ಕಲ್ಪ ಮೀಡಿಯಾ ಹೌಸ್ | ಉಡುಪಿ |
ಕುತ್ಪಾಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಾಲಾಕ್ಯ ತಂತ್ರ ವಿಭಾಗವು, ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ)ಆಶ್ರಯದಲ್ಲಿ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ – ಉನ್ಮೀಲನಂ 2026 ಅನ್ನು ಆಯೋಜಿಸಿದೆ.
2026ರ ಫೆಬ್ರವರಿ 14ರ ಶನಿವಾರದ ಉಡುಪಿಯ ಎಸ್’ಡಿಎಂ ಆಯುರ್ವೇದ ಕಾಲೇಜಿನಲ್ಲಿ ವಿಚಾರಸಂಕಿರಣ ನಡೆಯಲಿದೆ.
ಶಾಲಾಕ್ಯ ತಂತ್ರದಲ್ಲಿ ವ್ಯವಸ್ಥಿತ ಒಳನೋಟಗಳ ಅನ್ವೇಷಣೆ – ನೇತ್ರ ಮತ್ತು ಇಎನ್’ಟಿ ಅಭ್ಯಾಸ ಎಂಬ ವಿಷಯದ ಅಡಿಯಲ್ಲಿ ಈ ವಿಚಾರಸಂಕಿರಣವು ನಡೆಯಲಿದೆ. ಆಯುರ್ವೇದ ನೇತ್ರ ವಿಜ್ಞಾನ ಮತ್ತು ಶ್ರವಣ, ನಾಸಿಕ, ಕಂಠ ವಿಜ್ಞಾನದಲ್ಲಿ (ಶಾಲಾಕ್ಯ ತಂತ್ರ) ಸಮಗ್ರ, ಪುರಾವೆ ಆಧಾರಿತ ಮತ್ತು ಪ್ರಾಯೋಗಿಕ ವಿಧಾನಗಳನ್ನು ಅನ್ವೇಷಿಸಲು ಇದು ಒಂದು ಶೈಕ್ಷಣಿಕ ವೇದಿಕೆಯನ್ನು ಒದಗಿಸುತ್ತದೆ.
ಶಾಸ್ತ್ರೀಯ ಆಯುರ್ವೇದ ಜ್ಞಾನವನ್ನು ಸಮಕಾಲೀನ ವೈದ್ಯಕೀಯ ಮತ್ತು ಸಂಶೋಧನಾ ಚೌಕಟ್ಟುಗಳೊಂದಿಗೆ ಬೆಸೆಯುವುದು ಹಾಗೂ ದೇಶದಾದ್ಯಂತದ ಶಿಕ್ಷಣ ತಜ್ಞರು, ವೈದ್ಯರು, ಸಂಶೋಧಕರು ಮತ್ತು ವಿದ್ಯಾರ್ಥಿಗಳ ನಡುವೆ ಅರ್ಥಪೂರ್ಣ ಸಂವಾದವನ್ನು ಏರ್ಪಡಿಸುವುದು ಇದರ ಮುಖ್ಯ ಗುರಿಯಾಗಿದೆ.
