ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಶಿವಮೊಗ್ಗ ರಘು |
ಹಿಂದೂ ಪಂಚಾಂಗದ ಪ್ರತಿ ಮಾಸದಲ್ಲಿ ಎರಡು ಏಕಾದಶಿಗಳು ಬರುತ್ತವೆ. ಚಾಂದ್ರಮಾನ ಮಾಸದ ಪ್ರತೀಪಕ್ಷದ 11ನೇ ದಿನ ಮಾಡುವ ಈ ವ್ರತವು ಎಲ್ಲ ವ್ರತಗಳಿಗಿಂಗಲೂ ಶ್ರೇಷ್ಠ ಎಂದು ಭಾಗವತವೂ ಪ್ರತಿಪಾದಿಸಿದೆ. ಏಕಾದಶಿ ಉಪವಾಸದ ದಿನ ವಿಷ್ಣುವಿನ ಆರಾಧನೆಗೆ ಪ್ರಶಸ್ತ ದಿನವಾಗಿದೆ. ಹಿಂದೂಗಳಿಗೆ ಅದರಲ್ಲೂ ವಿಶೇಷವಾಗಿ ವೈಷ್ಣವ ಪಂಥದವರಿಗೆ ಅತ್ಯಂತ ಪಾವನವಾದ ಏಕಾದಶಿಯನ್ನು ಹರಿದಿನ ಎನ್ನಲಾಗಿದೆ. ಒಂದು ವರ್ಷದಲ್ಲಿ ಬರುವ 24 ಏಕಾದಶಿಗಳಲ್ಲಿ ಕೆಲವು ಮಾತ್ರ ತಮ್ಮ ಹಿನ್ನೆಲೆಗಳಿಂದ ಪ್ರಧಾನವಾಗಿವೆ. ಚೈತ್ರ ಮಾಸದ ವರೂಥಿನೀ, ಧನುರ್ಮಾಸದಲ್ಲಿ ಬರುವ ವೈಕುಂಠ ಏಕಾದಶಿ, ಮಾರ್ಗಶಿರದ ಮೋಕ್ಷದಾ, ಆಷಾಢದ ಶಯನೀ ಮತ್ತು ಜೇಷ್ಠ ಮಾಸದ ನಿರ್ಜಲ ಏಕಾದಶಿ ಪ್ರಮುಖವಾಗಿವೆ.
ವಿಷ್ಣು ಪುರಾಣದ ಆಧಾರದ ಪ್ರಕಾರ ನಿರ್ಜಲ ಏಕಾದಶಿಯ ದಿನವು ಸ್ವತಃ ವಿಷ್ಣುವಿನ ಒಂದು ರೂಪವೇ ಆಗಿದೆ. ಈ ದಿನದಂದು ಆಚರಿಸಲಾಗುವ ವ್ರತವು ಎಲ್ಲ ಪಾಪಗಳನ್ನೂ ನಾಶ ಮಾಡುತ್ತದೆ ಎನ್ನಲಾಗಿದೆ. ನಿರ್ಜಲ ಏಕಾದಶಿಯನ್ನು ಕಟ್ಟು ನಿಟ್ಟಾಗಿ ಆಚರಿಸಿ ಮರುದಿನ ಪಾರಣೆ ಮಾಡುವವರು ವಿಷ್ಣುವಿನ ಪರಮ ಅನುಗ್ರಹವನ್ನು ಪಡೆಯುತ್ತಾರೆ ಎಂದಿದೆ ಮಾರ್ಕಾಂಡೇಯ ಪುರಾಣ.
ನಿರ್ಜಲ ಏಕಾದಶಿ | ಮೋಕ್ಷ ಸಾಧನೆ ನಂಬಿಕೆ ಹೀಗಿದೆ
ದೇಹ ಅವಸಾನವಾದ ನಂತರ ಯಮನ ದೂತರು ವ್ಯಕ್ತಿಯ ಆತ್ಮವನ್ನು ತೆಗೆದುಕೊಂಡು ಹೋಗುತ್ತಾರೆ. ಯಮನು ವ್ಯಕ್ತಿಯ ಪಾಪ, ಪುಣ್ಯ ನಿರ್ಣಯಿಸಿ ಅವನನ್ನು ಸ್ವರ್ಗ ಅಥವಾ ನರಕಕ್ಕೆ ಹಾಕುತ್ತಾನೆ ಎಂಬುದು ಹಿಂದು ಧರ್ಮದ ಪರಮ ನಂಬಿಕೆ. ಹಾಗಿರುವಾಗ ಯಾರು ನಿರ್ಜಲ ಏಕಾದಶಿ ಆಚರಣೆಗಳನ್ನು ಮಾಡಿರುತ್ತಾರೆಯೋ ಅವರಿಗೆ ಯಮನ ತೀರ್ಪಿನಲ್ಲಿ ದೊಡ್ಡ ಕ್ಷಮೆ ಇದೆ. ವಿಷ್ಣು ದೂತರು ವಿಷ್ಣುವಿನ ವಾಸಸ್ಥಾನವಾದ ವೈಕುಂಠಕ್ಕೇ ಆತ್ಮವನ್ನು ತೆಗೆದುಕೊಂಡು ಹೋಗಿ ಮುಕ್ತಿ ಕರುಣಿಸಲು ನೆರವಾಗುತ್ತಾರೆ ಎಂಬ ನಂಬಿಕೆ ಇದೆ.
