ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಸ್ಕೃತದ ಸೆಳೆತದಿಂದಲೇ ಜನಮಾನಸದಲ್ಲಿ ಉಳಿಯುವಂತಾದ ಇವರು ನಮಗೆ ಆದರ್ಶಪ್ರಾಯರು. ಓದಿಗೆ ಸಾಧನೆಗೆ ವಯಸ್ಸಿನ ಹಂಗಿಲ್ಲ, ಸಾಧಿಸುವ ಛಲವೊಂದಿದ್ದರೆ ಯಾವುದೂ ನಮಗೆ ಅಡ್ಡಿಯಾಗುವುದಿಲ್ಲ. ಹಾದಿಯ ಮುಳ್ಳೆಲ್ಲವೂ ಹೂವಿನಂತಾಗುತ್ತದೆ. ಅದೇ ರೀತಿಯಲ್ಲಿ ಎಲ್ಲಾ ಕಲ್ಲು ಮುಳ್ಳುಗಳನ್ನು ದಾಟಿ ನಡೆಯುವ ಹಾದಿಯನ್ನು ಹೂವಿನಂತಾಗಿಸಿದ ಮಹಿಳೆಯೊಬ್ಬರ ಕುರಿತು ನಿಮಗೆ ಹೇಳಲೇಬೇಕು. ಅವರೇ ಶ್ರೀಮತಿ ಮನು ಚವ್ಹಾಣ್ ಇವರು ಸಂಸ್ಕೃತದ ಶಿಕ್ಷಕರಾಗಿ ಶಿವಮೊಗ್ಗದಲ್ಲಿ ಎಲ್ಲರಿಗೂ ಚಿರಪರಿಚಿತರಾದವರು.
ಶ್ರೀ ನಾರಾಯಣರಾವ್ ಸಾವಂತ್ ಹಾಗೂ ಅನುಸೂಯಾಬಾಯಿ ಅವರ ಮಗಳಾಗಿ ಜನಿಸಿದ ಮನು ಅವರು ಓದಿದ್ದು 10ನೇ ತರಗತಿಯವರೆಗೆ. ಕೃಷಿಕರಾದ ಜಗದೀಶ್ ರಾವ್ ಚವ್ಹಾಣ್ ಅವರನ್ನು ವಿವಾಹವಾಗಿ ಹೋಗಿದ್ದು ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ಸಮೀಪದಲ್ಲಿರುವ ಕಂಚಗಾರನಹಳ್ಳಿಗೆ. ತಮಗೆ ಮಕ್ಕಳಾದ ಮೇಲೆ ಅವರ ಭವಿಷ್ಯದ ಓದಿಗಾಗಿ ಶಿವಮೊಗ್ಗ ನಗರದಲ್ಲಿ ಬಂದು ಇರುವ ನಿರ್ಧಾರ ಮಾಡಿದರು. ಜೀವನ ನಿರ್ವಹಣೆಗಾಗಿ ಅವರು ಆಯ್ದುಕೊಂಡಿದ್ದು ಅನ್ನುವುದಕ್ಕಿಂತಲೂ ಅವರಿಗೆ ಸಿಕ್ಕ ಕೆಲಸ ಶ್ರೀ ಅ. ನಾ. ವಿಜೇಂದ್ರ ರಾವ್ ಅವರ ನವದುರ್ಗ ಏಜೆನ್ಸಿಯಲ್ಲಿ ಆಫೀಸ್ ಕಾರ್ಯನಿರ್ವಹಣೆ ಮಾಡುವುದು. ಅಲ್ಲಿ ಇವರು ವಿಜೇಂದ್ರ ಅವರ ಆ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಕಾರ್ಯಕರ್ತರನ್ನು ನೋಡಿದರು. ಅವರೆಲ್ಲ ಸಂಸ್ಕೃತದಲ್ಲಿಯೇ ಸಂಭಾಷಣೆ ಮಾಡುವುದನ್ನು ನೋಡಿ ಅವರಿಂದ ಆಕರ್ಷಿತರಾಗಿ ತಾವೂ ಸಂಸ್ಕೃತವನ್ನು ಕಲಿಯಬೇಕೆಂದುಕೊಂಡರು.