ಕೇರಳದ ಶ್ರೀಧರೀಯಂ ಆಯುರ್ವೇದ ನೇತ್ರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ವೈದ್ಯಕೀಯ ಅಧಿಕಾರಿ ಮತ್ತು ಕಾರ್ಯದರ್ಶಿಗಳಾದ ಡಾ. ಶ್ರೀಕಾಂತ್ ಪಿ. ನಂಬೂತಿರಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅವರು ಅಭ್ಯಾಸ ಆಧಾರಿತ ಪುರಾವೆಗಳಿಂದ ಪುರಾವೆ ಆಧಾರಿತ ಅಭ್ಯಾಸದವರೆಗೆ: ಶಾಲಾಕ್ಯ ತಂತ್ರವನ್ನು ಜಾಗತಿಕ ವೈದ್ಯಕೀಯ ಮತ್ತು ಸಂಶೋಧನಾ ಚೌಕಟ್ಟುಗಳಿಗೆ ಅಳವಡಿಸುವುದು ಎಂಬ ವಿಷಯದ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಈ ವಿಚಾರಸಂಕಿರಣದಲ್ಲಿ ತ್ರಿಶೂರಿನ ಸುನೇತ್ರಿ ಆಯುರ್ವೇದಾಶ್ರಮ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ವೈದ್ಯ ಎಂ. ಪ್ರಸಾದ್, ಮೂಡುಬಿದರೆ ಆಳ್ವಾಸ್ ಆರ್ಯುವೇದ ವೈದ್ಯಕೀಯ ಕಾಲೇಜಿನ ಶಾಲಾಕ್ಯ ತಂತರ ವಿಭಾಗದ ಪ್ರಾಧ್ಯಾಪಕರಾದ ಡಾ.ಉದಯ್ ಶಂಕರ್, ಕೋಝಿಕೋಡ್ ಕೆಎಂಸಿಟಿ ಆಯುರ್ವೇದ ವೈದ್ಯಕೀಯ ಕಾಲೇಜಿನ ವಿಭಾಗ ಮುಖ್ಯಸ್ಥರು ಮತ್ತು ಸಹ ಪ್ರಾಧ್ಯಾಪಕರಾದ ಡಾ. ಸೈಫುದ್ದೀನ್ ಗುರುಕ್ಕಲ್ ಪಿ. ಇವರಿಂದ ವೈಜ್ಞಾನಿಕ ಪ್ರಬಂಧ ಮಂಡನೆ ನಡೆಯಲಿದೆ.
ಉನ್ಮೀಲನಂ 2026’ರಲ್ಲಿ ಸಂಶೋಧನಾ ಪ್ರಬಂಧಗಳು, ಇ-ಪೋಸ್ಟರ್’ಗಳು ಮತ್ತು ರೀಲ್ಸ್ ಪ್ರಸ್ತುತಪಡಿಸಲು ಅವಕಾಶ ನೀಡುವ ಮೂಲಕ ಮೂಲ ಸಂಶೋಧನೆ ಮತ್ತು ನವೀನ ದೃಷ್ಟಿಕೋನಗಳನ್ನು ಪ್ರೋತ್ಸಾಹಿಸುತ್ತದೆ.
ಪ್ರಬಂಧ ಸಲ್ಲಿಕೆಗೆ ಕೊನೆಯ ದಿನಾಂಕ 31 ಜನವರಿ 2026 ಆಗಿದೆ. ಈ ವಿಚಾರಸಂಕಿರಣವು ಪದವಿ(ಯುಜಿ), ಸ್ನಾತಕೋತ್ತರ ಪದವಿ(ಪಿಜಿ) ವಿದ್ಯಾರ್ಥಿಗಳು, ಅಧ್ಯಾಪಕರು, ವೈದ್ಯರು ಮತ್ತು ಪಿಎಚ್’ಡಿ ಸಂಶೋಧಕರಿಗೆ ಮುಕ್ತವಾಗಿದೆ. ಭಾಗವಹಿಸುವವರಿಗೆ ಪ್ರಮಾಣಪತ್ರ, ವಿಚಾರಸಂಕಿರಣದ ಸಾಮಗ್ರಿ ಮತ್ತು ಭೋಜನದ ವ್ಯವಸ್ಥೆ ಇರುತ್ತದೆ.
ತನ್ನ ಸದೃಢ ಶೈಕ್ಷಣಿಕ ದೃಷ್ಟಿಕೋನ ಮತ್ತು ರಾಷ್ಟ್ರೀಯ ಮಟ್ಟದ ಪ್ರಸಿದ್ಧ ಭಾಷಣಕಾರರ ಉಪಸ್ಥಿತಿಯೊಂದಿಗೆ, `ಉನ್ಮೀಲನಂ 2026′ ಒಂದು ಮಹತ್ವದ ಶೈಕ್ಷಣಿಕ ಸಮ್ಮಿಲನವಾಗಲಿದೆ. ಇದು ಆಯುರ್ವೇದ ಶಿಕ್ಷಣ, ಚಿಕಿತ್ಸಾ ಶ್ರೇಷ್ಠತೆ ಮತ್ತು ಶಾಲಾಕ್ಯ ತಂತ್ರದಲ್ಲಿ ಸಂಶೋಧನೆಯನ್ನು ಸಂಯೋಜಿಸುವ ಎಸ್’ಡಿಎಂ ಸಂಸ್ಥೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















