ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
12ನೇ ಶತಮಾನದಲ್ಲಿ ರಚನೆಯಾದ ವಚನಗಳು ಮಾನವ ಕುಲದ ದಾರಿದೀಪಗಳಾಗಿವೆ. ಇವು ನಮ್ಮ ಜೀವನದ ಎಲ್ಲಸಮಸ್ಯೆಗಳಿಗೂ ಸೂಕ್ತ ಪರಿಹಾರವಿದೆ. ಆದರೆ ವಚನಗಳನ್ನು ನಾವುಗಳು ಪಚನ ಮಾಡಿಕೊಂಡು, ಅವುಗಳನ್ನು ನಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಬಿ. ಲೋಕೇಶಪ್ಪ ತಿಳಿಸಿದರು.
ನಗರದ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ತಾಲ್ಲೂಕು ಘಟಕ ಶಿಕಾರಿಪುರದ ವತಿಯಿಂದ ನಡೆದ ತಾಲೂಕು ಮಟ್ಟದ ಪ್ರೌಢಶಾಲೆಗಳ ವಚನ ಪ್ರತಿಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಚನ ಸಾಹಿತ್ಯದಲ್ಲಿರುವ ತತ್ವ ಆದರ್ಶಗಳು ಯುವಜನರಿಗೆ ಅಗತ್ಯವಾಗಿದೆ. ಜೀವನದಲ್ಲಿ ಪ್ರಬುದ್ಧತೆ ಸಾಧಿಸಲು ವಚನದಿಂದ ಸಾಧ್ಯ, ವಚನ ಸಾಹಿತ್ಯವನ್ನು ಸಂಗೀತದ ಮೂಲಕ ಜನರಿಗೆ ತಿಳಿಸುವುದರಿಂದ ವಚನ ಸಾಹಿತ್ಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯ ಎಂದರು.
ಕುಮದ್ವತಿ ಪ್ರೌಢಶಾಲೆಯ ಪ್ರಾಚಾರ್ಯರಾದ ವಿಶ್ವನಾಥ ಪಿ ಮಾತನಾಡಿ, ವಚನಗಳು ಮನುಷ್ಯನ ಸುಖಮಯ ಜೀವನಕ್ಕೆ, ಆಧ್ಯಾತ್ಮಕ್ಕೆ ಮತ್ತು ಜ್ಞಾನ ಸಂಪತ್ತಿಗೆ, ಸಾಮಾಜಿಕ, ಸೌಹಾರ್ದ, ಸಾಮರಸ್ಯದ ಬೆಳವಣಿಗೆಗೆ ದೇಶದ ಪ್ರಗತಿಗೆ ಸಂಜೀವಿನಿಯಾಗಿವೆ ಎಂದು ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಶಿಧರ ಸ್ವಾಮಿ ಮಾತನಾಡಿ, 12ನೇ ಶತಮಾನದಲ್ಲಿ ಏಕಕಾಲಕಕ್ಕೆ ಅನೇಕ ಶರಣರು ಒಂದೇ ಕಡೆ ಇದ್ದು ವಚನ ಸಾಹಿತ್ಯವನ್ನು ರಚಿಸಿ ಜಗತ್ತಿಗೆ ಕೊಟ್ಟಿದ್ದಾರೆ. ಅದು ಕಲ್ಯಾಣ ಕ್ರಾಂತಿ ಹೊರತು ಬೇರೇನೂ ಇಲ್ಲ. ಇಂತಹ ವಚನ ಸಾಹಿತ್ಯದ ಉತ್ಸವ ಆಚರಿಸುವುದೆಂದರೆ ಸಾಮಾಜಿಕ ಚೈತನ್ಯದ ಪುರ್ನ ಜಾಗೃತಿಯ ಕೆಲಸ. ಇದರ ಮೂಲಕ ನಮ್ಮನ್ನು ನಾವು ಜೀವಿತ ಇಟ್ಟುಕೊಳ್ಳುವುದಾಗಿದೆ ಎಂದರು.
ಶಸಾಪದ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎಂ. ನಾಗರಾಜ್ ಅವರು ಪ್ರಾಸ್ತಾವಿಕ ಮಾತನಾಡಿದರು. ಕದಳಿ ವೇದಿಕೆಯ ಅಧ್ಯಕ್ಷರು ಮತ್ತು ದತ್ತಿ ದಾನಿಗಳಾದ ಕಾಂಚನ ಕುಮಾರ್, ಶಸಾಪ ಉಪಾಧ್ಯಕ್ಷರಾದ ಸೋಮಶೇಖರ್ ಘಟ್ಟಿ, ಕ್ರೇತ ಸಂಪನ್ಮೂಲ ಕಚೇರಿಯ ಕೋಟ್ರೇಶಪ್ಪ, ಚಂದ್ರಶೇಖರ್ ಸೂರಹೊನ್ನೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ ಸ್ವಾಗತಿಸಿ, ಶಿಕ್ಷಕಿಯರಾದ ಚಂದ್ರಕಲಾ ವಂದಿಸಿ, ಲಲಿತಿ.ಜಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















