ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವೃತ್ತಿಪರತೆ ಹಾಗೂ ಕೌಶಲ, ಜ್ಞಾನ ಇದ್ದರೆ ಉತ್ತಮ ಉದ್ಯೊಗ ಅವಕಾಶಗಳು ಹೆಚ್ಚುತ್ತವೆ. ಜೀವನದ ಯಶಸ್ಸಿಗೆ ವಿದ್ಯಾರ್ಹತೆ ಮಾನದಂಡವಲ್ಲ. ಕೌಶಲ್ಯತೆ ಮುಖ್ಯ ಎಂದು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿಗಳು ಮತ್ತು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜಿ.ಎಸ್. ಶಿವಕುಮಾರ್ ತಿಳಿಸಿದರು.
ನಗರದ ಮಂಗಳ ಭವನದಲ್ಲಿ ಶಿಕಾರಿಪುರ ಉದ್ಯೋಗ ಮೇಳದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವ ಭಾವಿ ಉದ್ಯೋಗ ಮಾಹಿತಿ ಶಿಬಿರದಲ್ಲಿ ಉದ್ಘಾಟಿಸಿ ಮಾತನಾಡಿದರು.
ನಮ್ಮ ಯುವಜನತೆಯ ಶಕ್ತಿಸಾಮರ್ಥ್ಯಗಳು ಕೌಟುಂಬಿಕ, ಸಾಮಾಜಿಕ ಅವಲಂಬನೆಯಿಂದಾಗಿ ವ್ಯರ್ಥಗೊಳ್ಳುತ್ತಿದೆ. ಉದ್ಯೊಗ ಮೇಳದ ಸದುಪಯೋಗ ಪಡೆದು ಆಧುನಿಕ ಜಗತ್ತಿನಲ್ಲಿ ಬದುಕನ್ನು ಯುವಕರು ಕಟ್ಟಿಕೊಳ್ಳಿಬೇಕು. ಉದ್ಯೊಗ ಮಾಹಿತಿ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ಆಗಮಿಸಿದ್ದು ಸಂತಸದ ಸಂಗತಿ. ತರಬೇತಿಯ ಲಾಭ ಪಡೆದು ಆತ್ಮವಿಶ್ವಾಸದಿಂದ ಮುನ್ನಡೆದು ಉದ್ಯೊಗಿಗಳಾಗಿ ಎಂತಹ ವಿಶಮ ಪರಿಸ್ಥಿತಿ ನಿಭಾಯಿಸುವ ಧೈರ್ಯ ತೋರಬೇಕೆಂದು ಹುರಿದುಂಬಿಸಿದರು.
ಪೂರ್ವ ತಯಾರಿಯು ಆತ್ಮವಿಶ್ವಾಸವನ್ನು ಹೆಚ್ಚಿಸಿ, ತಪ್ಪುಗಳನ್ನು ಕಡಿಮೆ ಮಾಡುತ್ತದೆ. ಬಲವಾದ ಆಸಕ್ತಿ ಇದ್ದರೆ ಹೊಸ ವಿಷಯಗಳನ್ನು ಕಲಿಯಲು ಸುಲಭವಾಗುತ್ತದೆ ಮತ್ತು ಪೂರ್ವ ತಯಾರಿಯು ವಿಷಯದ ಆಳವಾದ ಜ್ಞಾನವನ್ನು ನೀಡುತ್ತದೆ. ಎಂದು ತಿಳಿಸಿದರು.
ಆಳ್ವಾಸ್ ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ ಆಳ್ವ ಮಾತನಾಡಿ, ಈ ಉದ್ಯೋಗ ಮೇಳವನ್ನು ಈ ನಾಡಿನ ಹೆಮ್ಮೆಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ನವರ ಹುಟ್ಟು ಹಬ್ಬದ ಪ್ರಯುಕ್ತ ಸಂಸದರಾದ ಬಿ.ವೈ. ರಾಘವೇಂದ್ರ ರವರು ಮತ್ತು ಶಾಸಕರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ರವರ ಈ ನಾಡಿನ ಯುವ ಪ್ರತಿಭೆಗಳಿಗೆ ಉದ್ಯೋಗವನ್ನು ಒದಗಿಸಿಕೊಡಲು ಆಯೋಜನೆ ಗೊಂಡಿರುವ ಕಾರ್ಯಕ್ರಮವಾಗಿದೆ ಎಂದರು.
ಈ ಶಿಕಾರಿಪುರ ಉದ್ಯೋಗ ಮೇಳದಲ್ಲಿ ತಾವುಗಳು ಸದುಪಯೋಗ ಪಡೆದುಕೊಂಡು ಸಂಸದರ ಮತ್ತು ಶಾಸಕರು ನಿಮ್ಮ ಮೇಲಿರುವ ಕಾಳಜಿಗೆ ಪ್ರೇರಣೆ ಬಿಡಬೇಕು. ಪೂರ್ವ ತಯಾರಿಯು ಯಾವುದೇ ಕಾರ್ಯದಲ್ಲಿ ಯಶಸ್ಸು, ದಕ್ಷತೆ ಮತ್ತು ನಿಖರತೆಯನ್ನು ಸಾಧಿಸಲು ಅತ್ಯಗತ್ಯ. ಇದು ಸಮಯವನ್ನು ಉಳಿಸುತ್ತದೆ, ತಪ್ಪುಗಳನ್ನು ಕಡಿಮೆ ಮಾಡುತ್ತದೆ, ಒತ್ತಡವನ್ನು ತಗ್ಗಿಸುತ್ತದೆ ಮತ್ತು ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.
