ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂವಿನಕೋಣೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕ್ನಲ್ಲಿ ಕೀಟನಾಶಕ #Pesticide to Water Tank ಅಂಶ ಬೆರೆಸಿರುವ ಶಂಕೆ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶಾಲೆಯ ಮುಖ್ಯಶಿಕ್ಷಕ ರವಿಕುಮಾರ್ ನೀಡಿದ ದೂರನ್ನು ಆಧರಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಹೊಸನಗರ ಠಾಣೆ ಪೊಲೀಸರು, ಶುಕ್ರವಾರ ಶಾಲೆಗೆ ತೆರಳಿ ಶಿಕ್ಷಕರು, ವಿದ್ಯಾರ್ಥಿಗಳು, ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ಪ್ರಯೋಗಾಲಯಕ್ಕೆ ನೀರಿನ ಮಾದರಿ:
‘ಶಾಲೆಯಲ್ಲಿ ಎರಡು ನೀರಿನ ಟ್ಯಾಂಕ್ ಇವೆ. ಅದರಲ್ಲಿ ಅಡುಗೆ ಮನೆಗೆ ನೇರ ಸಂಪರ್ಕ ಇರುವ ಟ್ಯಾಂಕ್ನಲ್ಲಿನ ನೀರಿನಲ್ಲಿ ಗುರುವಾರ ಕೀಟನಾಶಕದ ವಾಸನೆ ಬಂದಿತ್ತು. ಆರೋಗ್ಯ ಇಲಾಖೆ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿದೆ’ ಎಂದು ಡಿಡಿಪಿಐ ಎಸ್.ಆರ್.ಮಂಜುನಾಥ್ ತಿಳಿಸಿದರು.
‘ಮತ್ತೊಂದು ಟ್ಯಾಂಕ್ ಶಾಲೆಯ ಕೈತೋಟಕ್ಕೆ ಸಂಪರ್ಕ ಹೊಂದಿದೆ. ನೀರು ಕುಡಿದಿದ್ದ 18 ವಿದ್ಯಾರ್ಥಿಗಳನ್ನು ಹೊಸನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಸಂಜೆಯವರೆಗೂ ಎಲ್ಲರನ್ನೂ ನಿಗಾದಲ್ಲಿ ಇಡಲಾಗಿತ್ತು. ಎಲ್ಲರೂ ಆರೋಗ್ಯವಾಗಿದ್ದಾರೆ’ ಎಂದು ವೈದ್ಯರು ತಿಳಿಸಿದ್ದಾಗಿ ಅವರು ಮಾಹಿತಿ ನೀಡಿದರು.
ಘಟನೆ ಹಿನ್ನೆಲೆಯಲ್ಲಿ ಶಾಲೆಗೆ ಎರಡು ದಿನ ರಜೆ ಕೊಡಲಾಗಿದೆ.
ಚುರುಕುಗೊಂಡ ತನಿಖೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೂವಿನಕೋಣಿ ಶಾಲೆಯಲ್ಲಿ ನೀರಿನ ತೊಟ್ಟಿಗೆ ವಿಷ ಬೆರೆಸಿದ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಅದೇಶ ಬೆನ್ನಲ್ಲೇ ತನಿಖೆ ಚುರುಕುಗೊಂಡಿದೆ.
ಪ್ರಕರಣ ಭೇದಿಸಲು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ತೀರ್ಥಹಳ್ಳಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದ್ದು, ಮೂರು ತಂಡಗಳಳನ್ನು ರಚಿಸಲಾಗಿದೆ.
ತನಿಖೆಗಾಗಿ ಒಟ್ಟು 18 ಪೊಲೀಸರ ನಿಯೋಜನೆ ಮಾಡಿದ್ದಾರೆ. ಹೂವಿನಕೋಣೆ ಗ್ರಾಮದ ಸುತ್ತಮುಲ್ಲಿ ದೊರೆಯುವ ಮಾಹಿತಿ ಸಂಗ್ರಹಣೆಗಾಗಿ ಎಂಟು ಸಿಬ್ಬಂದಿ, ಅನುಮಾನಸ್ಪದ ವ್ಯಕ್ತಿಗಳ ವಿಚಾರಣೆಗಾಗಿ ಐದು ಹಾಗೂ ಸಿಸಿ ಟಿವಿ ಪರಿಶೀಲನೆಗೆ ಐದು ಪೊಲೀಸರನ್ನು ನಿಯೋಜಿಸಲಾಗಿದೆ.
ಟೆಕ್ನಿಕಲ್ ಎವಿಡೆನ್ಸ್ ಕಲೆಹಾಲು ಮುಂದಾದ ಪೊಲೀಸರು ಟವರ್ ಡಂಪ್ ಮೂಲಕ ತನಿಖೆ ಆರಂಭಿಸಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















