ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಉಡುಪಿ ಶ್ರೀ ಭಂಡಾರಕೇರಿ ಮಠ #BhandarakeriMatha ಕೊಡಮಾಡುವ ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ ಚೆನ್ನೈನ ವೇದ ರಕ್ಷಣಾ ನಿಧಿ ಟ್ರಸ್ಟ್, ಹಿರಿಯ ವಿದ್ವಾಂಸರಾದ ಹೈದರಾಬಾದ್ನ ವೇದವ್ಯಾಸ ವಿದ್ಯಾಪೀಠದ ಪಂಡಿತ ಚಿಟಗುಪ್ಪ ಪದ್ಮನಾಭ ಆಚಾರ್ಯ, ಬಾಗಲಕೋಟೆಯ ವಿದ್ವಾನ್ ನಾಗಸಂಪಿಗೆ ರಘೂತ್ತಮ ಆಚಾರ್ಯ ಹಾಗೂ ಮೈಸೂರಿನ ಅಭೃಂಣೀ ಗುರುಕುಲದ ವಿದ್ವಾನ್ ಬೆಮ್ಮತ್ತಿ ವಿಜಯೀಂದ್ರಾಚಾರ್ಯ ಭಾಜನರಾಗಿದ್ದಾರೆ.
1963ರಲ್ಲಿ ಕಂಚಿ ಶ್ರೀ ಚಂದ್ರಶೇಖರ ಸರಸ್ವತೀ ಶ್ರೀಗಳಿಂದ ಸ್ಥಾಪನೆಗೊಂಡು ಭಾರತೀಯ ಶಾಸ್ತ್ರ ವಿದ್ಯೆ, ಸಂಸ್ಕೃತಿ, ಮತ್ತು ವೇದದ ಮೌಖಿಕ ಪರಂಪರೆ ಪಾಲನೆ ಮಾಡುತ್ತಿರುವ #Chennai ಚೆನ್ನೈನ ವೇದ ರಕ್ಷಣ ನಿಧಿ ಟ್ರಸ್ಟ್ಗೆ ವೇದಪೀಠ ಪ್ರಶಸ್ತಿ (1 ಲಕ್ಷ ರೂ. ನಗದು, ಸನ್ಮಾನಪತ್ರ, ಸ್ಮರಣಿ) ಘೋಷಿಸಲಾಗಿದೆ.
Also Read>> ಬೆಂಗಳೂರು | ಮಿಷನ್ ರಸ್ತೆಯಲ್ಲಿ ‘ಎನ್ ಯು’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ
ಮುಂಬೈನ #Mumbai ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ಸಮಗ್ರ ವೇದಾಧ್ಯಯನ ಮಾಡಿ, ಹೈದರಾಬಾದ್ #Hyderabad ಮಹಾನಗರದಲ್ಲಿ ಕಳೆದ 30 ವರ್ಷಗಳಿಂದ ವೇದವ್ಯಾಸ ವಿದ್ಯಾಪೀಠವನ್ನು ಸಮರ್ಥವಾಗಿ ಮುನ್ನಡೆಸುತ್ತ ನೂರಾರು ವಿದ್ಯಾರ್ಥಿಗಳನ್ನು ವೇದ ಪಂಡಿತರನ್ನಾಗಿಸಿದ ಸಾಧಕ ಪಂಡಿತ ಚಿಟಗುಪ್ಪ ಪದ್ಮನಾಭ ಆಚಾರ್ಯರಿಗೆ ಶ್ರೀ ಸತ್ಯತೀರ್ಥ ಪ್ರಶಸ್ತಿ(1 ಲಕ್ಷ ರೂ. ನಗದು, ಸನ್ಮಾನಪತ್ರ, ಸ್ಮರಣಿ) ಘೋಷಿಸಲಾಗಿದೆ.
