ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂಗ್ಲೀಷ್ ಕೇವಲ ಬೋಧನೆಯ ಪಠ್ಯವಾಗಬಾರದು ಅದು ಜನಲೋಕವನ್ನು ಒಳಗೊಳ್ಳಬೇಕು ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ #Prof. Sharath Ananthamurthy ಹೇಳಿದರು.
ಅವರು ಇಂದು ಸಹ್ಯಾದ್ರಿ ಮತ್ತು ವಾಣಿಜ್ಯ ನಿರ್ವಹಣಾ ಕಾಲೇಜು ಇಂಗ್ಲೀಷ್ ವಿಭಾಗ, ಇಂಗ್ಲೀಷ್ ಅಧ್ಯಾಪಕರ ವೇದಿಕೆ ಇಂಗ್ಲೀಷ್ ಅಧ್ಯಯನ ಮಂಡಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಹೊಸ ಇಂಗ್ಲೀಷ್ ಪಠ್ಯಗಳ ಅನ್ವಯ (ಎಸ್ಇ ಪಿ)ಒಂದು ದಿನದ ಇಂಗ್ಲೀಷ್ ಪಠ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಂಗ್ಲೀಷ್ ಭಾಷೆ ಇಂದು ಅಗತ್ಯ ಮತ್ತು ಅನಿವಾರ್ಯವಾಗಿದೆ. ನನ್ನಂತಹವರಿಗೆ ಇಂಗ್ಲೀಷ್ ಪಠ್ಯಗಳು ಆಶ್ರಯತಾಣವಾಗಿದ್ದವು. ಪಾಶ್ಚಿಮಾತ್ಯದ ಹಲವು ವಿಷಯಗಳನ್ನು ವಿಸ್ತಾರವಾಗಿ ತಿಳಿದುಕೊಳ್ಳಲು ಇಂಗ್ಲೀಷ್ ಅನಿವಾರ್ಯವಾಗಿದೆ. ಸರಳವಾದ ಇಂಗ್ಲೀಷ್ನಲ್ಲಿ ಚಾಲ್ರ್ಸ್ ಡಾರ್ವಿನ್ ಬರೆದ ಜೀವಗಳ ವಿಕಾಸವಾದ ಪುಸ್ತಕವು ಇಡೀ ಜಗತ್ತಿನ ಗಮನವನ್ನು ಸೆಳೆದಿದ್ದನ್ನು ನಾವು ಉದಾಹರಿಸಬಹುದು ಎಂದರು.
ಜ್ಞಾನವನ್ನು ಬೇರೆ ಬೇರೆ ನೆಲೆಗಳಿಂದ ತಂದು ಪಠ್ಯಗಳನ್ನು ಕಟ್ಟಬೇಕಾಗಿದೆ. ಅದನ್ನು ಬಿಟ್ಟು ಕೇವಲ ಮಾರುಕಟ್ಟೆಯ ಅಗತ್ಯಗಳಿಗೆ ಬೇಕಾಗಿರುವ ಕೆಲವು ಕೌಶಲ್ಯಗಳನ್ನು ಪಠ್ಯಗಳು ಒಳಗೊಂಡರೆ ಅದು ದೊಡ್ಡ ಅಪಚಾರವಾಗುತ್ತದೆ. ಇಂದು ವಿವಿಧ ಜ್ಞಾನಪಠ್ಯಗಳನ್ನು ಒಂದಾಗಿ ಕೂಡಿಸಿ ಅಂತರ್ಪಠ್ಯಗಳನ್ನು ಕಟ್ಟಬೇಕಾಗಿದೆ. ಪಶ್ಚಿಮದ ಕ್ಯಾನನ್ಗಳನ್ನು ಮುರಿದು ಜಗತ್ತಿನ ವಿವಿಧ ಸಂವೇದನೆಗಳನ್ನು ಬೆಸೆಯಬೇಕು. ಇಂಗ್ಲೀಷನ್ನು ಹೆಚ್ಚು ಹೆಚ್ಚು ಪ್ರಜಾಪ್ರಭುತ್ವಗೊಳಿಸಬೇಕು. ಈ ನಿಟ್ಟಿನಲ್ಲಿ ಪುಠ್ಯಪುಸ್ತಕಗಳು ಬಹಳ ಮುಖ್ಯವಾಗುತ್ತವೆ. ಇಂಗ್ಲೀಷ್ ಸ್ವಾಗತದ ಭಾಷೆಯಾಗಿಯೇ ಕಲಿಯಬೇಕು ನಮ್ಮತನದ ಕನ್ನಡ ಇದ್ದೇ ಇರುತ್ತದೆ. ಆದರೆ ಜ್ಞಾನದ ವಿಸ್ತರಣೆ ಇಂಗ್ಲೀಷ್ನಿಂದ ಹೆಚ್ಚಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪಠ್ಯಪುಸ್ತಕಗಳ ವಿಮರ್ಶೆ ಮತ್ತು ಅದನ್ನು ಬೋಧಿಸುವ ಕ್ರಮದ ಬಗ್ಗೆ ಉಪನ್ಯಾಸಕರಿಗೆ ಮಾರ್ಗದರ್ಶನ ಅನಿವಾರ್ಯ. ಇಂತಹ ಕಾರ್ಯಾಗಾರಗಳು