ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಹಿತ್ಯ ಕ್ಷೇತ್ರಗಳಲ್ಲಿ ರಾಷ್ಟ್ರಕವಿ ಕುವೆಂಪು #Kuvempu ರವರ ಕೊಡುಗೆ ಅವಿಸ್ಮರಣೀಯ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಚಿರಂತನ ಯೋಗ ಹಾಗೂ ಸಂಗೀತ ಟ್ರಸ್ಟಿನ ಅಧ್ಯಕ್ಷೆ ಶಾಂತ ಎಸ್ ಶೆಟ್ಟಿ ಹೇಳಿದರು.
ಅವರು ಕುವೆಂಪು ರಂಗ ಮಂದಿರದ ಆವರಣದಲ್ಲಿ ರಾಷ್ಟ್ರಕವಿ ರಸ ಋಷಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ ಹಾಗೂ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಗೀತಾ ಹಾಗೂ ಕವಿತೆ ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುವೆಂಪು ಅವರ ಕ್ರಾಂತಿಕಾರಿ ಗೀತೆಗಳು ಹಾಗೂ ನಾಡಗೀತೆ ಇಂದಿಗೂ ಸಹ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಯಶಸ್ವಿಯಾಗಿವೆ ಹಾಗೆ ಅವರ ಒಂದೊಂದು ಗೀತೆಗಳು ಸಹ ಇಂದು ಅತ್ಯಂತ ಪ್ರಸ್ತುತವಾಗಿದೆ. ಹಾಗೆಯೇ ಈ ನಾಡು ಕಂಡ ಒಬ್ಬ ಶ್ರೇಷ್ಠ ಗಾಯಕ ಸಿ ಅಶ್ವಥ್ ಅವರ ಜನ್ಮದಿನವೂ ಕೂಡ. ಅವರ ಕನ್ನಡವೇ ಸತ್ಯ ಹಾಗೂ ಭಾವಗೀತೆ ಅನೇಕ ಗೀತೆಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಿವೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಮಾತನಾಡಿ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಧೀಮಂತ ಸಾಹಿತಿ, ಕನ್ನಡದ ಎರಡನೇ ರಾಷ್ಟ್ರಕವಿ, ಪಂಪ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಇಂತಹ ಮೇರು ವ್ಯಕ್ತಿತ್ವ ಇರುವ ಕುವೆಂಪು ಅವರು ನಮ್ಮ ಜಿಲ್ಲೆಯವರೇ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆಯಾಗುತ್ತದೆ, ಕುವೆಂಪು ಅವರ ಗೀತೆಗಳು ಒಂದೊಂದು ಸಾಲುಗಳು ಸಹ ತುಂಬಾ ಅರ್ಥಪೂರ್ಣ ಎಂದರು.
ಕುವೆಂಪು ಅವರು ಕೇವಲ ಕವಿ ಸಾಹಿತಿಯಾಗಿ ಅಷ್ಟೇ ಅಲ್ಲದೆ ಸಾಮಾಜಿಕ ಧಾರ್ಮಿಕ ರಾಜಕೀಯ ಗುರು ಆಗಿ ಪರಿಸರದ ಪ್ರೇಮಿಯಾಗಿ ಮಾರ್ಗದರ್ಶಕರು ಚಿಂತಕರು ಆಗಿ ಸಾಹಿತ್ಯ ಕೃಷಿ ನಡೆಸಿದವರು ಅವರು ಹಾಕಿಕೊಟ್ಟ ಮಂತ್ರ ಮಾಂಗಲ್ಯ ಇಂದಿಗೂ ಸಹ ಜನಪ್ರಿಯತೆ ಪಡೆಯುವುದರ ಜೊತೆಗೆ ಪ್ರಸ್ತುತವಾಗಿದೆ ಹಾಗೆ ಅವರ ತತ್ವ ಸಿದ್ಧಾಂತ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದರು.
ಇದೇ ಸಂದರ್ಭದಲ್ಲಿ ಕವಿ ಹಾಗೂ ಪರಿಷತ್ತಿನ ಸಂಚಾರಕರಾದ ಶೋಭಾ ಸತೀಶ್ ಅವರು ತಾವೇ ರಚಿಸಿದ ಕುವೆಂಪು ಕವನವನ್ನು ವಾಚಿಸಿದರು. ಈ ಸಂದರ್ಭದಲ್ಲಿ ಸದಸ್ಯರು ಪದಾಧಿಕಾರಿಗಳು ಕುವೆಂಪು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು. ಕಾರ್ಯಕ್ರಮದಲ್ಲಿ ಬಿಂದು ವಿಜಯಕುಮಾರ್, ದಾಕ್ಷಾಯಿಣಿ, ರಾಜಕುಮಾರ್, ರಮಾ ಸುಬ್ರಹ್ಮಣ್ಯ, ನಳಿನಾಕ್ಷಿ ರುದ್ರಪ್ಪ ಚೀಲೂರ್. ಸುಶೀಲ ಷಣ್ಮುಗಂ, ಲೀಲಾವತಿ, ಮಂಜು ನಾಯಕ್ ಹಾಗೂ ಗಾಯಕರು ಹಾಗೂ ಕುವೆಂಪು ರಂಗಮಂದಿರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