ಅದರಂತೆ ಅವರ ಸಂಕಲ್ಪ ಗಟ್ಟಿಯಾಗಿತ್ತು ದಶದಿನಾತ್ಮಕ ಸಂಭಾಷಣ ಶಿಬಿರಕ್ಕೆ ಹೋಗಿ ಸಂಸ್ಕೃತ ಮಾತನಾಡಲು ಕಲಿತರು. ಅದು ಅವರಿಗೆ ಸಂತೋಷ ಕೊಟ್ಟರೂ ತೃಪ್ತಿಯಾಗಲಿಲ್ಲ. ನಂತರ ಮತ್ತೂರು ಶ್ರೀನಿಧಿಯವರೇ ಮೊದಲಾಗಿ ಅನೇಕರ ಸಹಾಯ ಪಡೆದು ಸಂಸ್ಕೃತ ಭಾರತಿಯವರು ನಡೆಸುವ ಪ್ರವೇಶ ದಿಂದ ಕೋವಿದದ ವರೆಗೆ ಪರೀಕ್ಷೆಗಳನ್ನು ತೆಗೆದುಕೊಂಡರು. ಅದರಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾದರು. ಹಾಗೆಯೇ ಬಾಲ ಕೇಂದ್ರದ ತರಬೇತಿ ಪಡೆದು ಬಾಲ ಕೇಂದ್ರವನ್ನು ಸಂಸ್ಕೃತ ಭವನದಲ್ಲಿ ಆರಂಭಿಸಿದರು. ಮೊದಲು 10 ವಿದ್ಯಾರ್ಥಿಗಳಿದ್ದ ಅವರ ಕೇಂದ್ರ ಈಗ 50ಕ್ಕೂ ಹೆಚ್ಚಿರುವುದನ್ನು ನಾವು ಕಾಣುತ್ತೇವೆ. ಇಲ್ಲಿನವರೆಗೆ ಅವರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭಗವದ್ಗೀತೆ, ಶ್ಲೋಕ, ಸುಭಾಷಿತ, ಸಂಸ್ಕೃತ ಕ್ರೀಡೆ ಇತ್ಯಾದಿಗಳನ್ನ ಕಲಿಸಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡಿದ್ದಾರೆ. ಇವುಗಳೇ ಅಲ್ಲದೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ನೀಡುವಂತಹ ವಿದ್ವತ್ ಪರೀಕ್ಷೆ ಹಾಗೂ ಡಿಪ್ಲೋಮೋಗಳಲ್ಲಿಯೂ ತೇರ್ಗಡೆ ಹೊಂದಿದ್ದಾರೆ.

ತಮ್ಮ ಸಂಸ್ಕೃತ ಶಿಕ್ಷಣ-ಪ್ರಶಿಕ್ಷಣವನ್ನು ಮಾಯಸಂದ್ರ ತುರುವೇಕೆರೆಯಲ್ಲಿ ಪಡೆದಿದ್ದೇ ಅಲ್ಲದೇ, ಸಂಸ್ಕೃತ ಭವನದಲ್ಲಿ 2015 ರಲ್ಲಿ ನಡೆದ ವಿಸ್ತಾರಕ ವರ್ಗದಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗದ ಅನೇಕ ಶಾಲೆಗಳಿಗೆ ಶಾಲಾಸು ಸಂಸ್ಕೃತ ಯೋಜನೆಯಡಿಯಲ್ಲಿ ನಗರದ ವಿವಿಧ ಶಾಲೆಯ ಮಕ್ಕಳಿಗೆ ಪಾಠವನ್ನು ಮಾಡಿ ಸೈ ಅನಿಸಿಕೊಂಡಿದ್ದಾರೆ. ಅದರಲ್ಲಿಯೂ ಓಪನ್ ಮೈಂಡ್ ಸ್ಕೂಲ್, ವಾಸವಿ ಸ್ಕೂಲ್, ಚಿಟ್ಟೆ ಮಾಂಟೇಸರಿ ಅಲ್ಲದೇ ವಡ್ಡಿನಕೊಪ್ಪದ ಸರ್ಕಾರಿ ಶಾಲೆಗಳಿಗೆ ತೆರಳಿ ಅಯನಂ, ಸಾರಿಣಿ ಮುಂತಾದ ಪಾಠಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿ ಅರ್ಥೈಸಿದ್ದಾರೆ.