ಉಪನ್ಯಾಸಕರಿಗಲ್ಲದೆ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಅಧ್ಯಾಪಕರು ಬೋಧನೆಯ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಬೇಕು. ಪಾಠಗಳನ್ನು ಹೇಗೆ ಬೋಧಿಸಬೇಕು ಎನ್ನುವುದೇ ಈ ಕಾರ್ಯಾಗಾರದ ಉದ್ದೇಶವಾಗಿದೆ. ಬಹಳ ದೊಡ್ಡ ದೊಡ್ಡ ಪ್ರಾಧ್ಯಾಪಕರಿದ್ದ ಕಾಲದಲ್ಲೂ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದರು. ಆಗಿನ ಕಾಲದ ಚರ್ಚೆಯೇ ಇದೇ ಆಗಿತ್ತು. ಭಾಷೆಯ ತರಗತಿಗಳಲ್ಲಿ ಸಾಹಿತ್ಯವನ್ನು ಏಕೆ ಬೋಧಿಸಬೇಕು ಅನ್ನುವುದು ಆಗಿನ ಚರ್ಚೆ. ಈಗ ನಾವು ಉದ್ಯೋಗದ ಮಾರುಕಟ್ಟೆಗೆ ಅಗತ್ಯವಿರುವ ಸಿಬ್ಬಂದಿಯನ್ನು ತಯಾರು ಮಾಡುವುದು ಅನಿವಾರ್ಯವಾಗಿದೆ ಹಾಗಾಗಿ ಗಮನದಲ್ಲಿಟ್ಟುಕೊಂಡು ಪಠ್ಯವನ್ನು ರೂಪಿಸಲಾಗಿದೆ ಎಂದ ಅವರು, ವಸಾಹತುಶಾಹಿಗಳ ನೆರವಿನಿಂದ ಇಂಗ್ಲೀಷ್ ಭಾಷೆಯನ್ನು ಬಿಡಿಸುವುದು ಇಂದಿನ ತುರ್ತಾಗಿದೆ ಎಂದರು.
ಬೆಂಗಳೂರಿನ ನಿವೃತ್ತ ಪ್ರೊ. ಬಿ.ಎಸ್. ಶ್ರೀಧರ್ ಮಾತನಾಡಿ, ಪಠ್ಯಗಳು ತರಗತಿಗಳಲ್ಲಿ ಜೀವಂತಿಕೆ ಪಡೆಯಬೇಕು ಅನುಭವದ ಹಿನ್ನಲೆಯಿಂದ ಬಂದ ಉಪನ್ಯಾಸಕರು ಈ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಬೇಕಾಗಿರುವುದರಿಂದ ಅವರ ಜವಾಬ್ದಾರಿ ಹೆಚ್ಚಿದೆ. ಪಠ್ಯಗಳು ಸಂವಿಧಾನದ ಆಶಯಗಳನ್ನು ಹೊಂದಬೇಕು ಮತ್ತು ರಾಜಕಾರಣ ನುಸುಳಬಾರದು ಸಮಾನತೆ, ಸಹೋದರತೆಯ ಅಂಶಗಳು ಪಠ್ಯದಲ್ಲಿರಬೇಕು ಮತ್ತು ಯಾವುದೇ ಪಠ್ಯವಿರಲಿ ಅದನ್ನು ವರ್ತಮಾನಕ್ಕೆ ತಂದು ಅದರ ವಿಸ್ತಾರ ರೂಪವನ್ನು ಶಿಕ್ಷಕರು ಬೋಧಿಸಬೇಕು ಮತ್ತು ವಿದ್ಯಾರ್ಥಿಗಳು ಕೂಡ ಕೇವಲ ಪಠ್ಯವಿಷಯಕ್ಕೆ ಸೀಮಿತವಾಗದೆ ಅದರ ಆಚೆಗೂ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ಪ್ರಾಧ್ಯಾಪಕ ಡಾ. ಶಿವಲಿಂಗಮೂರ್ತಿ, ಇಂಗ್ಲೀಷ್ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ಡಾ. ಚನ್ನಪ್ಪ ಸಿ., ಐಕ್ಯೂಎಸಿ ಸಂಯೋಜಕಿ ಡಾ. ಸರಳ ಕೆ.ಎಸ್., ಪ್ರಾಧ್ಯಾಪಕರುಗಳಾದ ಡಾ. ಮೇಟಿಮಲ್ಲಿಕಾರ್ಜುನ, ಬಿ.ಎಲ್. ರಾಜು. ಮುಂತಾದವರಿದ್ದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಎಂ. ಪರಶುರಾಮ್ ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















