ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಕಲೆ ಎನ್ನುವುದು ಕೇವಲ ಮನರಂಜನೆಯಲ್ಲ, ಅದೊಂದು ತಪಸ್ಸು. ಆ ತಪಸ್ಸಿನಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡು, ಕರಾವಳಿಯ ಮಣ್ಣಿನ ಸೊಗಡನ್ನು ಜಗತ್ತಿಗೆ ಪಸರಿಸುತ್ತಿರುವ ಅಪರೂಪದ ಪ್ರತಿಭೆಯೇ ಚೇತನ್ ನೈಲಾಡಿ. ಒಬ್ಬ ಸಿವಿಲ್ ಇಂಜಿನಿಯರ್ ಆಗಿ ಕಟ್ಟಡಗಳನ್ನು ಕಟ್ಟುವ ಕನಸು ಹೊತ್ತಿದ್ದ ಈ ಯುವಕ, ಇಂದು ಲಕ್ಷಾಂತರ ಹೃದಯಗಳಲ್ಲಿ ಪ್ರೀತಿಯ ಗೂಡನ್ನು ಕಟ್ಟುತ್ತಿದ್ದಾರೆ.
ರಂಗಭೂಮಿಯ ಹಸಿರುಸಿರು ಮತ್ತು ಗುರುವಿನ ಮಾರ್ಗದರ್ಶನ
ನೆನಪುಗಳ ಪುಟವನ್ನು ತಿರುವಿ ಹಾಕಿದರೆ, 1995ರ ನವೆಂಬರ್ 11ರಂದು ಅರಳಿದ ಈ ಪ್ರತಿಭೆ, ಶಾಲಾ ದಿನಗಳಲ್ಲೇ ಬಣ್ಣದ ಲೋಕಕ್ಕೆ ಮರುಳಾಗಿದ್ದರು. ‘ಆಸ್ತಿ ತಂದ ಆಪತ್ತು’ ಎಂಬ ನಾಟಕದ ಮೂಲಕ ಶ್ರೀ ಚಿಕ್ಕಮ್ಮ ದೈವಸ್ಥಾನದ ಅಂಗಳದಲ್ಲಿ ಆರಂಭವಾದ ಆ ಪಯಣ, ಇಂದು 600ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳ ಭವ್ಯ ಇತಿಹಾಸವಾಗಿ ಮಾರ್ಪಟ್ಟಿದೆ.
ಚೇತನ್ ಅವರ ರಂಗಜೀವನಕ್ಕೆ ದೊಡ್ಡ ತಿರುವು ನೀಡಿದ್ದು ರಘು ಪಾಂಡೇಶ್ವರ್ ಅವರ ಸಾರಥ್ಯದ “ಸಾಧನ” ಕಲಾತಂಡ. ರಘು ಪಾಂಡೇಶ್ವರ್ ಅವರ ನಿರ್ದೇಶನದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಇವರ ರಂಗಾಸಕ್ತಿಯನ್ನು ಇಮ್ಮಡಿಗೊಳಿಸಿತು ಮತ್ತು ನಟನೆಯ ಆಳವಾದ ಕಲಿಕೆಗೆ ವೇದಿಕೆಯಾಯಿತು. ಇದರ ಜೊತೆಗೆ ಕುಂದಾಪುರದ ಹಲವಾರು ನಾಟಕ ತಂಡಗಳಲ್ಲಿ ಅಭಿನಯಿಸಿದ ಅನುಭವ ಹಾಗೂ ಹಿರಿಯ ಕಲಾವಿದರ ಮಾರ್ಗದರ್ಶನ ಇವರ ಮುಂದಿನ ಯಶಸ್ಸಿಗೆ ನಾಂದಿಯಾಯಿತು.
ಕಲಾ ಚಿಗುರು: ಸ್ವಂತಿಕೆ ಮತ್ತು ಸೃಜನಶೀಲತೆ
ಪ್ರಸ್ತುತ ಚೇತನ್ ಅವರು ತಮ್ಮದೇ ಆದ ‘ಕಲಾ ಚಿಗುರು’ ಕಲಾತಂಡದ ಮೂಲಕ ರಂಗಸೇವೆಯನ್ನು ಮುಂದುವರಿಸುತ್ತಿದ್ದಾರೆ. ಈ ತಂಡದಲ್ಲಿ ಕೇವಲ ನಟನಾಗಿ ಮಾತ್ರವಲ್ಲದೆ, ಸಮರ್ಥ ನಾಟಕಕಾರ ಮತ್ತು ನಿರ್ದೇಶಕನಾಗಿ ಅವರು ಗುರುತಿಸಿಕೊಂಡಿದ್ದಾರೆ. ಇವರದೇ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಸುಮಾರು 8ಕ್ಕೂ ಹೆಚ್ಚು ಸಾಮಾಜಿಕ ಹಾಸ್ಯ ನಾಟಕಗಳು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದಿದ್ದು, ರಂಗಭೂಮಿಯಲ್ಲಿ ಹೊಸ ಅಲೆ ಸೃಷ್ಟಿಸಿವೆ.
ರಂಗಭೂಮಿಯ ಮೇಲೆ ಚೇತನ್ ಅಳುತ್ತಿದ್ದರೆ ಪ್ರೇಕ್ಷಕರ ಕಣ್ಣುಗಳು ತೇವವಾಗುತ್ತವೆ, ಅವರು ನಗುತ್ತಿದ್ದರೆ ಸಭಾಂಗಣವೇ ಸಂಭ್ರಮಿಸುತ್ತದೆ. ಇದು ಕೇವಲ ನಟನೆಯಲ್ಲ, ಕಲೆಯೊಂದಿಗಿನ ಆತ್ಮೀಯ ಸಂಬಂಧ.
