ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕುಡಿದು ಕರ್ತವ್ಯಕ್ಕೆ ಬರುತ್ತಿದ್ದ ಎಲೆಕ್ಟ್ರಿಕ್ ಬಸ್ ಡ್ರೈವರ್’ಗಳಿಂದ ಲಂಚ ಪಡೆದು ಡ್ಯೂಟಿ ನೀಡಿದ ಆರೋಪದಲ್ಲಿ ಬಿಎಂಟಿಸಿ ಅಧಿಕಾರಿ ಸೇರಿ 9 ಮಂದಿಯನ್ನು ಅಮಾನತು ಮಾಡಿರುವ ಘಟನೆ ನಡೆದಿದೆ.
ಘಟಕ ವ್ಯವಸ್ಥಾಪಕ ಎಂ.ಜಿ. ಕೃಷ್ಣ, ಸಂಚಾರ ನಿರೀಕ್ಷಕ ಡಿ. ಶ್ರೀನಿವಾಸ್, ಸಹಾಯಕ ಲೆಕ್ಕಿಗ ಇ.ಎಸ್. ಅರುಣ್ ಕುಮಾರ್, ಕಿರಿಯ ಸಹಾಯಕಿ ಕೆ.ಎಸ್. ಪ್ರತಿಭಾ, ಕರ್ನಾಟಕ ರಾಜ್ಯ ಸಾರಿಗೆ ಹವಲ್ದಾರ್ ಎಂ. ಮಂಜುನಾಥ, ಪೇದೆ ಎಸ್.ಜಿ. ಮಂಜುನಾಥ, ಚೇತನ ಕುಮಾರ್, ಪುನೀತ್ ಕುಮಾರ್, ಕೆ. ಲಕ್ಷ್ಮಿ ಅಮಾನತು ಆಗಿರುವ ಸಿಬ್ಬಂದಿಗಳು.
ಏನಿದು ಘಟನೆ?
ಬಿಎಂಟಿಸಿ ಚಾಲಕರು ಕುಡಿದು ಡ್ರೈವ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು. ಕುಡಿದು ಬರುತ್ತಿದ್ದ ಬಸ್ ಡ್ರೈವರ್’ಗಳಿಗೆ ಲಂಚ ಪಡೆದು ಅಧಿಕಾರಿಗಳು ಡ್ಯೂಟಿ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಡಿಪೋ ಮ್ಯಾನೇಜರ್ ಸೇರಿದಂತೆ 9 ಚಾಲಕರು ಸಸ್ಪೆಂಡ್ ಆಗಿದ್ದಾರೆ ಎಂದು ವರದಿಯಾಗಿದೆ.
ಡಿಪೋ- 35 ರ ಕನ್ನಹಳ್ಳಿ ಎಲೆಕ್ಟ್ರಿಕ್ ಬಸ್’ಗಳನ್ನು ಡ್ರೈವಿಂಗ್ ಮಾಡಲು ಚಾಲಕರು ಕುಡಿದು ಬರುತ್ತಿದ್ದರು. ಸುಮಾರು 150 ಕ್ಕೂ ಹೆಚ್ಚು ಡ್ರೈವರ್’ಗಳ ಬಳಿ ಅಧಿಕಾರಿಗಳು ಸಾವಿರಾರು ರೂಪಾಯಿ ಹಣ ಪಡೆದು ಬಸ್ ಓಡಿಸಲು ಅವಕಾಶ ನೀಡಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಅಪಘಾತ ಪ್ರಮಾಣ ಕೂಡ ಹೆಚ್ಚಳವಾಗಿದ್ದು, ಅದಕ್ಕಾಗಿ ಕಠಿಣ ಕ್ರಮಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