ತಮ್ಮ ಸಂಸ್ಕೃತ ಕಲಿಕೆಗೆ ಮತ್ತೂರಿನ ಶ್ರೀನಿಧಿ, ಶ್ರೀ ಅ. ನಾ. ವಿಜೇಂದ್ರ, ಶ್ರೀ ಟಿ.ವಿ. ನರಸಿಂಹಮೂರ್ತಿ, ಅನಂತ ಕೃಷ್ಣ, ಡಾ. ಮೈತ್ರೇಯಿ, ಮತ್ತೂರಿನ ಗಿರೀಶ್ ಇವರು ತನಗೆ ಅಗತ್ಯ ಸಹಕಾರವನ್ನು ನೀಡಿದ್ದಾರೆ ಎಂದು ಸದಾ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಇವರು ಸಂಸ್ಕೃತದ ಸೇವೆಗಾಗಿ ಗಮನಿಸಿಯೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಚಂದ್ರಶೇಖರ್ ಬಾಯರ್ ನಡೆಸಿಕೊಡುವಂತಹ ಕಾರ್ಯಕ್ರಮದಲ್ಲಿ ಸನ್ಮಾನಕ್ಕೂ ಸಹ ಭಾಜನರಾಗಿದ್ದಾರೆ.

ಅವರು ನಡೆಸಿಕೊಡುವ ಭಗವದ್ಗೀತೆಯ ತರಗತಿಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುವುದನ್ನು ಕಂಡಾಗ ಜೊತೆಗೆ ಬಾಲ ಕೇಂದ್ರದ ವಿದ್ಯಾರ್ಥಿಗಳ ವಾರ್ಷಿಕೋತ್ಸವವನ್ನು ಕಂಡಾಗ ನಿಜಕ್ಕೂ ಮನು ಭಗಿನಿ ಅತ್ಯಂತ ಉತ್ಕೃಷ್ಟ ಕಾರ್ಯವೆಸಗಿದ್ದಾರೆಂಬುದು ನಿಸ್ಸಂಶಯ. ಸದಾ ಚಟುವಟಿಕೆಯಿಂದ ಕ್ರಿಯಾಶೀಲರಾದ ಮನು ಭಗಿನಿ ಜಿಲ್ಲಾ ಬ್ರಾಹ್ಮಣ ಸಂಘ ನಡೆಸುವ ವಸಂತ ವೇದ ಶಿಬಿರದಲ್ಲಿ ಎಲ್ಲ ಮಕ್ಕಳಿಗೂ ಆಚ್ಚು ಮೆಚ್ಚಿನ ಗುರುಮಾತೆ. ಇಷ್ಟೇ ಅಲ್ಲದೇ ಡಿಜಿಟಲ್ ಮಾಧ್ಯಮ ಬಳಸಿ ಎಲ್ಲರಿಗೂ ಸಂಸ್ಕೃತ ಕಲಿಸುವಲ್ಲಿ ಯಶಸ್ವಿಯಾದ ಇವರು ಅತ್ಯಂತ ಉತ್ಸಾಹದಿಂದ ತಾವಿರುವ ಜಾಗವನ್ನು ಸಂಸ್ಕೃತದತ್ತ ಸೆಳೆಯುವಲ್ಲಿ ನಿಸ್ಸಿಮರು. ಪಠಾಮಿ ಸಂಸ್ಕೃತಂ ನಿತ್ಯಂ ಧ್ಯಾಯಾಮಿ ಸಂಸ್ಕೃತಂ ಸದಾ ಎನ್ನುವ ಸಾಲುಗಳಿಗೆ ಅನ್ವರ್ಥವಾಗಿ ತಮ್ಮ ಜೀವನವನ್ನು ಸಾಗಿಸುತ್ತಿರುವ ಶ್ರೀಮತಿ ಮನು ಅವರಿಗೆ ಈ ಸಂದರ್ಭದಲ್ಲಿ ಇನ್ನಷ್ಟು ಮಕ್ಕಳು ತಮ್ಮಿಂದ ಸಂಸ್ಕೃತ ಕಲಿತು ಸಂಸ್ಕೃತ ಮಾತೆಯ ಸೇವೆ ಮಾಡುವಂತಾಗಲಿ… ಸಂಸ್ಕೃತಕ್ಕೆ ಗರಿ ಮೂಡಿಸುವಂತಾಗಲಿ ಎಂಬ ಆಶಯ ನನ್ನದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post