ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒತ್ತಡ ಮತ್ತು ಅಶಾಂತಿಯ ಜೀವನಶೈಲಿಯಲ್ಲಿ ಬದುಕುತ್ತಿರುವ ಜನರಿಗೆ ಅದರಿಂದ ಹೊರಬರಲು ಭಗವಂತನ ಸಂದೇಶ ಮತ್ತು ಶಾಂತಿಯ ಮಹತ್ವದ ಅರಿವು ಮೂಡಿಸಬೇಕಿದೆ. ಆಧ್ಯಾತ್ಮ, ಧ್ಯಾನ, ಯೋಗ ಮನುಷ್ಯನ ನಿಜವಾದ ಸಂಪತ್ತು ಎಂದು ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮುಖ್ಯಸ್ಥೆ, ರಾಜಯೋಗಿನಿ, ಬ್ರಹ್ಮಕುಮಾರಿ ಸ್ವಾತಿ ಹೇಳಿದರು.
ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಕ್ಕಳಿಗೆ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಂಸ್ಥೆಯು ಜಗತ್ತಿಗೆ ಶಾಂತಿಯ ಸಂದೇಶ ಸಾರುತ್ತ ಮನುಷ್ಯ ಉತ್ತಮ ಹಾದಿಯಲ್ಲಿ ಬದುಕು ರೂಪಿಸಿಕೊಳ್ಳುವಂತೆ ನೆರವಾಗುತ್ತಿದೆ ಎಂದು ತಿಳಿಸಿದರು.
ಮನುಷ್ಯ ಕೆಟ್ಟ ಚಟಗಳಿಗೆ ದಾಸನಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ಒಳ್ಳೆಯ ಸಂಗತಿಗಳಿಂದ ದೂರ ಉಳಿಯುತ್ತಿದ್ದಾರೆ. ಕೆಟ್ಟ ಹವ್ಯಾಸಗಳಿಗೆ ಬೇಗನೇ ಬಲಿಯಾಗುತ್ತಿದೆ. ಅದನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಒಳ್ಳೆಯ ವ್ಯಕ್ತಿಯಾಗಿ ರೂಪಿಸಲು ಪರಿವರ್ತನೆ ತರಬೇಕಿದೆ. ಆಧ್ಯಾತ್ಮಿಕ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಪರಮಾತ್ಮನ ನೆನಪು ನಮ್ಮಲ್ಲಿ ಸಾತ್ವಿಕ ಶಕ್ತಿ ವೃದ್ಧಿಸುತ್ತದೆ. ಒಳ್ಳೆಯ ಹಾದಿಯಲ್ಲಿ ಕೆಟ್ಟ ಸಂಗತಿಗಳಿಗೆ ಎಂದಿಗೂ ಪ್ರೇರಣೆ ಇರುವುದಿಲ್ಲ. ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಲು ಒಳ್ಳೆಯ ಸಂಗತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವ್ಯಕ್ತಿತ್ವ ವಿಕಸನ ಶಿಬಿರವು ಮಕ್ಕಳ ಉತ್ತಮ ವ್ಯಕ್ತಿತ್ವ ಬೆಳವಣಿಗೆ ಬೆಳೆಸುವಲ್ಲಿ ನೆರವಾಗುತ್ತದೆ. ಆತ್ಮವಿಶ್ವಾಸ ವೃದ್ಧಿಸುತ್ತದೆ. ಸಂವಹನ ಕೌಶಲ್ಯಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಶಿಬಿರ ಪೂರಕವಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರದ ಮಹತ್ವ ಅರಿವು ಮೂಡಿಸಬೇಕು. ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವಲ್ಲಿ ಇಂತಹ ಶಿಬಿರಗಳು ಮಹತ್ತರ ಪಾತ್ರ ವಹಿಸುತ್ತವೆ. ಮಕ್ಕಳು ಸರಿಯಾದ ಹಾದಿಯಲ್ಲಿ ಮುನ್ನಡೆಯಲು ಪೋಷಕರು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಬ್ರಹ್ಮಕುಮಾರಿ ಕಾವ್ಯಾ ಹಾಗೂ ಈಶ್ವರೀಯ ಸಂಸ್ಥೆಯ ಸದಸ್ಯರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















