ಕಲ್ಪ ಮೀಡಿಯಾ ಹೌಸ್ | ಮೈಸೂರು |
ಜ್ಞಾನಿಗಳು, ಪಂಡಿತರು, ವಿದ್ವಾಂಸರು, ಯತಿಗಳು ಮತ್ತು ಮನೆಯ ಹಿರಿಯರು ಹೇಳಿದ ಮಾತನ್ನು ಕೇಳಬೇಕು ಎಂದು ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ Shri Sathyathma Theertha Swamiji ಹೇಳಿದರು.
ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಉತ್ತರಾದಿ ಮಠವು ಅಗ್ರಹಾರದ ಕಾಶಿ ವಿಶ್ವೇಶ್ವರ ಸನ್ನಿಧಿ ಆವರಣದ ಬೃಹತ್ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಧರ್ಮ ಸಭೆಯಲ್ಲಿ ಅವರು ಭಾಗವತ ಸಂದೇಶ ನೀಡಿದರು.
ಎಲ್ಲ ಸೌಕರ್ಯಗಳು ಮತ್ತು ಸೌಲಭ್ಯಗಳೂ ಸುಲಭವಾಗಿ ದೊರೆಯುವ ಇಂದಿನ ದಿನಮಾನಗಳಲ್ಲಿ ಯಾರ ಮಾತನ್ನು ಏಕೆ ಕೇಳಬೇಕು ಎಂಬ ಅಹಂಭಾವ ಹೆಚ್ಚಾಗಿದೆ. ಬಹು ಮುಖ್ಯವಾಗಿ ಯುವಜನರಿಗೆ ಈ ಭಾವ ಹೆಚ್ಚಾಗಿ ಕಾಡುತ್ತಿರುವುದು ವಿಷಾದ ಎಂದರು.
ದೊಡ್ಡವರಿಗೆ ಜೀವನದ ಅನುಭವ ಹೆಚ್ಚು ಇರುತ್ತದೆ. ಕಿರಿಯರು ಹಾಳಾಗಬಾರದು ಎಂಬ ಕಳಕಳಿಯಿಂದ ಅವರು ಬೈದು ಬುದ್ಧಿವಾದ ಹೇಳುತ್ತಾರೆ. ಧರ್ಮ ಮಾರ್ಗದಲ್ಲಿ ನಡೆದರೆ ಕಷ್ಟಗಳು ಕಡಿಮೆ ಎಂಬುದು ಅವರ ಸ್ವ ಅನುಭವ. ಆದರೆ ಸಾವಧಾನದಿಂದ ಕೇಳುವವರೇ ಈಗ ಕಡಿಮೆ ಆಗುತ್ತಿದ್ದಾರೆ. ಇದು ಶೋಚನೀಯ ಎಂದು ಸ್ವಾಮೀಜಿ ಹೇಳಿದರು.
Also read: ಧಗ ಧಗನೆ ಹೊತ್ತಿ ಉರಿದ ವಾಸದ ಮನೆ!
ಉತ್ತಮ ಪ್ರಜೆಗಳನ್ನಾಗಿ ಮಾಡಿ:
ಬಾಲ್ಯದಿಂದಲೇ ಸಂಸ್ಕೃತಿ, ಸಂಪ್ರದಾಯಗಳನ್ನು ಮನೆಯಿಂದ ಕಲಿಯಬೇಕು. ಸಮಾಧಾನ, ನೆಮ್ಮದಿಗಳನ್ನು ರೂಢಿಸಿಕೊಳ್ಳಬೇಕು. ಹಿರಿಯರ, ಗುರುಗಳ ಸೇವೆಯನ್ನು ಶ್ರದ್ಧೆಯಿಂದ ಮಾಡಬೇಕು. ನ್ಯಾಯ, ನೆಮ್ಮದಿ ಮತ್ತು ಸಮಾಧಾನ ತಂದುಕೊಡುವ ಸಂಗಾತಿಯನ್ನು ವಿವಾಹ ಮಾಡಿಕೊಳ್ಳಬೇಕು. ಉತ್ತಮ ಸಂತಾನ ಪಡೆದು ಅವರನ್ನು ದೇಶದ ಉನ್ನತ ಪ್ರಜೆಗಳನ್ನಾಗಿ ಮಾಡಬೇಕು. ಇವುಗಳ ಜತೆ ಜತೆಗೇ ಇಂದ್ರಿಯ ನಿಗ್ರಹ ಸಾಧನೆ ಮಾಡಬೇಕು. ಇದೆಲ್ಲವನ್ನೂ ಭಾಗವತ ಅಂದೇ ಹೇಳಿದೆ. ಅನೇಕ ಋಷಿ ಮುನಿಗಳೂ ಇದನ್ನು ಮಾಡಿ, ಮಾಡಿಸಿದ್ದಾರೆ ಎಂದು ಸತ್ಯಾತ್ಮ ತೀರ್ಥರು ಶ್ಲೋಕಗಳ ಮೂಲಕ ಉಲ್ಲೇಖ ಮಾಡಿದರು. ಅಕ್ರಮ, ಅಪಕ್ವ ಮತ್ತು ಸ್ವೇಚ್ಛೆಯ ಮದದಿಂದ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ಜೀವನ ಪೂರ್ಣ ನೋವಿನಿಂದಲೇ ಕಳೆಯಬೇಕಾಗುತ್ತದೆ. ಯುವಜನರು ಇದನ್ನು ಚನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಜೀವನದ ಪ್ರತಿಯೊಂದು ನಿರ್ಧಾರದ ಸಮಯದಲ್ಲೂ ತಜ್ಞರ ಮಾತು, ಸಲಹೆ ಕೇಳಬೇಕು ಎಂದರು.
