ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಕೇಂದ್ರ ಗೃಹ ಸಚಿವರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮದಿನೋತ್ಸವ ಪ್ರಯುಕ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 10 ಕಿ.ಮೀ. ಏಕತಾ ನಡಿಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡು ವರ್ಷಪೂರ್ತಿ ಯುವಕರ ಸಬಲೀಕರಣ ಮತ್ತು ಯುವ ಶಕ್ತಿಗೆ ಶಕ್ತಿ ತುಂಬುವ ಕಾರ್ಯ ಮಾಡಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಅವರು ಇಂದು ನೆಹರು ಕ್ರೀಡಾಂಗಣದಿಂದ ಪ್ರಾರಂಭವಾದ ಏಕತಾ ನಡಿಗೆಗೆ ಮುನ್ನ ಗೋಪೂಜೆ ನೆರವೇರಿಸಿ ಜಾಥಾಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೊನ್ನೆ ಶಿಕಾರಿಪುರ, ನಿನ್ನೆ ತೀರ್ಥಹಳ್ಳಿ ಇವತ್ತು ಶಿವಮೊಗ್ಗದಲ್ಲಿ ಏಕತಾ ನಡಿಗೆ ಹಮ್ಮಿಕೊಳ್ಳಲಾಗಿದ್ದು, ಸುಮಾರು 3 ಸಾವಿರಕ್ಕೂ ಹೆಚ್ಚು ಯುವಕರು, ಯುವತಿಯರು ಪಾಲ್ಗೊಂಡಿದ್ದಾರೆ. ದೇಶದ ಹಲವು ಪ್ರಾಂತ್ಯಗಳನ್ನು ಒಗ್ಗೂಡಿಸಿ ಭಾರತವನ್ನು ಒಂದೇ ಸದೃಢ ದೇಶವನ್ನಾಗಿ ಮಾಡಿದ ಸರ್ದಾರ್ ಪಟೇಲ್ ಅವರ ಬಗ್ಗೆ ಯುವಕರಿಗೆ ತಿಳಿಸಿ ದೇಶದ ಏಕತೆಗೆ ಒಗ್ಗಟ್ಟು ಪ್ರದರ್ಶನ ಮಾಡುವುದರ ಮೂಲಕ ದೇಶ ಮೊದಲು ಸಂಕಲ್ಪವನ್ನು ಯುವ ಶಕ್ತಿಯಲ್ಲಿ ಮೂಡಿಸುವುದು ಇದರ ಉದ್ದೇಶ ಎಂದರು.
ರಾಜ್ಯದಲ್ಲಿ ಸಿಎಂ, ಡಿಸಿಎಂ ನಡುವಿನ ಕುರ್ಚಿ ಗುದ್ದಾಟ ಸಾರ್ವಜನಿಕರಲ್ಲಿ ಬೇಸರ ತಂದಿದೆ. ಅವರ ಒಳ ಒಪ್ಪಂದ ಏನೇ ಆಗಿರಲಿ, ಅದು ಅವರ ಪಕ್ಷಕ್ಕೇ ಬಿಟ್ಟ ವಿಚಾರವಾದರೂ ಕೂಡ ರಾಜ್ಯದಲ್ಲಿ ಎರಡೂವರೆ ವರ್ಷದಲ್ಲಿ ಅಭಿವೃದ್ಧಿ ಕಾಣದೇ ಇರುವುದರಿಂದ ಕೇವಲ ಕುರ್ಚಿಯ ಚರ್ಚೆಯೇ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಸ್ಪಷ್ಟ ಸಂದೇಶವನ್ನು ಸಿಎಂ, ಡಿಸಿಎಂ ನೀಡಬೇಕಾಗಿದೆ. ಕಳೆದ 5-6 ತಿಂಗಳಿಂದ ಅಭಿವೃದ್ಧಿ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ. ರೈತರು ಬೀದಿಗೆ ಬಂದಿದ್ದಾರೆ. ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ. ನಿಮ್ಮ ಒಳಜಗಳ ಏನೇ ಇರಲಿ. ಮೊದಲು ಆಡಳಿತಕ್ಕೆ ಆದ್ಯತೆ ನೀಡಿ ಎಂದರು.
ಜಿಲ್ಲೆಯಲ್ಲಿ ಗಾಂಜಾ ಜಾಲದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಗಳಲ್ಲಿ ಗಾಂಜಾ ನಿರ್ಮೂಲನೆಗೆ ಕಠಿಣ ಕಾನೂನುಗಳಿವೆ. ಕೇಂದ್ರದ ಏಜೆನ್ಸಿಗಳ ಮೂಲಕ ಹಲವೆಡೆ ದೊಡ್ಡಮಟ್ಟದಲ್ಲಿ ಗಾಂಜಾ ವಶಪಡಿಸಿಕೊಂಡು ಬೇರುಸಹಿತ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ರಾಜ್ಯದಲ್ಲಿ ಯಾಕೋ ನಿಯಂತ್ರಣವಾಗುತ್ತಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಜನರಿಗೆ ಪೊಲೀಸರ ಮೇಲೆ ಗೌರವ ಬರಬೇಕಾದರೆ ಪೊಲೀಸರು ಕ್ರಿಯಾಶೀಲರಾಗಿ ಗಾಂಜಾ ಮಾರಾಟ ಮತ್ತು ಸರಬರಾಜು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಹಾಗೂ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















