ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪ್ರಪಂಚದಲ್ಲಿ ಎಐ ನಂತರ ಎಂತಹುದ್ದೇ ತಂತ್ರಜ್ಞಾನ ಬಂದರೂ ಸಹ ವಿದ್ಯೆ ಕಲಿಸುವ ಶಿಕ್ಷಕರಿಗೆ ಪರ್ಯಾಯ ಎಂಬುದಿಲ್ಲ ಎಂದು ಶಿಕಾರಿಪುರ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಕಾರ್ಯದರ್ಶಿಗಳೂ ಆದ, ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮೂರನೆಯ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಕೇವಲ ನಾಲ್ಕು ಗೋಡೆಯ ಒಳಗಡೆ ನಡೆಯುವಂತದ್ದಲ್ಲ, ಕೇವಲ ಪಾಠದ ಪುಸ್ತಕವಲ್ಲ, ಕೇವಲ ಅಂಕಗಳಿಸುವುದಕ್ಕಾಗಿ ಅಲ್ಲ. ಶಿಕ್ಷಣ ಹೇಗೆ ಯೋಚಿಸಬೇಕು, ಪ್ರಶ್ನಿಸಬೇಕು, ಕಲ್ಪನೆ ಮಾಡಿಕೊಳ್ಳಬೇಕು ಹಾಗೂ ಹೊಸ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬೇಕು ಎಂದು ಅರ್ಥೈಸುವಂತಾಗಬೇಕು ಎಂದರು.
ಪ್ರಸ್ತುತದಲ್ಲಿ ಕೃತಕ ಬುದ್ಧಿಶಕ್ತಿಯ ತಂತ್ರಜ್ಞಾನ, ಎಐ ಇಂದ ಕೆಲಸಗಳು ಕಡಿಮೆಯಾಗುತ್ತವೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಯಾವುದೇ ತಂತ್ರಜ್ಞಾನ ಬಂದರೂ ಶಿಕ್ಷಕರ ಹೊರತು ಪಡಿಸಿ ಪರ್ಯಾಯ ಆಲೋಚನೆ ಮಾಡಲು ಸಾಧ್ಯವಿಲ್ಲ. ಶಿಕ್ಷಕ ಸಹಾನುಭೂತಿಯಿಂದ ಉದ್ಯೋಗಿಯಾಗಿ, ವ್ಯಕ್ತಿಯಾಗಿ, ಒಬ್ಬ ಆಪ್ತ ಸಮಾಲೋಚನಕರಾಗಿ ಕೆಲಸ ನಿರ್ವಹಿಸುವಂತಾಗಬೇಕು.
-ಬಿ.ವೈ. ರಾಘವೇಂದ್ರ
ತರಗತಿಯ ಒಳಗಡೆ ಮಾತ್ರ ನಡೆಯುವಂತದ್ದು ಶಿಕ್ಷಣ ಎಲ್ಲರಿಗೂ, ಎಲ್ಲರಿಗಾಗಿ ಶಿಕ್ಷಣ ಎನ್ನುವಂತಾಗಬೇಕು. ಕಳೆದ ಹತ್ತು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ಗಮನಿಸುತ್ತಿದ್ದೇವೆ. ಐಐಟಿ, ಇಂಜಿನಿಯರಿಂಗ್, ರಾಷ್ಟ್ರೀಯ ಶಿಕ್ಷಾ, ಸ್ವಯಂ, ದೀಕ್ಷಾ ವಿದ್ಯಾನಿಧಿ ಹೀಗೆ ಶಿಕ್ಷಣದಲ್ಲಿ ಡಿಜಿಟಲೀಕರಣ ಕಾರ್ಯಕ್ರಮಗಳು ಶಿಕ್ಷಣಕ್ಕೆ ಪ್ರವೇಶ ಮಾಡುತ್ತಿವೆ ಎಂದರು ತಿಳಿಸಿದರು.
ಬದಲಾದ ಸನ್ನಿವೇಶದಲ್ಲಿ ಕಲಿಕೆಗೆ ಪ್ರಾಮುಖ್ಯತೆ ದೊರೆಯುವಂತಾಗಬೇಕಾದರೆ, ಕಲಿಕೆಗೆ ಪ್ರಾಮುಖ್ಯತೆಯನ್ನು ನೀಡಬೇಕು. 21ನೇ ಶತಮಾನದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ಬಯಸುವ ಈ ಸಂದರ್ಭದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆಗಳು ಮತ್ತು ಅವುಗಳಿಂದ ಹೊರಬಂದ ಫಲಿತಾಂಶಗಳನ್ನು ಪರಿಗಣಿಸಬೇಕು ಎಂದರು.
ಶಿಕ್ಷಣ ಕೇವಲ ಗಳಿಸುವುದಕ್ಕಾಗಿ ಮಾತ್ರ ರೂಪಿತವಾದುದಲ್ಲ ಅದು ಜೀವನವನ್ನು ರೂಪಿಸುವ ಸರ್ವಾಂಗೀಣ ಅಭಿವೃದ್ಧಿಯ ಸಂಕೇತ. ಶಿಕ್ಷಣದಲ್ಲಿ ನವೀನ ಬೋಧನಾ ಪದ್ಧತಿಗಳು ಹಳ್ಳಿಯಿಂದ ಪ್ರಾರಂಭವಾಗಿ ನಗರ ಪ್ರದೇಶಗಳಿಗೂ ವ್ಯಾಪಿಸುತ್ತಿರುವುದನ್ನು ಗಮನಿಸುವುದಾದರೆ ಇಂತಹ ಸಮ್ಮೇಳನಗಳಲ್ಲಿ ಪಾಲ್ಗೊಂಡಾಗ ಮಾತ್ರ ಸಾಧ್ಯ. ಕೌಶಲ್ಯಾಧಾರಿತ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ನೀಡಬೇಕು ಎಂಬುದು ಎಲ್ಲರ ಆಶಯವಾಗಿದೆ ಎಂದರು.
ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆಗೆ ಒತ್ತನ್ನು ನೀಡುವ ಮೂಲಕ ಶಿಕ್ಷಣ ಮತ್ತು ಶಿಕ್ಷಕರ ವೃತ್ತಿಪರ ಅಭಿವೃದ್ಧಿಯಲ್ಲಿ ಭವಿಷ್ಯದ ಪ್ರವೃತ್ತಿಗಳನ್ನು ಮೇಳೈಸಿ ಪಠ್ಯಕ್ರಮದ ನಾವೀನ್ಯತೆ ಮತ್ತು ವಿನ್ಯಾಸವನ್ನು ಮರು ಹೊಂದಿಸುವ ಅನಿವಾರ್ಯತೆ ಇದೆ. ಈ ರೀತಿಯ ಸಮ್ಮೇಳನಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ವೇದಿಕೆಯನ್ನು ನಿರ್ಮಿಸಿ ಕೊಡುತ್ತವೆ. ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಬೋಧಕರು ಎಲ್ಲರು ಒಟ್ಟಿಗೆ ಸೇರಿ ಚರ್ಚಿಸಿ ಸೂಕ್ತವಾದುದ್ದನ್ನು ಆಯ್ದು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಎರಡು ದಿನಗಳ ಶೈಕ್ಷಣಿಕ ಸಮ್ಮೇಳನ ಸಫಲವಾಗಲಿ ಎಂದು ಹಾರೈಸಿದರು.ಕುವೆಂಪು ವಿವಿ ಕುಲಪತಿಗಳಾ ಪ್ರೊ.ಶರತ್ ಅನಂತಮೂರ್ತಿ ಮಾತನಾಡಿ, ಶಿಕ್ಷಣ ಎಂಬುದು ಸ್ವಾಮಿ ವಿವೇಕಾನಂದರು ಹೇಳಿದಂತೆ ಈಗಾಗಲೇ ಮಗುವಿನಲ್ಲಿ ಸುಪ್ತವಾಗಿರುವ ಶಕ್ತಿ ಇದನ್ನು ಕ್ರೀಯಾತ್ಮಕವಾಗಿ ಹೊರತರುವ ಶಕ್ತಿ ಶಿಕ್ಷಕರಲ್ಲಿರುತ್ತದೆ. ಶಿಕ್ಷಣ ಎಂದರೆ ಎಲ್ಲದನೂ ಕಲಿಸುವುದಲ್ಲ, ಕಲಿಯುವಂತೆ ಮಾರ್ಗದರ್ಶನವನ್ನು ನೀಡುವಂತಾಗಬೇಕು ಎಂದರು.
ಮಗುವಿನಲ್ಲಿರುವ ಅಂತಃಸತ್ವವನ್ನು ಹೇಗೆ ಹೊಸತನದೊಂದಿಗೆ ಹೇಗೆ ಪ್ರಸ್ತುಪಡಿಸಬೇಕೆಂಬುದಾಗಿದೆ. ಮಗುವಿಗೆ ಯಾವುದೇ ನಿರ್ಬಂಧಗಳಿಲ್ಲದೇ ಮಾನವೀಯತೆ, ಕಾರಣಗಳು, ಅವಧಾನ, ವೀಕ್ಷಿಸುವಿಕೆ, ಸಾಮರ್ಥ್ಯವನ್ನು ಪತ್ತೆ ಹಚ್ಚಿ ಗುರುತಿಸುವ ಪ್ರಯತ್ನಗಳು ಶಿಕ್ಷಕರಿಂದಾಗಲಿ ಹಾಗೆಯೇ ಸಮ್ಮೇಳನವು ಅರ್ಥಪೂರ್ಣವಾಗಿ ನಡೆಯಲಿ.
-ಪ್ರೊ.ಶರತ್ ಅನಂತಮೂರ್ತಿ
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಂ.ಬಿ. ಶಿವಕುಮಾರ್, ಬೆಂಗಳೂರು ಡೀಮ್ಡ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ.ಶ್ರೀಕಂಠಸ್ವಾಮಿ, ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ. ಜಿ.ಆರ್. ಅಂಗಡಿ, ಕರ್ನಾಟಕ ಪ್ರಾಚಾರ್ಯರಾದ ಡಾ. ಶಿವಕುಮಾರ್ಜಿ. ಎಸ್ ಹಾಗೂ ಬೇರೆ ಬೇರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಸಂಪನ್ಮೂಲ ವ್ಯಕ್ತಿಗಳು, ಬೋಧಕರು, ಸಿಬ್ಬಂದಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳಾದ ಪ್ರೇಕ್ಷಾ ಮತ್ತು ತಂಡದವರು ಪ್ರಾರ್ಥಿಸಿ, ಪ್ರಾಚಾರ್ಯರಾದ ಡಾ. ಶಿವಕುಮಾರ್ ಜಿ.ಎಸ್. ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಧ್ಯಾಪಕರಾದ ಡಾ. ಯದುಕುಮಾರ್ ಎಂ ವಂದನಾರ್ಪಣೆ ಮಾಡಿ, ಡಾ.ಎಸ್. ನಾಗೇಂದ್ರಪ್ಪ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post