ಕಲ್ಪ ಮೀಡಿಯಾ ಹೌಸ್ | ಉಡುಪಿ |
ಶ್ರೀಕೃಷ್ಣ ಮಠಕ್ಕೆ ಸಾಲು ಸಾಲು ಚಿತ್ರನಟ ನಟಿಯರು, ಕ್ರೀಡಾಪಟುಗಳು, ಸಂಘಟನೆಗಳ ಪ್ರಮುಖರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಇಂದು ದಕ್ಷಿಣ ಭಾರತದ ಖ್ಯಾತ ಹಿರಿಯ ಚಲನಚಿತ್ರ ನಟಿ ಜಯಪ್ರದಾ ಅವರು ಭೇಟಿ ನೀಡಿ, ಕೃಷ್ಣನ ದರ್ಶನ ಪಡೆದರು.
ಶ್ರೀಮಠಕ್ಕೆ ಆಗಮಿಸಿದ ಅವರು ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆನಂತರ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥರ ದರ್ಶನ ಪಡೆದು, ಆರ್ಶೀವಾದ ಪಡೆದರು. ಶ್ರೀಗಳಿಂದ ಕೋಟಿ ಗೀತಾ ಲೇಖನ ತಜ್ಞ ದೀಕ್ಷೆಯನ್ನು ಪಡೆದುಕೊಂಡರು.


ಇನ್ನು, ಅಂತಾರಾಷ್ಟೀಯ ಮಟ್ಟದಲ್ಲಿ ಖ್ಯಾತ ಪಡೆದ ಭಾರತದ ಟೆನ್ನಿಸ್ ಆಟಗಾರ್ತಿ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದ ಸೈನಾ ನೆಹ್ವಾಲ್ ಸಹ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು.
ನವಗ್ರಹ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದ ಅವರು, ಭಾವಪರವಶರಾದರು. ನಂತರ ಇವರೂ ಸಹ ಪರ್ಯಾಯ ಶ್ರೀ ಪುತ್ತಿಗೆ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಗಳಿಂದ ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿ ಅನುಗ್ರಹ ಪಡೆದರು.
ದತ್ತಾತ್ರೇಯ ಹೊಸಬಾಳೆ ಭೇಟಿ
ಇನ್ನು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಇಂದು ಕೃಷ್ಣ ಮಠಕ್ಕೆ ಭೇಟಿ ನೀಡಿದರು.
ಕೃಷ್ಣ ಮಠಕ್ಕೆ ಆಗಮಿಸಿದ ಹೊಸಬಾಳೆಯವರನ್ನು ಶ್ರೀಮಠದ ವತಿಯಿಂದ ಪೂರ್ಣಕುಂಭದೊಂದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ನಂತರ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು.
ನಂತರ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥರು ಹಾಗೂ ಶ್ರೀ ಪುತ್ತಿಗೆ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರ ತೀರ್ಥರನ್ನು ದರ್ಶನ ಮಾಡಿ, ಅವರಿಂದ ಅನುಗ್ರಹ ಪಡೆದರು.
ಶ್ರೀಮಠದ ವತಿಯಿಂದ ದತ್ತಾತ್ರೇಯ ಹೊಸಬಾಳೆ ಅವರನ್ನು ವಿಶೇಷವಾಗಿ ಉಭಯ ಶ್ರೀಗಳು ಸನ್ಮಾನಿಸಿದರು. ಆನಂತರ, ಕೆಲವು ಕಾಲ ಉಭಯ ಶ್ರೀಗಳೊಂದಿಗೆ ಹೊಸಬಾಳೆಯವರು ಚರ್ಚೆ ನಡೆಸಿದರು.
ನಟ ಶಶಿಕುಮಾರ್ ಭೇಟಿ
ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಶಶಿಕುಮಾರ್ ತಮ್ಮ ಪುತ್ರನ ಜೊತೆ ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದು, ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