ಬೆಳ್ಳಿಪರದೆಯ ಮಿಂಚು ಮತ್ತು ಮಣ್ಣಿನ ಸೊಗಡು
ಕಿರುಚಿತ್ರಗಳ ಮೂಲಕವೂ ಭಾವನೆಗಳ ಮಹಾಪೂರವನ್ನೇ ಹರಿಸಿರುವ ಇವರು ನಟಿಸಿ, ನಿರ್ದೇಶಿಸಿದ ‘ನಿರ್ಣಯ’ ಮತ್ತು ‘ಹೆತ್ತವರು’ ಕಿರುಚಿತ್ರಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ. ವಿಶೇಷವಾಗಿ ಇವರ ಕಥೆ ಹಾಗೂ ನಟನೆಗೆ ರಾಜ್ಯ ಪ್ರಶಸ್ತಿಯ ಗೌರವವೂ ಸಂದಿದೆ. ಕುಂದಾಪ್ರ ಕನ್ನಡದ ಸೊಗಡನ್ನು ಉಸಿರಾಗಿಸಿಕೊಂಡ ಇವರು “ಕಲಾ ಚಿಗುರು” ಯೂಟ್ಯೂಬ್ ಚಾನೆಲ್ ಮೂಲಕ, ‘ಹಳಿ ಹಂಬ್ಲ್’ ಮತ್ತು ‘ಹೆಂಗ್ಸ್ರ್ ಪಂಚೇತಿ’ ಅಂತಹ ಕಾರ್ಯಕ್ರಮಗಳ ಮೂಲಕ ಕರಾವಳಿಯ ಸಂಸ್ಕೃತಿಯನ್ನು ಮನೆಮನಗಳಿಗೆ ತಲುಪಿಸಿದ್ದಾರೆ.
ಗೌರವಗಳ ಸುರಿಮಳೆ: ಪರಿಶ್ರಮಕ್ಕೆ ಸಿಕ್ಕ ಫಲ
ಪ್ರಶಸ್ತಿಗಳು ಅರ್ಹರನ್ನು ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ಚೇತನ್ ಅವರೇ ಸಾಕ್ಷಿ.
ಕೋಟ ಥೀಂ ಪಾರ್ಕ್ ವತಿಯಿಂದ ‘ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಸ್ಮಾರಕ ಪ್ರಶಸ್ತಿ’.
ಬೆಂಗಳೂರಿನಿಂದ ಸಂದ ‘ಕುಂದಾಪ್ರ ರತ್ನ’ ಮತ್ತು ‘ಕಲಾ ರತ್ನ’ ಪ್ರಶಸ್ತಿಗಳು.
ಐ.ಪಿ.ಎಸ್ ಅಧಿಕಾರಿ ಡಾ. ಕೆ. ಮಧುಕರ ಶೆಟ್ಟಿ ಸ್ಮಾರಕ ಪುರಸ್ಕಾರ.
ಹೃದಯಸ್ಪರ್ಶಿ ಕೃತಜ್ಞತೆ
ಇಷ್ಟೆಲ್ಲಾ ಸಾಧನೆಯ ಶಿಖರಕ್ಕೇರಿದರೂ ಚೇತನ್ ನೈಲಾಡಿ ಇಂದಿಗೂ ಅದೇ ವಿನಯದ ಪರ್ವತ. “ನನ್ನ ಈ ಯಶಸ್ಸಿಗೆ ಕಾರಣಕರ್ತರು ನನ್ನ ತಂದೆ-ತಾಯಿ, ಗುರುಗಳು, ನನ್ನನ್ನು ಪ್ರೀತಿಸಿದ ಆತ್ಮೀಯರು ಹಾಗೂ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದ ಗೆಳೆಯರು” ಎನ್ನುವಾಗ ಅವರ ಧ್ವನಿಯಲ್ಲಿನ ನಮ್ರತೆ ಅಭಿಮಾನಿಗಳ ಹೃದಯ ಗೆಲ್ಲುತ್ತದೆ.
“ಕಲಾವಿದ ಸಾಯಬಹುದು, ಆದರೆ ಕಲೆಗೆ ಸಾವಿಲ್ಲ. ಚೇತನ್ ನೈಲಾಡಿ ಅವರ ಕಲಾಸೇವೆ ನಿರಂತರವಾಗಿರಲಿ.” ತನ್ನ ಕಲೆಯ ಪ್ರತಿಯೊಂದು ಹನಿಯನ್ನೂ ತನಗೆ ಜನ್ಮ ನೀಡಿದ ಮಣ್ಣಿಗೆ ಮತ್ತು ಕಲೆಯನ್ನು ಆರಾಧಿಸುವ ಜನರಿಗೆ ಅರ್ಪಿಸುವ ಇವರ ಮನಸ್ಸು ನಿಜಕ್ಕೂ ಶ್ಲಾಘನೀಯ.
ಚೇತನ್ ನೈಲಾಡಿ ಕೇವಲ ಒಬ್ಬ ನಟನಲ್ಲ; ಅವರು ಸಾವಿರಾರು ಯುವ ಪ್ರತಿಭೆಗಳಿಗೆ ಸ್ಫೂರ್ತಿ.
ಬಣ್ಣದ ಲೋಕದಲ್ಲಿ ಅವರ ಪಯಣ ಸುದೀರ್ಘವಾಗಿರಲಿ, ಅವರ ಅಭಿನಯದ ಅಮೋಘ ಕಲೆ ಇನ್ನಷ್ಟು ಎತ್ತರಕ್ಕೆ ಬೆಳಗಲಿ.
ಲೇಖನ. ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