ವರ್ಷದ ಉಳಿದೆಲ್ಲಾ ಏಕಾದಶಿ ವ್ರತದ ಸಂದರ್ಭದಲ್ಲಿ ಕೆಲವರು ಹಣ್ಣು, ಹಾಲು, ನೀರು ಸೇವಿಸುತ್ತಾರೆ. ಅಶಕ್ತರು, ವೃದ್ಧರು, ಬಾಣಂತಿಯರು, ರೋಗಿಗಳು ಮತ್ತು ಮಕ್ಕಳಿಗೆ ಉಪವಾಸದಲ್ಲಿ ಕೊಂಚ ರಿಯಾಯಿತಿ ಪಡೆಯಬಹುದು. ಆಗ ಅವರು ನೀರು ಇತ್ಯಾದಿ ದ್ರವ ಪದಾರ್ಥಗಳನ್ನು ಸೇವಿಸುವ ಮೂಲಕ ವ್ರತ ಆಚರಿಸುತ್ತಾರೆ. ನಿರ್ಜಲ ಏಕಾದಶಿ ವ್ರತವನ್ನು ನೀರಿಲ್ಲದೆ ಆಚರಿಸಲಾಗುತ್ತದೆ. ಎಲ್ಲಾ ಏಕಾದಶಿಗಳನ್ನು ಆಚರಿಸಲು ಸಾಧ್ಯವಾಗದವರು ಈ ಪವಿತ್ರ ದಿನವನ್ನು ಆಚರಿಸುವುದು ಗಮನೀಯ.
ನಿರ್ಜಲ ಏಕಾದಶಿ ಹೆಸರು ಹೇಗೆ ಬಂತು?
ನಿರ್ಜಲ ಏಕಾದಶಿ ಎಂದರೆ ನೀರನ್ನೂ ಸೇವಿಸದೆ ಮಾಡುವ ಉಪವಾಸ ವ್ರತ. ಇದಕ್ಕೆ ಈ ಹೆಸರು ಹೇಗೆ ಬಂತು, ಏಕೆ ಬಂತು, ಅತ್ಯಂತ ಪ್ರತಿಫಲದಾಯಕ ಮತ್ತು ವರ್ಷದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದು ಎಂಬುದು ಹೇಗೆ, ಏಕೆ ಅಧಿಕ ಪುಣ್ಯವನ್ನು ನೀಡುತ್ತದೆ ಎಂದು ಕೊಂಚ ಅವಲೋಕನ ಮಾಡೋಣ.
ಈ ಏಕಾದಶಿಗೆ ಪಾಂಡವ ಭೀಮ ಏಕಾದಶಿ ಅಥವಾ ಪಾಂಡವ ನಿರ್ಜಲ ಏಕಾದಶಿ ಎಂದೂ ಹೆಸರಿದೆ. ಮಹಾಭಾರತದ ಐದು ಪಾಂಡವ ಸಹೋದರರಲ್ಲಿ ಎರಡನೆಯವನೇ ಭೀಮ. ಇವನಿಂದ ಏಕಾದಶಿ ಖ್ಯಾತಿ ಪಡೆಯಿತು. ತಿನ್ನುವುದೂ ಎಂದರೆ ಅತಿ ಪ್ರಿಯ ಈ ಭೀಮನಿಗೆ. ಆತ ಕೃಷ್ಣನ ಸಲಹೆಯಂತೆ ಎಲ್ಲಾ ಏಕಾದಶಿ ಉಪವಾಸಗಳನ್ನು ಆಚರಿಸಲು ಮುಂದಾದ. ಆದರೆ ಅವನ ಹಸಿವಿನ ದಾಹವನ್ನು ಅವನಿಗೇ ನಿಯಂತ್ರಿಸಲು ಆಗಲಿಲ್ಲ. ಇದರ ಪರಿಹಾರಕ್ಕಾಗಿ ಅವನು ಮಹಾಭಾರತದ ಲೇಖಕ ಮತ್ತು ಪಾಂಡವರ ತಾತ ವ್ಯಾಸ ಮಹರ್ಷಿಗಳ ಸಲಹೆ ಕೇಳಿದ. ವೃಕೋಧರನಿಗೆ ಏನು ಹೇಳಬೇಕು ಎಂದು ಯೋಚಿಸಿ ಅವರು ಒಂದು ಪರಿಹಾರ ಸೂಚನೆ ಮಾಡಿದರು.