ಶ್ರೀ ರಾಜವಿದ್ಯಾಮಾನ್ಯ ಪ್ರಶಸ್ತಿ
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀ ಪೇಜಾವರ ವಿಶ್ವೇಶತೀರ್ಥರ ಬಳಿ ಅಧ್ಯಯನ ನಡೆಸಿ ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ, ಗ್ರಂಥಕರ್ತ, ಪ್ರವಚನಕಾರರಾಗಿ ಖ್ಯಾತರಾಗಿರುವ ಬೆಮ್ಮತ್ತಿ ವಿಜಯೀಂದ್ರಾಚಾರ್ಯರು ಮೈಸೂರಿನಲ್ಲಿ ಸ್ತ್ರೀ ಧರ್ಮ- ಸಂಸ್ಕೃತಿ ಪಾಲನೆಗಾಗಿ 30 ಜನ ಹೆಣ್ಣುಮಕ್ಕಳಿಗೆ ಅಭೃಂಣೀ ಗುರುಕುಲ ನಡೆಸುತ್ತಿದ್ದಾರೆ. ಇವರಿಗೆ ಶ್ರೀಮಠವು ‘ ಶ್ರೀ ರಾಜವಿದ್ಯಾಮಾನ್ಯ’ ಪ್ರಶಸ್ತಿ (50 ಸಾವಿರ ರೂ. ನಗದು ಮತ್ತು ಸನ್ಮಾನಪತ್ರ) ಪ್ರಕಟಿಸಿದೆ.
Also Read>> ಸೊರಬ | ಉಳವಿಯಲ್ಲಿ ಬಿರುಗಾಳಿ–ಮಳೆಗೆ ಭಾರೀ ಹಾನಿ | ಲಕ್ಷಾಂತರ ರೂಪಾಯಿ ನಷ್ಟ
ರಾಜಹಂಸ ಪ್ರಶಸ್ತಿ
ಬಾಗಲಕೋಟೆಯಲ್ಲಿ ಅಖಿಲ ಭಾರತ ಮಾಧ್ವ ಮಹಾ ಮಂಡಲದ ಮಾರ್ಗದರ್ಶಕರಾಗಿ, ವಿಶ್ವ ಮಾಧ್ವ ಮಹಾಪರಿಷತ್ತಿನ ಸಂಚಾಲಕರಾಗಿ, ಐತರೇಯ ಸಂಶೋಧನಾ ಪ್ರಕಾಶನದ ನಿರ್ದೇಶಕರಾಗಿ ‘ಪ್ರಣತಿ ದರ್ಪಣ’ ಗ್ರಂಥದ ರಚನೆಕಾರರಾಗಿ, ಪ್ರವಚನಕಾರರಾಗಿ ಮಾಧ್ವ ಸಾಹಿತ್ಯ ಕ್ಷೇತ್ರಕ್ಕೆ 30 ವರ್ಷಗಳಿಂದ ವಿಶೇಷ ಕೊಡುಗೆ ನೀಡುತ್ತಿರುವ ವಿದ್ವಾನ್ ನಾಗಸಂಪಿಗೆ ರಘೂತ್ತಮ ಆಚಾರ್ಯರಿಗೆ ರಾಜಹಂಸ ಪ್ರಶಸ್ತಿ (50 ಸಾವಿರ ರೂ. ನಗದು ಮತ್ತು ಸನ್ಮಾನಪತ್ರ) ಘೋಷಣೆ ಮಾಡಲಾಗಿದೆ ಎಂದು ಎಂದು ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
28ರಂದು ಪ್ರದಾನ
ರಾಯಚೂರಿನ ಕೋಟೆಯ ಮುಂಗ್ಲಿ ಮುಖ್ಯಪ್ರಾಣ ದೇವರ ಗುಡಿ ಸಭಾಂಗಣದಲ್ಲಿ ಏ. 28ರ ಸಂಜೆ 5ಕ್ಕೆ ಶ್ರೀ ಮಠ, ಶ್ರೀ ಮಾಧ್ವ ರಾದ್ಧಾಂತ ಸಂವರ್ಧಕಸಭಾ, ಶ್ರೀ ಭಾಗವತಾಶ್ರಮ ಪ್ರತಿಷ್ಠಾನ ಮತ್ತು ಲೋಕಸಂಸ್ಕೃತಿ ಕಲಾ ವಿದ್ಯಾ ವಿಕಾಸ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜನೆ ಮಾಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 84ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 26ನೇ ಆರಾಧನೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾರಂಭದ ಸಾನ್ನಿಧ್ಯವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ವಹಿಸಲಿದ್ದಾರೆ. ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆಂದು ಮಠದ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















