್ಕಾಗಿ 1992ರಲ್ಲಿ ನನಗೆ ಮುಖ್ಯಮಂತ್ರಿಯವರ ಚಿನ್ನದ ಪದಕ ಲಭಿಸಿತು. ಆತನಿಗೆ 5 ವರ್ಷ ಕಠಿಣ ಶಿಕ್ಷಯಾಯಿತು. ಜೈಲಿನಿಂದ ಹೊರ ಬಂದ ಬಳಿಕ ಆತ ಮತ್ತೊಬ್ಬ ಎಸ್ಐ ಮೇಲೆ ಆ್ಯಸಿಡ್ ಎರಚಿದ. ಈ ಪ್ರಕರಣದಲ್ಲಿ ಇನ್ನೂ ಎರಡು ವರ್ಷ ಶಿಕ್ಷೆಯಾಗಿ ಈಗ ಬಿಡುಗಡೆಯಾಗಿದ್ದಾನೆ. ಆತನೇನೋ ಬಿಡುಗಡೆಯಾಗಿ ಇನ್ನೆಲ್ಲೋ ಪಾತಕ ಕೃತ್ಯಕ್ಕೆ ಇಳಿದಿರಬಹುದು ಅಥವಾ ಸಭ್ಯ ಜೀವನ ನಡೆಸುತ್ತಿರಬಹುದು. ಆದರೆ ಆ್ಯಸಿಡ್ ದಾಳಿಗೊಳಗಾದವರು ಜೀವನಪೂರ್ತಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್ ಇನ್ಸ್ಪೆಕ್ಟರ್ ಆಗಿದ್ದ ವಿ.ಎಸ್. ಡಿಸೋಜಾ ಅವರು ಆ್ಯಸಿಡ್ ರಾಜಾನನ್ನು ಮತ್ತೊಮ್ಮೆ ಸೆರೆ ಹಿಡಿದಿದ್ದರು. ಆತನ ಮನೆಯಲ್ಲಿ 5 ಲೀಟರ್ ಆ್ಯಸಿಡ್ ಸಿಕ್ಕಿತ್ತು. ಇದ್ಯಾಕೆ ಎಂದು ಡಿಸೋಜಾ ಕೇಳಿದಾಗ ರಾಜಾ ಹೇಳಿದ್ದು ಅಶೋಕ್ಕುಮಾರ್ರಿಂದಾಗಿ ನಾನು 5 ವರ್ಷ ಜೈಲು ಪಾಲಾದೆ. ಹಾಗಾಗಿ ಅವರ ಮೇಲೆ 5 ಲೀಟರ್ ಆ್ಯಸಿಡ್ ಸುರಿಯಲು ಇದನ್ನು ತಂದಿಟ್ಟುಕೊಂಡಿದ್ದೆ!
Discussion about this post