ಜ್ಯೇಷ್ಠ ಮಾಸದಲ್ಲಿ ಬರುವ ನಿರ್ಜಲ ಏಕಾದಶಿಯನ್ನು ಶ್ರದ್ಧೆಯಿಂದ ಆಚರಣೆ ಮಾಡು ಎಂದು ವ್ಯಾಸರು ಸಲಹೆ ನೀಡಿದನು. ಭೀಮನು ನಿರ್ಜಲ ಏಕಾದಶಿಯನ್ನು ಕಟ್ಟುನಿಟ್ಟಾಗಿ ಮಾಡಿದ. ಇದರ ಮೂಲಕ ಆತ ವರ್ಷದ ಎಲ್ಲಾ 24 ಏಕಾದಶಿಗಳ ಪುಣ್ಯವನ್ನು ಒಂದೇ ವ್ರತದಿಂದ ಸಂಪಾದನೆ ಮಾಡಿದ ಎನ್ನುತ್ತದೆ ಮಹಾಭಾರತ. ಬ್ರಹ್ಮ ವೈವರ್ತ ಪುರಾಣವೂ ನಿರ್ಜಲ ಏಕಾದಶಿ ವ್ರತದ ಮಹಿಮೆಯನ್ನು ಕೊಂಡಾಡಿದೆ. ಭಾಗವತವೂ ಪ್ರಧಾನವಾಗಿ ಉಲ್ಲೇಖ ಮಾಡಿದೆ.
ಏಕಾದಶಿ ಉಪವಾಸದಿಂದ ಪಾಪ ವಿಮೋಚನೆಯಾಗುತ್ತದೆ. ಮನಸ್ಸಿನ ನಿಯಂತ್ರಣ, ದೈಹಿಕ ಶುದ್ಧೀಕರಣ ಮತ್ತು ಮೋಕ್ಷ ಪ್ರಾಪ್ತಿಗೆ ಮಹಾಮಾರ್ಗ ಎಂಬುದೇ ವೈಷ್ಣವ ಪಂಥದವರ ಅಚಲ ನಂಬಿಕೆ. ಇತರ ಪಂಥ, ಧರ್ಮದಲ್ಲೂ ಉಪವಾಸದ ಬಗ್ಗೆ ಗೌರವಾಧರಗಳಿವೆ.
ನಿರ್ಜಲ ಏಕಾದಶಿಯಂದು ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ 24 ಗಂಟೆಗಳ ಕಾಲ ನೀರನ್ನೂ ಸೇವನೆ ಮಾಡದೇ ಉಪವಾಸವನ್ನು ಆಚರಿಸಲಾಗುತ್ತದೆ. ವೃದ್ಧರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಜಲ ಸೇವಿಸದೇ ಆಚರಿಸುವುದುಂಟು. ಇದು ಅವರ ವಯೋಧರ್ಮ. ಆದಾಗ್ಯೂ, ಆಚಮನ ಶುದ್ಧೀಕರಣ ಭಾಗವಾಗಿ ಒಂದು ಉದ್ಧರಣೆ ನೀರನ್ನು ಸೇವಿಸಬಹುದು. ಅದಕ್ಕಿಂತ ಹೆಚ್ಚಿನ ನೀರು ಸೇವನೆ ಸಲ್ಲದು. ನಿರ್ಲಲ ಏಕಾದಶಿಗಳ ಮತ್ತೊಂದು ವಿಶೇಷ ಎಂದರೆ ಇಂದು ಸಾತ್ವಿಕರಿಗೆ, ಸಾಧಕರಿಗೆ ದಾನ ಮಾಡುವುದು. ವಸ್ತ್ರ, ಆಹಾರ ಧಾನ್ಯಗಳು, ಛತ್ರಿಗಳು, ಬೀಸಣಿಗೆಗಳು, ನೀರಿನಿಂದ ತುಂಬಿದ ತಂಬಿಗೆ, ಕೊಡ, ಬೆಳ್ಳಿ, ಬಂಗಾರ ಇತ್ಯಾದಿ ಶಕ್ತಿ ಇದ್ದಷ್ಟು ದಾನ ಮಾಡಬಹುದು. ಇದರಿಂದ ಅಧಿಕ ಪುಣ್ಯವಿದೆ.
