ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಪ್ತಸ್ವರ ಸಂಗೀತ ಸಭಾದಿಂದ ಮಾ. 9ರಂದು ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಗೀತ ಸಭಾದ ಗೌರವಾಧ್ಯಕ್ಷ ಭಾಸ್ಕರ್ ಜಿ. ಕಾಂತ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಪ್ತಸ್ವರ ಸಂಗೀತ ಸಭಾ ಕಳೆದ ಹಲವು ವರ್ಷಗಳಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಈ ಬಾರಿಯೂ ಕೂಡ ಕೀರ್ತಿಶೇಷ ಪಂ. ಮಾಧವಗುಡಿ ಇವರ ಸುಪುತ್ರರಾದ ವಿಶ್ವಪ್ರಸಿದ್ಧ ಪ್ರಸನ್ನ ಮಾಧವಗುಡಿ ಅವರು ಗಾಯನ ನಡೆಸಿಕೊಡಲಿದ್ದು, ತುಕಾರಾಂ ರಂಗಧೋಳ್ ತಬಲಾ, ರೇಖಾ ಅರುಣ್ ಹಂಪಿಹೊಳಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಈ ಸಂಗೀತ ಕಾರ್ಯಕ್ರಮದಲ್ಲಿ ಭಾವಗೀತೆ, ಭಕ್ತಿಗೀತೆ ಮತ್ತು ದಾಸರ ಪದಗಳ ಗಾಯನ ನಡೆಯಲಿದೆ ಎಂದರು.
ಪ್ರಸನ್ನ ಮಾಧವಗುಡಿಯವರು ನಿರಂತರ 30 ಗಂಟೆಗಳ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಡುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಸಾವರ್ಕರ್ ಪ್ರಶಸ್ತಿ, ವಿಷ್ಣು ದಿಗಂಬರ ಫಲುಸ್ಕರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದೇಶ ವಿದೇಶಗಳಲ್ಲಿ ನೂರಾರು ಸಂಗೀತ ಕಚೇರಿ ನೀಡಿ ಹಿಂದೂಸ್ತಾನಿ ಸಂಗೀತ ರಸಿಕರ ಹೃದಯವನ್ನು ಗೆದ್ದಿದ್ದಾರೆ. ಇವರು ನಮ್ಮ ಊರಿನಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆಜೆ ಕುಮಾರಶಾಸ್ತಿç, ಅಚ್ಯುತರಾವ್, ದೇವಿಕುಮಾರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















