ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಗರ್ಭಿಣಿ ಮಹಿಳೆಯರು ಗರ್ಭಿಣಿ ಅವಧಿಯಲ್ಲಿ ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗಬಾರದು. ಗಂಡಾಂತರಕಾರಿ ಚಿಹ್ನೆಗಳಿದ್ದಲ್ಲಿ ಹೆರಿಗೆಯ 3 ದಿನ ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಮೂಲಕ ವೈದ್ಯರ ನಿಗಾವಣೆಯಲ್ಲಿದ್ದುಕೊಂಡು ಸರಳ ಹೆರಿಗೆಗೆ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಬಳ್ಳಾರಿ ತಾಲ್ಲೂಕಿನ ಹಡ್ಲಿಗಿ ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಟುಂಬಗಳು ಹೆಚ್ಚು ವಾಸಿಸುವ ಸ್ಥಳಗಳಿಗೆ ತೆರಳಿ ಕಾಲುಬಾವು ಕಂಡುಬಂದ ತೊಡಕಿನ ಗರ್ಭಿಣಿಯನ್ನು ಗುರ್ತಿಸಿ ತಾಯಿ ಕಾರ್ಡ್ ಇತರೆ ದಾಖಲಾತಿ ಪರಿಶೀಲಿಸಿ ಕುಟುಂಬದ ಸದಸ್ಯರೊಂದಿಗೆ ಅವರು ಮಾತನಾಡಿದರು.
ಗರ್ಭಿಣಿ ಮಹಿಳೆಯರು ತನ್ನ ಕುಟುಂಬದ ಆಗುಹೋಗುಗಳನ್ನು ಶಾಂತಚಿತ್ತದಿಂದ ನಿಭಾಯಿಸುವ ಜೊತೆ ಜೊತೆಗೆ ಕುಟುಂಬದ ಸದಸ್ಯರು ದಿನತುಂಬುವ ಹಂತದಲ್ಲಿರುವ ಗರ್ಭಿಣಿಯರಿಗೆ ಯಾವುದೇ ಒತ್ತಡ ಅಥವಾ ಒತ್ತಡದ ಪರಿಸ್ಥಿತಿ ತರದಂತೆ ಸರಳ ಹೆರಿಗೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಗರ್ಭಿಣಿಯಲ್ಲಿ ಅಪಾಯಕಾರಿ ಚಿಹ್ನೆಗಳು ಕಂಡುಬಂದಲ್ಲಿ ಹೆರಿಗೆಯ 3 ದಿನ ಪೂರ್ವದಲ್ಲಿ ಆಸ್ಪತ್ರೆಗೆ ದಾಖಲಿಸುವ ಜೊತೆಗೆ ತಮ್ಮ ಮನೆ ಮಗಳು ಅಥವಾ ತಮ್ಮ ಮನೆಯ ಸೊಸೆ ಸಂತಸದಿಂದ ನವಜಾತ ಶಿಶುವಿನೊಂದಿಗೆ ಮನೆಗೆ ತೆರಳುವ ಅವಕಾಶಕ್ಕೆ ಕೈಗೂಡಿಸಬೇಕು ಎಂದು ವಿನಂತಿಸಿದರು.
ಚೊಚ್ಚಲು ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿ-ಜವಳಿ ಗರ್ಭಿಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್ ಮುಂತಾದ ಕಾರಣಗಳಿದ್ದರೆ ಆಯಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕ ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಬೇಕು ಎಂದರು.
ಹೆರಿಗೆ ಅವಧಿಯಲ್ಲಿ ಕಂಡು ಬರಬಹುದಾದ ಸಂಭವನಿಯ ತೊಂದರೆಗಳನ್ನು ವೈದ್ಯರ ನಿಗಾವಣೆ ಮೂಲಕ ಗುರ್ತಿಸಿ ಸುರಕ್ಷಿತ ಹೆರಿಗೆ ಕೈಗೊಳ್ಳಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಗರ್ಭಿಣಿ ಅವಧಿಯಲ್ಲಿ ಮಹಿಳೆಗೆ ಪೌಷ್ಟಿಕ ಆಹಾರ ಒದಗಿಸುವ ವ್ಯವಸ್ಥೆ ಸಹ ಕಲ್ಪಿಸಲಾಗುವುದು. ಗರ್ಭಿಣಿಯ ಪಾಲಕರು ಇದರ ಸದುಪಯೋಗ ಪಡೆದು ತಾಯಿ ಮಗುವಿನ ಆರೈಕೆಗೆ ಪೂರಕವಾಗಬೇಕು ಎಂದರು.
ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಕ್ಷೇತ್ರ ಮಟ್ಟದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆ (ಐಎಫ್ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ) ಪಡೆಯಬೇಕು. ಸುಧಾರಣೆಯಾಗದಿದ್ದಲ್ಲಿ ತಪ್ಪದೇ ತಜ್ಞರ ಬಳಿ ಹೋಗಬೇಕು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸುವುದು. ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಗಾಳಿ ಸುದ್ದಿಗಳಿಗೆ ಕಿವಿಗೊಟ್ಟು ಕಬ್ಬಿಣಾಂಶ ಮಾತ್ರೆ ನುಂಗಿದರೆ, ಭ್ರೂಣ ದಪ್ಪವಾಗುತ್ತದೆ, ಕಪ್ಪು ಬಣ್ಣದ ಮಗು ಹುಟ್ಟುತ್ತದೆ ಎಂಬ ತಪ್ಪು ನಂಬಿಕೆ ನಂಬಬಾರದು ಎಂದು ತಿಳಿಸಿದರು.
ವೈದ್ಯರ ಸಲಹೆಯಂತೆ ಉಚಿತವಾಗಿ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಟ 180 ಮಾತ್ರೆ ಮತ್ತು ಒಂದು ವೇಳೆ ರಕ್ತಹೀನತೆಯ ಪ್ರಮಾಣ ತೀವ್ರವಾಗಿದ್ದಲ್ಲಿ ದಿನಕ್ಕೆ 2 ರಂತೆ 360 ಮಾತ್ರೆಗಳನ್ನು 6 ತಿಂಗಳ ಅವಧಿಯಲ್ಲಿ ಸೇವಿಸುವಂತೆ ಇದರ ಜೊತೆಯಲ್ಲಿ ದೈಹಿಕವಾಗಿ ಸದೃಢವಾಗಿರಲು ಕ್ಯಾಲ್ಸಿಯಮ್ ಮಾತ್ರೆಗಳನ್ನು ಸಹ ನುಂಗುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಆಶಾಕಾರ್ಯಕರ್ತೆಯರಾದ ಗಂಗಮ್ಮ, ಶಶಿಕಲಾ, ರತ್ನಮ್ಮ ಸೇರಿದಂತೆ ಸಿಬ್ಬಂದಿಯವರು ತಾಯಂದಿರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post