ನಿರ್ಜಲ ಏಕಾದಶಿ ದಿನ ಏನು ಮಾಡಬಹುದು?
ಏಕಾದಶಿ ದಿನಭಜನೆ, ಹರಿಧ್ಯಾನ, ವಿಷ್ಣು ಸಹಸ್ರನಾಮ ಪಾರಾಯಣ, ದೈನಂದಿನ ಪೂಜಾವಿಧಿ ಆಚರಿಸುವ ಮತ್ತು ಕುಟುಂಬ ಸದಸ್ಯರೊಂದಿಗೆ ಹರಿ ಧ್ಯಾನದಿಂದಲೇ ಜಾಗರಣೆ ಮಾಡುವ ಮೂಲಕ ಅಧ್ಯಾತ್ಮಿಕ ಸಾಧನೆ ಮಾಡಲಾಗುತ್ತದೆ. ಉಪ ಎಂದರೆ ಹತ್ತಿರ. ವಾಸ ಎಂದರೆ ಇರುವುದು = ವಿಷ್ಣುವಿನ ಸನ್ನಿಧಿಗೆ ಹತ್ತಿರವಿದ್ದು, ಆತನ ಪ್ರೀತಿ, ಅನಂತ ಕೃಪೆಗೆ ಪಾತ್ರರಾಗುವುದು ಎಂದು ಅರ್ಥ. ಒಟ್ಟಾರೆ ಈ ದಿನ ಅಡುಗೆ- ಊಟ ಇತ್ಯಾದಿಗೆ ನೀಡುವ ಸಮಯ ಉಳಿಸಿ ಅದನ್ನು ಧ್ಯಾನ ಸಾಧನೆಗೆ ಮೀಸಲಿಡಬೇಕು. ಬ್ರಹ್ಮ ಮುಹೂರ್ತದಲ್ಲಿ ಎದ್ದು, ನದಿ, ಕಲ್ಯಾಣಿ ಅಥವಾ ಸಮುದ್ರ ಸ್ನಾನ ಮಾಡಬೇಕು. ಇಲ್ಲದಿದ್ದರೆ ಮನೆಯಲ್ಲೇ ಗಂಗಾದಿ ಸಕಲ ತೀರ್ಥಗಳನ್ನು ಜಲದಲ್ಲಿ ಆವಾಹನೆ ಮಾಡಿ, ದೇವರ ಸ್ಮರಣೆ ಸಹಿತ ಸ್ನಾನ ಮಾಡಬೇಕು ಎನ್ನುತ್ತದೆ ವ್ರತದ ಧರ್ಮ.
ವಿದ್ಯಾರ್ಥಿಗಳು, ಅವಿವಾಹಿತರು ಮತ್ತು ಮಕ್ಕಳಿಲ್ಲದವರು ನಿರ್ಜಲ ಏಕಾದಶಿಯಂದು ಉಪವಾಸ ಮಾಡಿದರೆ ಫಲ ಸಿದ್ಧಿ ಎನ್ನಲಾಗಿದೆ. ಜಾತಕದಲ್ಲಿ ಯಾವುದೇ ದೋಷಗಳಿದ್ದರೂ ಅದು ನಿವಾರಣೆ ಆಗುತ್ತದೆ. ಇಂಥವರ ಕುಟುಂಬಗಳು ಉತ್ತರೋತ್ತರ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಹೊಂದುತ್ತವೆ. ಈ ಜನ್ಮದಲ್ಲಿ ಮಾತ್ರವಲ್ಲ, ಕೋಟಿ ಜನ್ಮಗಳಲ್ಲೂ ಇದರ ಫಲ ಮತ್ತು ಸಿದ್ಧಿಗಳನ್ನು ಪಡೆಯುತ್ತಾರೆ ಎಂದು ಪ್ರಾಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ನಿರ್ಜಲ ಏಕಾದಶಿ ದಿನ ಹೇಗಿರಬೇಕು?
