ಕಲ್ಪ ಮೀಡಿಯಾ ಹೌಸ್ | ಸಾಗರ |
ಇನ್ನೊಬ್ಬರ ಕಷ್ಟ ನೋಡಿ ಖುಷಿ ಪಡುವ ವರ್ಗ ಒಂದಾದರೆ ಇನ್ನೊಬ್ಬರಿಗೆ ತಾವೇ ಕಷ್ಟ ಕೊಟ್ಟು ಖುಷಿ ಪಡುವ ವರ್ಗ ಇನ್ನೊಂದು ಈ ಎರಡೂ ವರ್ಗದವರು ದುರ್ಜನರು ಎಂದು ಶ್ರೀರಾಮಚಂದ್ರಾಪುರಮಠದ #Shri Ramachandrapura Mutt ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು #Raghaveshwara Shri ಹೇಳಿದರು.
ಸಾಗರದ ಶ್ರೀರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ವಿಜಯದಶಮಿ ವಿಶೇಷದೊಂದಿಗೆ ನವರಾತ್ರ ನಮಸ್ಯಾದ 11 ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ನುಡಿದರು.

ಇನ್ನೊಬ್ಬರ ನೋವು ಯಾರಿಗೂ ಅರ್ಥವಾಗುವುದಿಲ್ಲ ಆದರೆ ತಮಗೆ ನೋವು ಬಂದಾಗ ಮಾತ್ರ ನೋವಿನ ವೇದನೆ ಅರ್ಥವಾಗಲಿದೆ, ಎಲ್ಲ ರೀತಿಯ ದುರ್ಜನರಿಗೂ ಅಂತಿಮವಾಗಿ ನೋವಿನ ಸ್ಥಿತಿ ಬಂದೇ ಬರಲಿದೆ ಎಂದ ಅವರು ಇನ್ನೊಬ್ಬರಿಗೆ ಕಷ್ಟ ಕೊಟ್ಟವರು ಯಾವುದೇ ಕಾರಣಕ್ಕೂ ಕೊನೆಯಲ್ಲಿ ನೋವು ಅನುಭವಿಸಲೇ ಬೇಕು ಅದೇ ರೀತಿ ಜಗಕ್ಕೆ ಕಂಟಕನಾಗಿ ಮೆರೆದ ಭಂಡಾಸುರನಿಗೆ ಇಂತಹದ್ದೆ ಪರಿಸ್ಥಿತಿ ದೇವಿಯಿಂದ ಎದುರಾಯಿತು ಎಂದರು.
ಇದಕ್ಕೂ ಮುನ್ನ ಬೆಳಗ್ಗೆ ವಿಜಯದಶಮಿ ಆಚರಣೆ,ನವಚಂಡಿಕಾ ಹವನ, ಶಮೀಪೂಜೆ ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ, ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆಯಿತು. ರಾತ್ರಿ ದುರ್ಗಾದೀಪ ನಮಸ್ಕಾರ, ಲಲಿತಾಮೂರ್ತಿ ವಿಸರ್ಜನೆ ಕಾರ್ಯಕ್ರಮ ನಡೆಯಿತು.

ವಿಜಯ ದಶಮಿಯ ಶುಭಾವಸರದಲ್ಲಿ ರಾಜ್ಯ ಹೊರರಾಜ್ಯ ವ್ಯಾಪ್ತಿಯಲ್ಲಿ ಶಿಷ್ಯ ಹಿತಕ್ಕಾಗಿ ಶ್ರೀಮಠದಿಂದ ಪ್ರತಿ ಶಿಷ್ಯಭಕ್ತರ ಮನೆಮನೆಗೆ ತೆರಳಿ ಪೂಜೆಕೈಗೊಳ್ಳಲಿರುವ ಸುವರ್ಣ ಪಾದುಕ ಸಂಚಾರಕ್ಕೆ ವಿಶೇಷ ರೀತಿಯಲ್ಲಿ ಚಾಲನೆ ನೀಡಲಾಯಿತು.
ಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ 108 ಶಂಖನಾದ ಹಾಗೂ 108 ಮುತ್ತಿನಾರತಿಯನ್ನು ಬೆಳಗಿ ಮಠದ ಶಾಸನತಂತ್ರದ ಪ್ರಮುಖರು ಮಹಾಮಂಡಲದ ಪ್ರಮುಖರ ಹೆಗಲಿಗೆ ಸಂಚಾರ ಪಾದುಕೆಯ ಪಲ್ಲಕ್ಕಿ ಹಸ್ತಾಂತರಿಸಿದರು.

ಇನ್ನು ನವರಾತ್ರ ನಮಸ್ಯಾ ಕಾರ್ಯಕ್ರಮಕ್ಕೆ ಗುರುವಾರ ರಾತ್ರಿ ವೈಭವದ ತೆರೆ ಬಿದ್ದಿದೆ. ಲಲಿತಾಮೂರ್ತಿಯನ್ನು ಮಂಗಲ ವಾದ್ಯಗಳ ಮೂಲಕ ಭವ್ಯವಾದ ಮೆರವಣಿಗೆಯಲ್ಲಿ ಹೊತ್ತು ತಂದು ಸಂಬ್ರಮದಿಂದ ಇಲ್ಲಿನ ಗಣಪತಿ ಕೆರೆಯಲ್ಲಿ ವಿಸರ್ಜಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post