ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ಕಾಂಗ್ರೆಸ್ ಸರ್ಕಾರ ಧರ್ಮ, ದೇಶ ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಘಟನೆಗೆ ಕಾರಣರಾದ ಮುಸ್ಲಿಂ ಗೂಂಡಾಗಳ ಮೇಲಿನ ಕೇಸ್ ಗಳನ್ನು ವಾಪಸ್ ತೆಗೆದುಕೊಳ್ಳಲಾಗಿತ್ತು. ಇದೀಗ ಹೈಕೋರ್ಟ್ ಈ ರೀತಿ ವಾಪಸ್ ತೆಗೆದುಕೊಂಡಿರುವ ಸಚಿವ ಸಂಪುಟದ ತೀರ್ಮಾನ ಸರಿಯಲ್ಲ ಎಂದು ಛೀಮಾರಿ ಹಾಕಿದೆ. ಇನ್ನಾದರೂ ಕಾಂಗ್ರೆಸ್ ಸರ್ಕಾರ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದಿದ್ದರೆ ಜನರೇ ಸರ್ಕಾರದ ವಿರುದ್ಧ ದಂಗೆಯೇಳುವ ಕಾಲ ದೂರವಿಲ್ಲ ಎಂದರು.
ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಪೊಲೀಸ್ ಅಧಿಕಾರಿಗಳ ಮೇಲೆಯೇ ಹಲ್ಲೆ ಮಾಡಿದಂತಹ ಮುಸ್ಲಿಂ ಗೂಂಡಾಗಳ ಪರ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿರುವುದೇ ತಪ್ಪು. ಸಚಿವ ಸಂಪುಟ ಸಭೆ ಎಂದರೆ ಮಕ್ಕಳು ಗೋಲಿ ಆಟವಾಡುವ ಜಾಗವಲ್ಲ. ಈಗ ಹೈಕೋರ್ಟ್ ಈ ತೀರ್ಮಾನದ ವಿರುದ್ಧ ಕಾಂಗ್ರೆಸ್ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಇದು ಮುಸ್ಲಿಂ ಗೂಂಡಾಗಳನ್ನು ರಕ್ಷಿಸುವ ತೀರ್ಮಾನವಾಗಿದೆ. ಅಲ್ಲದೇ, ಸಂವಿಧಾನಬಾಹಿರ ಕೂಡ. ಇನ್ನಾದರೂ ಕಾಂಗ್ರೆಸ್ ಸರ್ಕಾರ ಪಾಠ ಕಲಿಯಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ಯುವಕನ ಕೊಲೆಯಾಗಿದೆ. ಇದು ತಪ್ಪು. ಇದನ್ನು ಯಾರೂ ಒಪ್ಪುವುದಿಲ್ಲ. ಆದರೆ, ಈ ಹಿಂದೆ ಹಿಂದೂಗಳ ಕೊಲೆಗಳು ನಡೆದವಲ್ಲ, ಆಗ ಹೋರಾಟ ಮಾಡಿದವರೆಲ್ಲ ಎಲ್ಲಿ ಹೋಗಿದ್ದರು? ಮುಸ್ಲಿಂ ಮುಖಂಡರು ಈಗ ತಾವು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ಕೊಡುತ್ತೇವೆ ಎಂದಮೇಲೆ ಸರ್ಕಾರಕ್ಕೆ ಬುದ್ದಿ ಬರುತ್ತದೆಯೇ? ಹಿಂದೂಗಳ ಹತ್ಯೆಯಾದಾಗ ಇವರೆಲ್ಲಾ ಎಲ್ಲಿ ಹೋಗಿದ್ದರು? ಇದೆಲ್ಲಾ ಬಹಳ ದಿನ ಉಳಿಯುವುದಿಲ್ಲ. ಕಾನೂನು ಸಚಿವರ ಹೇಳಿಕೆಗಳು ಕೂಡ ಬಾಲಿಶ ಹೇಳಿಕೆಯಾಗಿದೆ ಎಂದರು.
