ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿಕ್ಷಣವು ಜೀವನ ನಡೆಸಲು ಮತ್ತು ಜ್ಞಾನಾರ್ಜನೆಗೆ ಅತ್ಯಗತ್ಯವಾದರೆ, ಸಂಸ್ಕಾರವು ಮನುಷ್ಯನಿಗೆ ಗೌರವ, ಪ್ರೀತಿ ಮತ್ತು ಉತ್ತಮ ನಡವಳಿಕೆಯನ್ನು ಕಲಿಸುತ್ತದೆ; ಇವೆರಡೂ ಇದ್ದಾಗ ಮಾತ್ರ ಜೀವನ ಸುಂದರ ಮತ್ತು ಅರ್ಥಪೂರ್ಣವಾಗುತ್ತದೆ ಎಂದು ಬಾಪೂಜಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಕುಲಕರ್ಣಿ ತಿಳಿಸಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ನೇತೃತ್ವದಲ್ಲಿ ಅದರ ಅಂಗ ಸಂಸ್ಥೆಗಳಾದ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಶಿಕ್ಷಣವಿಲ್ಲದ ಸಂಸ್ಕಾರ ನಿರರ್ಥಕ ಮತ್ತು ಸಂಸ್ಕಾರವಿಲ್ಲದ ಶಿಕ್ಷಣ ಮನುಷ್ಯನನ್ನು ಯಾಂತ್ರಿಕವಾಗಿಸುತ್ತದೆ ಎಂದು ಹೇಳಲಾಗುತ್ತೆ. ಆಧುನಿಕ ಜಗತ್ತಿನಲ್ಲಿ ಸಂಬಂಧಗಳು ನಶಿಸುತ್ತಿರುವ ಈ ಕಾಲದಲ್ಲಿ ಶಿಕ್ಷಣದ ಜೊತೆ ಸಂಸ್ಕಾರದ ಅನಿವಾರ್ಯತೆ ಹೆಚ್ಚಾಗಿದೆ, ಇದರಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ. ಉತ್ತಮವಾದ ಸಂಸ್ಕಾರಯುತ ಶಿಕ್ಷಣವನ್ನು ಈ ವಿದ್ಯಾ ಸಂಸ್ಥೆಯು ನೀಡುತ್ತಿರುವುದು ಹೆಮ್ಮೆಯ ವಿಷಯ. ಈ ಶಾಲೆಗಳಲ್ಲಿ ಕಲಿತು ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದು ಈ ಸಂಸ್ಥೆಗೆ ತಂದಂತಹ ಹೆಮ್ಮೆಯಾಗಿದೆ.ಶಿಕ್ಷಣ ಸಂಸ್ಥೆಗಳು ಕೇವಲ ಅಂಕಗಳ ಮೇಲೆ ಗಮನ ಹರಿಸದೆ, ಮಕ್ಕಳಿಗೆ ಮೌಲ್ಯಯುತ ಸಂಸ್ಕಾರವನ್ನು ಕಲಿಸಬೇಕು. ಶಿಕ್ಷಣ ಮತ್ತು ಸಂಸ್ಕಾರ ಎರಡೂ ಇದ್ದಾಗ ಮಾತ್ರ ಜೀವನಪರಿಪೂರ್ಣವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಶ್ರೀಯುತ ರವೀಂದ್ರ.ಕೆ.ಸಿ ರವರು ವಿದ್ಯಾರ್ಥಿಗಳ ಬಹುಮಾನ ವಿತರಣೆ ಸಮಾರಂಭವು ವಿದ್ಯಾರ್ಥಿಗಳ ಶ್ರಮ, ಪ್ರತಿಭೆ ಮತ್ತು ಶ್ರೇಷ್ಠತೆಯನ್ನು ಗುರುತಿಸಿ, ಪುರಸ್ಕರಿಸುವ ಒಂದು ಉತ್ತೇಜನಕಾರಿ ಕಾರ್ಯಕ್ರಮ ವಾಗಿದೆ, ಇದರಲ್ಲಿ ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಸಾಧನೆಗಳಿಗಾಗಿ ಬಹುಮಾನ ವಿತರಿಸಲಾಗುತ್ತದೆ, ಇದು ಇತರರಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.ತಮ್ಮ ಬಾಲ್ಯದ ಶಾಲಾ ದಿನಗಳನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಪ್ರಾಚಾರ್ಯರಾದ ಶ್ರೀಯುತ ವಿಶ್ವನಾಥ.ಪಿರವರುವರ್ಷವಿಡೀ ವಿದ್ಯಾರ್ಥಿಗಳ ಪರಿಶ್ರಮವನ್ನು ಗುರುತಿಸುವುದು. ಶ್ರೇಷ್ಠತೆಗಾಗಿ ಶ್ರಮಿಸಲು ಇತರರನ್ನು ಪ್ರೋತ್ಸಾಹಿಸುವುದು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ಜವಾಬ್ದಾರಿಯ ಭಾವನೆಗಳನ್ನು ಬೆಳೆಸುವುದು. ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ನಡುವೆ ಬಾಂಧವ್ಯ ವೃದ್ಧಿಸುವುದು. ಇಂತಹ ಸಮಾರಂಭಗಳು ಶಾಲಾ ವಾತಾವರಣವನ್ನು ಉತ್ಸಾಹಭರಿತ ಮತ್ತು ಸಕಾರಾತ್ಮಕವಾಗಿರಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಳೆದ ವರ್ಷದ ತರಗತಿ ವಾರು ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಈ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಮತ್ತು ಕ್ರೀಡಾಂಗಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ,ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಮೈತ್ರಿ ಮಾತೃ ಭಾರತಿಯ ಮಾತೆಯರು ಉಪಸ್ಥಿತರಿದ್ದರು.
ಕು. ಅನಘ ಪಂಡಿತ ಮತ್ತು ತಂಡದವರು ಪ್ರಾರ್ಥಿಸಿ, ಕು. ಸ್ಪೂರ್ತಿ ಸ್ವಾಗತಿಸಿ, ಕು. ಸೈಯದಾ ಅಫೀಪಾ ವಂದಿಸಿ, ಕು. ಲಕ್ಷ್ಮೀ ಮತ್ತು ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