ಈ ದಿನ ಸೌಮ್ಯ ಸ್ವಭಾವದಿಂದ ವರ್ತಿಸಬೇಕು. ಜಗಳ, ಮನಸ್ಥಾಪ ಸಲ್ಲದು. ರಾಮಾಯಣ, ವಿಷ್ಣು ಸಹಸ್ತ್ರನಾಮ, ಭಗವದ್ಗೀತೆ, ಭಾಗವತ ಪಠಣ ಸೂಕ್ತವಾಗಿದೆ. ನಿರ್ಜಲ ಏಕಾದಶಿ ದಿನ ದೇವರನ್ನು ಮತ್ತು ಶಾಲಗ್ರಾಮಗಳನ್ನು ಪೂಜಿಸುವಾಗ ಓಂ ನಮೋ ಭಗವತೇ ವಾಸುದೇವಾಯಎಂಬ ಮಂತ್ರವನ್ನು ಪಠಿಸಬೇಕು. ತುಪ್ಪದ ದೀಪವನ್ನು ಬೆಳಗಿಸಿ, ಹಣ್ಣುಗಳು ಮತ್ತು ಹೂವುಗಳನ್ನು ದೇವರಿಗೆ ಅರ್ಪಿಸಿ ಪೂಜೆ ಮಾಡಬೇಕು. ಅಂದು ರಾತ್ರಿ ಪೂರ್ಣ ಜಾಗರಣೆ ಮಾಡಬೇಕು.
ಆರೋಗ್ಯ ವಿಜ್ಞಾನವೂ ಪ್ರತಿಪಾದಿಸಿದೆ
ಏಕಾದಶಿಯಂದು ಚಂದ್ರನ ಪ್ರಭಾವವು ಮನುಷ್ಯನ ಮನಸ್ಸಿನ ಮೇಲೆ ತೀವ್ರವಾಗಿರುತ್ತದೆ. ಈ ಸಮಯದಲ್ಲಿ ಉಪವಾಸ ಮಾಡುವುದರಿಂದ ಚಂಚಲ ಮನಸ್ಸನ್ನು ಹತೋಟಿಯಲ್ಲಿಡಲು, ಸಾಂಪ್ರದಾಯಿಕ ಶಿಸ್ತನ್ನು ರೂಢಿಸಿಕೊಳ್ಳಲು ಸಹಕಾರಿಯಾಗಿದೆ ಎನ್ನುತ್ತದೆ ಜ್ಯೋತಿಷ ಶಾಸ್ತ್ರ. ಭಾಗವತ, ಪದ್ಮ ಪುರಾಣಾದಿಗಳು ಏಕಾದಶಿ ಮಹತ್ವ ದಾಖಲಿಸಿವೆ. ಇದಕ್ಕಿಂತಾ ಮಿಗಿಲಾದ ವ್ರತವೇ ಇಲ್ಲ ಎಂದಿದ್ದಾರೆ ಬ್ರಹ್ಮದೇವರು. ಏಕಾದಶಿಯ ಉಪವಾಸವು ಜೀರ್ಣಕ್ರಿಯೆಗೆ ವಿಶ್ರಾಂತಿ ನೀಡಿ ದೇಹವನ್ನು ನಿರ್ವಿಷಗೊಳಿಸುತ್ತದೆ. ಇದು ಚಯಾಪಚಯ ಕ್ರಿಯೆಯನ್ನು (ಮೆಟಬಾಲಿಸಂ) ಸುಧಾರಿಸುತ್ತದೆ. ಮನವನ್ನು ಚೇತೋಹಾರಿಗೊಳಿಸಿ, ಜಾಡ್ಯ ದೂರ ಮಾಡುತ್ತದೆ. 15 ದಿನಗಳಿಗೆ ಒಮ್ಮೆ ನಿರ್ಜಲ ಉಪವಾಸ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗಲು ಪೂರಕ ಎಂಬುದನ್ನು ಆಯುರ್ವೇದ, ಆಧುನಿಕ ವಿಜ್ಞಾನವೂ ಪುಷ್ಠೀಕರಿಸಿದೆ.
ಏನು ಮಾಡಬಾರದು?
ಏಕಾದಶಿ ದಿನ ಜೂಜಾಟ, ಕ್ರೀಡೆ, ನಿದ್ರೆ, ಕೋಪ, ಸುಳ್ಳು ಹೇಳುವುದು, ಸಂಕುಚಿತ ಮನೋಭಾವ, ವ್ಯಾಯಾಮ ಮಾಡುವುದು, ಕೂದಲು ಕತ್ತರಿಸುವುದು (ಕಟಿಂಗ್), ದೇಹಕ್ಕೆ ಎಣ್ಣೆ ಲೇಪನ ಮತ್ತು ಇತರರಿಗೆ ಕೆಟ್ಟದ್ದನ್ನು ಬಯಸಬಾರದು. ಯಾವುದೇ ಜೀವಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವುದು ಅಥವಾ ಕ್ರೌರ್ಯ ಸಲ್ಲದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