ರಾಜ್ಯ ಸರ್ಕಾರ ಈಗ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮುವಾದ ತಡೆಗೆ ವಿಶೇಷ ಪೊಲೀಸ್ ಪಡೆ ರಚಿಸುತ್ತಿದೆ. ಇದಕ್ಕಾಗಿ ನಕ್ಸಲ್ ನಿಗ್ರಹ ಪಡೆಯನ್ನು ನಿಯೋಜಿಸಲಾಗುತ್ತಿದೆ. ಬಿ.ಕೆ. ಹರಿಪ್ರಸಾದ್ ಅವರನ್ನು ದಕ್ಷಿಣ ಕನ್ನಡಕ್ಕೆ ಕಳಿಸುತ್ತಾರಂತೆ. ಅಲ್ಲಿನ ಪರಿಸ್ಥಿತಿ ಅರಿಯಲು ಅವರು ಮುಸ್ಲಿಂ ಪರ ಇರುವವರು. ತೋಳದ ಕೈಗೆ ಕುರಿಯನ್ನು ಕೊಟ್ಟ ಹಾಗೇ ಆಗುತ್ತದೆ ಅಷ್ಟೇ. ಕೋಮುವಾದಗಳು ಕಾಂಗ್ರೆಸ್ ಕಚೇರಿಗಳಿಂದಲೇ ಹುಟ್ಟುತ್ತವೆ ಎಂದರು.
ಶಿವಮೊಗ್ಗದಲ್ಲಿಯೂ ಕೂಡ ಮುಸ್ಲಿಂ ಗೂಂಡಾಗಳ ಹಾವಳಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಗಿದೆ. ಇದು ತೀರಾ ಅತಿಯಾದ ನಡವಳಿಕೆ. ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿಯನ್ನು ಚುಡಾಯಿಸುತ್ತಿದ್ದರು ಎಂಬ ಕಾರಣಕ್ಕೆ ಚುಡಾಯಿಸುತ್ತಿದ್ದವರಿಗೆ ಬುದ್ಧಿ ಮಾತು ಹೇಳಿದ್ದಕ್ಕೆ ಈ ಹಲ್ಲೆ ನಡೆದಿದೆ. ಇಂತಹ ಹಲ್ಲೆಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲವೇ? ಪೊಲೀಸರು ಏನು ಮಾಡುತ್ತಾರೆ? ಸರ್ಕಾರವೇ ಮುಸ್ಲಿಮರ ಪರವಾಗಿರುವಾಗ ಕ್ರಮ ಹೇಗೆ ತೆಗೆದುಕೊಳ್ಳುತ್ತಾರೆ? ಕೂಡಲೇ ಹಲ್ಲೆ ಮಾಡಿದ ಎಲ್ಲಾ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದಲ್ಲಿ ಈಗ ಗೊಂದಲಗಳು ಆರಂಭವಾಗಿವೆ. ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಹಾಗೂ ಡಿಸಿಎಂ ಮಧ್ಯೆ ಭಿನ್ನಾಭಿಪ್ರಾಯಗಳು ಬಯಲಾಗಿವೆ. ಇದು ಕಾಂಗ್ರೆಸ್ ಪತನದ ಪ್ರಥಮ ಹೆಜ್ಜೆಯಾಗಿದೆ. ಅಧಿಕಾರಿಗಳ ವರ್ಗಾಣೆ ಸಿಎಂ ಅವರದೇ ಪರಮಾಧಿಕಾರ ಎನ್ನುವುದನ್ನು ಡಿಸಿಎಂ ಪ್ರಶ್ನೆ ಮಾಡಿದ್ದಾರೆ. ಇವರು ಮುಖ್ಯಮಂತ್ರಿ ಆಗುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಆಗಲೂ ಕೂಡ ಇದೇ ಮಾತನ್ನು ಹೇಳುತ್ತಾರಾ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮೋಹನ್ ಕುಮಾರ್ ಜಾಧವ್, ಲಕ್ಷ್ಮಿ ಶಂಕರನಾಯ್ಕ್, ಆರತಿ ಆ.ಮ. ಪ್ರಕಾಶ್, ಮಹೇಶ್ ಕುಮಾರ್, ಶಂಕರ್, ಕುಬೇರಪ್ಪ, ಸಕ್ರಾನಾಯ್ಕ್, ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post