ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಶಿವಮೊಗ್ಗ |
ಮಲೆನಾಡು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಪಾಲಿಗೆ ಸಂಜೀವಿನಿಯಂತಿರುವ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯ (SIMS) ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕವನ್ನು (NICU) ಆಧುನೀಕರಿಸಿ, ವಿಸ್ತರಿಸಲು ಸಂಸದ ಬಿ.ವೈ.ರಾಘವೇಂದ್ರ #MP B Y Raghavendra ಮುಂದಾಗಿದ್ದಾರೆ.
ಪ್ರಸ್ತುತ ಇರುವ ಘಟಕದ ಮೇಲೆ ಒತ್ತಡ ಹೆಚ್ಚಾಗುತ್ತಿರುವುದರಿಂದ, ಅಗತ್ಯ ನವಜಾತ ಶಿಶುಗಳ ಅನುಕೊಲಕ್ಕಾಗಿ ಹೆಚ್ಚುವರಿಯಾಗಿ 30 ಸುಸಜ್ಜಿತ ಹಾಸಿಗೆಗಳನ್ನು ಅಳವಡಿಸಲು ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ #Minister Nirmala Sitaraman ಅವರಿಗೆ ಸಂಸದ ರಾಘವೇಂದ್ರ ಮನವಿ ಸಲ್ಲಿಸಿದ್ದಾರೆ. ಸದರಿ ವಿಸ್ತರಣಾ ಯೋಜನೆಗೆ ಸಚಿವರ ಪ್ರದೇಶಾಭಿವೃದ್ಧಿ ನಿಧಿ (MPLADs) ಅಥವಾ ಸಾಧ್ಯವಿರುವ ಯಾವುದೇ ಸೂಕ್ತ ಕಾರ್ಯಕ್ರಮದ ಅಡಿಯಲ್ಲಿ ಬೆಂಬಲವನ್ನು ನೀಡುವಂತೆ ಸಂಸದ ರಾಘವೇಂದ್ರ ಕೋರಿದ್ದಾರೆ.
ಪ್ರತಿಯೊಂದು ಮಗುವು ಉತ್ತಮ ಆರೋಗ್ಯದೊಂದಿಗೆ ಜೀವನ ಆರಂಭಿಸಬೇಕು ಎಂಬ ಕಾಳಜಿಯೊಂದಿಗೆ ಈ ಪ್ರಯತ್ನದಲ್ಲಿ ತೊಡಗಿರುವ ಸಂಸದರು, ವಿಸ್ತರಣೆಯಿಂದ ಕೇವಲ ಶಿವಮೊಗ್ಗ ಜಿಲ್ಲೆಯಷ್ಟೇ ಅಲ್ಲದೆ ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಡ ಕುಟುಂಬಗಳಿಗೆ ಹೆಚ್ಚಿನ ಅನುಕೊಲ ಕಲ್ಪಿಸಿದಂತಾಗಲಿದೆ ಎಂದಿದ್ದಾರೆ.
ಸಕಾಲಕ್ಕೆ ಸೂಕ್ತ ಚಿಕಿತ್ಸೆ, ಆರೈಕೆ, ಮತ್ತು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗುವುದರಿಂದ ನವಜಾತ ಶಿಶುಗಳ ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ. ಈ ತುರ್ತು ಚಿಕಿತ್ಸಾ ಘಟಕವನ್ನು ಆದಷ್ಟು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರುವ ನಿಟ್ಟನಲ್ಲಿ ಸಂಸದ ರಾಘವೇಂದ್ರ ಕಾರ್ಯನಿರತರಾಗಿದ್ದಾರೆ. ಬಡ ನವಜಾತ ಶಿಶುಗಳ ಆರೈಕೆ ನಿಟ್ಟಿನಲ್ಲಿ ಸಂಸದರ ಕಾಳಜಿಯನ್ನು ಶ್ಲಾಘಿಸಿರುವ ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್, ಸದರಿ ಯೋಜನೆಗೆ ಅಗತ್ಯ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಸಂಸದ ರಾಘವೇಂದ್ರ ಅವರಿಗೆ ಭರವಸೆ ನೀಡಿದ್ದು, ಶೀಘ್ರದಲ್ಲಿ ನೆರವು ಪ್ರಕಟಿಸಲಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