ನಿತ್ಯ ಕರ್ಮಗಳನ್ನು ಬಿಡಬೇಡಿ:
ಮನೆ ಮತ್ತು ಮನೆತನದ ಪದ್ಧತಿಗಳನ್ನು ತಪ್ಪದೇ ಪಾಲಿಸಬೇಕು. ನಿತ್ಯವೂ ಬೆಳಗಿನ ಕರ್ಮಗಳನ್ನು ಶ್ರದ್ಧೆಯಿಂದ ಮಾಡಬೇಕು. ಇದು ನಮ್ಮ ಸಾವಿರಾರು ವರ್ಷದ ಋಷಿ ಪರಂಪರೆಯಾಗಿದೆ. ಆದರೆ ಇಂದು ಬಹುತೇಕ ಯುವಜನರು ಹಾದಿ ತಪ್ಪಿದ ಕಾರಣ ನಾವು ಭಾರತದಲ್ಲೇ ಇದ್ದೇವಾ ಎನಿಸುವಷ್ಟು ಮಟ್ಟಿಗೆ ವಾತಾವರಣ ಕಲುಷಿತವಾಗಿದೆ. ಯುಗ ಯುಗದಲ್ಲಿ ನಮಗೆ ಮಹಾತ್ಮರ ದರ್ಶನವಾಗಿದೆ. ಅವರ ಸಂಸ್ಕೃತಿ, ಧರ್ಮ ಮತ್ತು ತ್ಯಾಗಗಳು ಎಲ್ಲಿಗೆ ಹೋಗಿವೆ ? ಯುವಜನರು ಏಕೆ ಯಾರ್ಯಾರನ್ನೋ ಅನುಕರಣೆ ಮಾಡುತ್ತಾರೆ ? ಶ್ರವ್ಯ ಮತ್ತು ದೃಶ್ಯ ಮಾಧ್ಯಮಗಳು ಹೇಗೆಲ್ಲಾ ಪರಿಣಾಮ ಬೀರಿವೆ ಎಂಬ ಬಗ್ಗೆ ಚಿಂತನ- ಮಂಥನ ನಡೆಯಬೇಕಿದೆ ಎಂದು ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.
ಎಚ್ಚರಿಕೆ ಇರಲಿ: ಭಾಗವತದಲ್ಲಿ ಬರುವ ಕಪಿಲ ನಾಮಕ ಪರಮಾತ್ಮನ ಕಥೆ ಉಲ್ಲೇಖಿಸಿದ ಅವರು, ಈತ ಕರ್ಮಗಳಿಗೆ ಪ್ರೇರಕ. ಪುಣ್ಯದ ಫಲ ನೀಡುವಾತ. ಉಪನಿಷತ್ತು ಮತ್ತು ಆಚಾರ್ಯ ಮಧ್ವರ ಗೀತಾಭಾಷ್ಯದಲ್ಲೂ ಇದನ್ನು ಉಲ್ಲೇಖ ಮಾಡಿದ್ದಾರೆ. ಧರ್ಮ ಮತ್ತು ಸಂಸ್ಕೃತಿಯನ್ನು ಬಿಟ್ಟರೆ ದೇಶ ಸರ್ವನಾಶವಾಗಲಿದೆ. ಈ ಎಚ್ಚರ ಎಲ್ಲರಿಗೂ ಇರಬೇಕು ಎಂದು ಸ್ವಾಮೀಜಿ ಅವರು ಕಿವಿಮಾತು ಹೇಳಿದರು.
ಹೈದರಾಬಾದಿನ ಹಿರಿಯ ವಿದ್ವಾಂಸ ಜಯತೀರ್ಥಾಚಾರ್ಯ ಪಗಡಾಲ ಮತ್ತು ವಿಜಯ ವಿಠಲಾಚಾರ್ಯ ಕಾಡಲೂರು ಅವರಿಂದ ಪ್ರವಚನ ನೆರವೇರಿತು.
ಆರೋಗ್ಯ ತಪಾಸಣೆ ಬೃಹತ್ ಶಿಬಿರ
ಹೈದರಾಬಾದಿನ ಖ್ಯಾತ ತಜ್ಞ ಡಾ . ಪ್ರಸಾದ್ ನೇತೃತ್ವದ 20ಕ್ಕೂ ಹೆಚ್ಚು ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ಬೃಹತ್ ಶಿಬಿರ ನೆರವೇರಿತು. ಸಂಜೆ ಖ್ಯಾತ ಗಾಯಕ ರಾಹುಲ್ ವೆಲ್ಲಾಳ್ ಅವರಿಂದ ದಾಸರ ಪದಗಳ ಗಾಯನ ಕಚೇರಿ ರಂಜಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















