ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಿಳೆ ಸ್ವತಂತ್ರವಾಗಿ ಆರ್ಥಿಕವಾಗಿ ಸಬಲರಾದಾಗ ಅವಳಿಗೆ ಗೌರವ ಹೆಚ್ಚಾಗುತ್ತದೆ. ಇದಕ್ಕೆ ಕುಟುಂಬದ ಸಹಕಾರ ಅತ್ಯಗತ್ಯ.ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ತಿಳಿಸಿದ್ದಾರೆ.
ನಗರದ ನೆಹರು ಕ್ರೀಡಾಂಗಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರ 77ನೇ ಜನ್ಮದಿನಾಚರಣೆ ಅಂಗವಾಗಿ ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್ ನ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರುಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾವಿರಕ್ಕೂ ಹೆಚ್ಚು ಮಹಿಳೆಯರು ಇಂದಿನ ಕ್ರೀಡಾಕೂಟದಲ್ಲಿ ಉತ್ಸಾಹ ಭರಿತರಾಗಿ ಪಾಲ್ಗೊಳ್ಳುತ್ತಿರುವುದು ಕಂಡು ತುಂಬಾ ಸಂತೋಷವಾಗಿದೆ. ಎಲ್ಲರೂ ಉತ್ಸಾಹ ಭರಿತರಾಗಿ ಹುಡುಗಿಯರಂತೆ ನಕ್ಕು ನಲಿದು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮಹಿಳೆ ಸದಾ ಮನೆಯ ಒಳಗೆ ಕುಟುಂಬದ ನಿರ್ವಹಣೆ ಹಾಗೂ ಮನೆ ಕೆಲಸದಲ್ಲಿ ತೊಡಗುತ್ತಾ ತನ್ನ ಸರ್ವಸ್ವವನ್ನು ದಾರೆ ಎರಡು ತನ್ನ ಸುತ್ತಲೂ ನನಗಿನ್ನು ಏನು ಆಗುವುದಿಲ್ಲ ಎಂದು ಗೋಡೆ ನಿರ್ಮಿಸಿ ಬದುಕುತ್ತಿದ್ದಾಳೆ. ಆದರೆ ಮಹಿಳೆ ಆ ಭಾವನೆಯಿಂದ ಹೊರಗೆ ಬಂದು ತಾನು ಎಲ್ಲರಂತೆ ಸಶಕ್ತಳು ಹಾಗೂ ಮನಸ್ಸು ಮಾಡಿದರೆ ಏನು ಬೇಕಾದರೆ ಸಾಧಿಸಬಲ್ಲೆ ಎಂಬ ಛಲದಿಂದ ತನ್ನ ಸ್ವಂತ ಕಾಲ ಮೇಲೆ ತಾನು ನಿಲ್ಲಲು ಪ್ರಯತ್ನಿಸಿ ತನ್ನ ಕುಟುಂಬಕ್ಕೂ ಆರ್ಥಿಕ ನೆರವು ನೀಡುವ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಅವಳ ಗೌರವ ಹೆಚ್ಚಾಗುತ್ತದೆ ಎಂದರು.
ಮನೆಯಲ್ಲೇ ಸದಾಕಾಲ ಕುಟುಂಬದ ಬಗ್ಗೆ ಯೋಚಿಸುತ್ತ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ. ಸ್ವ ಉದ್ಯೋಗದ ಬಗ್ಗೆ ಒತ್ತು ನೀಡಿ ಅವಕಾಶ ಸಿಕ್ಕಾಗ ಬಿಡಬೇಡಿ. ಮಹಿಳೆ ಒಂದು ಕುಟುಂಬದ ಆಸ್ತಿಯಾಗಿದ್ದು ನೀವು ಯಾವತ್ತೂ ದುರ್ಬಲರಲ್ಲ ಎಂಬುದು ನಿಮ್ಮ ಮನಸ್ಸಿಗೆ ಬರಲಿ ಎಂದರು.
ಹಿರಿಯ ನಾಯಕರಾದ ಕೆ ಎಸ್ ಈಶ್ವರಪ್ಪನವರು ನನಗೆ ಅನೇಕ ಬಾರಿ ಮಾರ್ಗದರ್ಶನ ನೀಡಿದ್ದಾರೆ ಅವರ ಈ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದರು.
ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಂಕ್ ಪಡೆದ ಮೇಘನ ಮಾತನಾಡಿ, ಈಶ್ವರಪ್ಪನವರು ಸದಾಕಾಲ ಹೆಣ್ಣು ಮಕ್ಕಳಿಗೆ ಬೆನ್ನೆಲುಬಾಗಿ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಯುವಕರಿಗೂ ಮುಜುಗರ ಆಗುವ ರೀತಿಯಲ್ಲಿ 77ನೇ ವಯಸ್ಸಿನಲ್ಲೂ ಅನೇಕ ಕಾರ್ಯ ಚಟುವಟಿಕೆಗಳ ಮೂಲಕ ಸಮಾಜ ಸೇವೆ ಮಾಡುತ್ತಾ ಇರುವುದು ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಆಯುಕ್ತರಾದ ಕವಿತಾ ಯೋಗಪ್ಪನವರ್ ಯುಪಿಎಸ್ಸಿ ರಾಂಕ್ ವಿಜೇತ ಮೇಘನಾ ಮತ್ತು ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಗೌತಮಿ ಗೌಡ ಅವರನ್ನು ಸನ್ಮಾನಿಸಲಾಯಿತು. ನೂರಾರು ಮಹಿಳೆಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದರು. ಮುಖ್ಯ ಅತಿಥಿಗಳು ಬುಕ್ ಬ್ಯಾಲೆನ್ಸ್ ಕ್ರೀಡೆಯಲ್ಲಿ ಸಾಂಕೇತಿಕವಾಗಿ ಭಾಗವಹಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ. ಕೆ ಈ ಕಾಂತೇಶ್. ಮಾಜಿ ಮೇಯರ್ ಸುವರ್ಣ ಶಂಕರ್. ಮಾಜಿ ಉಪಮೇಯರ ಲಕ್ಷ್ಮಿ ಶಂಕರ್ ನಾಯಕ್. ಆರತಿ ಆ.ಮಾ. ಪ್ರಕಾಶ್, ಅನಿತಾ ಗೌಡ ಸೇರಿದಂತೆ ಮಾರಿಕಾಂಬ ಮೈಕ್ರೋ ಫೈನಾನ್ಸಿನ ಸ್ವಸಹಾಯ ಸಹಕಾರಿ ಸಂಘಗಳ ಸದಸ್ಯರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post