ಶಿಕ್ಷಣ, ಯೋಜನೆ ಅಥವಾ ದೈನಂದಿನ ಕೆಲಸಗಳಲ್ಲಿ ಪೂರ್ವ ಸಿದ್ಧತೆಯು ಗುರಿಯನ್ನು ಸುಲಭವಾಗಿ ತಲುಪಲು ಸಹಾಯ ಮಾಡುತ್ತದೆ. ಉದ್ಯೋಗ ಮೇಳದಲ್ಲಿ ಸಾಕಷ್ಟು ಕಂಪನಿಗಳು ಬರುತ್ತವೆ. ಹಾಗಾಗಿ ಯಾವ ಕಂಪನಿಗೆ ಅಪ್ಲೈ ಮಾಡಬೇಕೆಂದು ನಿಮಗೆ ಕನ್ಫ್ಯೂಜ್ ಆಗಬಹುದು. ಅದಕ್ಕಾಗಿ ನೀವು ಮೊದಲು ಉದ್ಯೋಗ ಮೇಳದಲ್ಲಿ ಯಾವೆಲ್ಲಾ ಕಂಪನಿಗಳು ಭಾಗವಹಿಸಿದೆ ಎನ್ನುವುದನ್ನು ತಿಳಿಯಿರಿ. ನಿಮಗೆ ಯಾವ ಕೆರಿಯರ್ ಸೂಟ್ ಆಗುತ್ತದೆ ಎನ್ನುವುದನ್ನು ಅರಿಯಿರಿ ನಂತರ ಸಂದರ್ಶನದಲ್ಲಿ ಪಾಲ್ಗೊಳ್ಳಿ ಎಂದರು.
ಉದ್ಯೋಗ ಮೇಳದಲ್ಲಿನ ಸಂದರ್ಶನವು ನಾರ್ಮಲ್ ಸಂದರ್ಶನಕ್ಕಿಿಂತ ಭಿನ್ನವಾಗಿದೆ ಎಂದು ತಿಳಿಯಬೇಡಿ. ಇತರ ಸಂದರ್ಶನದಲ್ಲೇ ನೀವು ಯಾವ ರೀತಿ ಪಾಲ್ಗೊಳ್ಳುತ್ತೀರೋ ಅದೇ ರೀತಿ ಉದ್ಯೋಗ ಮೇಳದಲ್ಲಿನ ಸಂದರ್ಶನದಲ್ಲೂ ಪಾಲ್ಗೊಳ್ಳ ಬೇಕು. ನಿಮ್ಮ ಡ್ರೆಸ್ಸಿಂಗ್ ಸೆನ್ಸ್’ನಿಂದಾಗಿ ಅವರು ನಿಮ್ಮನ್ನು ರಿಜೆಕ್ಟ್ ಮಾಡಬಹುದು. ಹಾಗಾಗಿ ಸಂದರ್ಶನಕ್ಕೆ ಹೋಗುವಾಗ ಫಾರ್ಮಲ್ ಡ್ರೆಸ್ಸೇ ಹಾಕಿಕೊಂಡು ಬನ್ನಿ. ಉದ್ಯೋಗಾವಕಾಶಗಳನ್ನು ಸ್ವೀಕರಿಸುವುದು ವೃತ್ತಿಜೀವನದ ಬೆಳವಣಿಗೆಗೆ ಮೊದಲ ಹೆಜ್ಜೆಯಾಗಿದೆ ಎಂದರು.
ಯಾವುದೇ ಕೆಲಸ ಸಿಕ್ಕರೂ, ಅದು ನಿಮ್ಮ ಕೌಶಲಗಳನ್ನು ಹೆಚ್ಚಿಸಲು ಮತ್ತು ಅನುಭವ ಪಡೆಯಲು ಸಹಾಯ ಮಾಡುತ್ತದೆ. ಉದ್ಯೋಗವನ್ನು ಸ್ವೀಕರಿಸುವ ಮುನ್ನ ಕಂಪನಿಯ ಬ್ರ್ಯಾಂಡ್ ಮೌಲ್ಯ, ಉದ್ಯೋಗ ಸಂಸ್ಕೃತಿ ಮತ್ತು ದೈನಂದಿನ ಕೆಲಸದ ವಿವರಗಳನ್ನು ಪರಿಶೀಲಿಸಿ ಮುನ್ನಡೆದು ಮುಂದೆ ಉನ್ನತ ಉದ್ಯೋಗ, ಹುದ್ದೆಯನ್ನು ಪಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ವಿಭಾಗದ ಪ್ರಾಚಾರ್ಯರಾದ ಡಾ.ಎಂ. ವೀರೆಂದ್ರ, ವಿದ್ಯಾಶಂಕರ, ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ, ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ್ ಸಂಪನ್ಮೂಲ ವ್ಯಕ್ತಿಗಳು, ಸಂಸ್ಥೆಯ ಸಿಬ್ಬಂದಿ ವರ್ಗದವರು ಮತ್ತು ನೋಂದಾಯಿತ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.
ಸ್ವಾತಿ ಪ್ರಾರ್ಥಿಸಿ, ಡಾ.ವೈ. ದೇವರಾಜ್ ಸ್ವಾಗತಿಸಿದರು. ಡಾ.ಎಚ್. ರವಿ ವಂದಿಸಿ, ಡಾ.ವೀರೇಂದ್ರ ಕುಮಾರ್ ವಾಲಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















