ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜು ಹುಲಿ ದತ್ತು ಪಡೆಯುವ ಮೂಲಕ ಹುಲಿ ದತ್ತು ಯೋಜನೆಗೆ ಜೊತೆಯಾಗಿದ್ದಾರೆ.
ವಿದ್ಯಾರ್ಥಿಗಳು ಸಿಬ್ಬಂದಿ ವರ್ಗ ಕೂಡಿ ವಿದ್ಯಾರ್ಥಿ ಕಲ್ಯಾಣ ಸಮಿತಿಯ ಮೂಲಕ ನಗರದ ಹುಲಿ ಸಿಂಹಧಾಮದಲ್ಲಿರುವ ಒಂದು ಹುಲಿಯನ್ನು ಒಂದು ತಿಂಗಳ ಅವಧಿಗೆ ಮತ್ತು ನವಿಲನ್ನು ಒಂದು ವರ್ಷದ ಅವಧಿಯ ನಿರ್ವಹಣೆ, ಆಹಾರ ಮತ್ತು ಆರೈಕೆಗಾಗಿ ನಿರ್ದಿಷ್ಟ ಮೊತ್ತವನ್ನು ಕೊಡುಗೆಯಾಗಿ ನೀಡಿದ್ದಾರೆ.
ಗುರುವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದ ಹುಲಿ ಸಿಂಹಧಾಮ ಅರಣ್ಯ ಶ್ರೇಣಿ ನಿರ್ದೇಶಕರಾದ ಬಿ.ಆರ್. ಅಮರಕ್ಷರ್ ಮಾತನಾಡಿ, ಪರಿಸರ ಮತ್ತು ಮಾನವನ ನಡುವೆ ಅವಿನಾಭಾವ ಸಂಬಂಧವಿದೆ. ಪರಿಸರವು ಮಾನವನ ಅವಿಭಾಜ್ಯ ಅಂಗವಾಗಿದ್ದು, ಮನುಷ್ಯನಷ್ಟೆ ಪರಿಸರದಲ್ಲಿ ಬದುಕುವ ಹಕ್ಕನ್ನು ಪ್ರಾಣಿ ಪಕ್ಷಿಗಳು ಹೊಂದಿದೆ. ಪ್ರಾಣಿಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ನಾಗರಿಕರನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವುದೆ ಈ ದತ್ತು ಯೋಜನೆಯ ಮಹತ್ವದ ಉದ್ದೇಶವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡದ ಹೊರತಾಗಿ ಮುಂದಿನ ದಿನಗಳಲ್ಲಿ ಪ್ರಾಣಿಗಳನ್ನು ಕೇವಲ ಚಿತ್ರ ಪಟಗಳಲ್ಲಿ ನೋಡಬೇಕಾಗುತ್ತದೆ. ಅಂತಹ ಸನ್ನಿವೇಶ ಇಡೀ ಮನುಕುಲಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಶಿಕ್ಷಣ ಅಧಿಕಾರಿ ಸಿಂಚನ, ಸಾರ್ವಜನಿಕ ಸಂಪರ್ಕಾಧಿಕಾರಿ ಐಜಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















