ಕಲ್ಪ ಮೀಡಿಯಾ ಹೌಸ್ | ಸಾಗರ |
ಮನೆಯ ಹಿತ್ತಲಿನ ತೋಟದಲ್ಲಿ ತಂದೆಯೊಂದಿಗೆ ಇದ್ದ ವೇಳೆ ಕಣಜ ಹುಳುಗಳ (paper-wasp)ದಾಳಿಗೆ ಒಳಗಾದ 8 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ (Sagara) ಸಾಗರ ತಾಲೂಕಿನ ಹೆಗ್ಗೋಡು (Heggodu) ಸಮೀಪದ ಹತ್ತಿಸರ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಹತ್ತಿಸರ ಗ್ರಾಮದ ನಿವಾಸಿ ವೆಂಕಟೇಶ್ ಅವರ ಪುತ್ರ ನಿಷ್ಮಿತ್ (8) ಎಂದು ಗುರುತಿಸಲಾಗಿದೆ.
ತಂದೆಯೊಂದಿಗಿದ್ದ ವೇಳೆ ಹುಳುಗಳ ದಾಳಿ
ನಿಷ್ಮಿತ್ ತನ್ನ ತಂದೆ ವೆಂಕಟೇಶ್ ಅವರೊಂದಿಗೆ ಮನೆಯ ಹಿತ್ತಲಿನ ತೋಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಇಬ್ಬರ ಮೇಲೂ ಕಡ್ಜದ ಹುಳುಗಳು ದಾಳಿ ಮಾಡಿವೆ ಎನ್ನಲಾಗಿದೆ. ದಾಳಿಯಲ್ಲಿ ಬಾಲಕನಿಗೆ ತೀವ್ರವಾಗಿ ಹುಳುಗಳ ಕಚ್ಚುವಿಕೆ ಉಂಟಾಗಿತ್ತು.
ಘಟನೆಯ ಬಳಿಕ ತಕ್ಷಣವೇ ನಿಷ್ಮಿತ್ ಅವರನ್ನು ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಬಾಲಕನ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡುಬರದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಆದರೆ, ವೈದ್ಯರು ನೀಡಿದ ಚಿಕಿತ್ಸೆಯ ನಡುವೆಯೂ ನಿಷ್ಮಿತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತಂದೆಗೂ ಹುಳುಗಳ ಕಡಿತ
ಘಟನೆಯಲ್ಲಿ ಬಾಲಕನ ತಂದೆ ವೆಂಕಟೇಶ್ ಅವರಿಗೂ ಕಡ್ಜದ ಹುಳುಗಳು ಕಚ್ಚಿದ್ದು, ಅವರು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
Also Read>> ಶಿವಮೊಗ್ಗ | ಹೆತ್ತ ತಂದೆಯನ್ನೇ ಕೊಲೆ ಮಾಡಿ ಬಾವಿಗೆ ಎಸೆದ ದೂರ್ತ ಪುತ್ರ
Sagara ಹತ್ತಿಸರ ಗ್ರಾಮದಲ್ಲಿ ಶೋಕ
8 ವರ್ಷದ ಬಾಲಕ ನಿಷ್ಮಿತ್ ಅಕಾಲಿಕವಾಗಿ ಮೃತಪಟ್ಟಿರುವುದು ಕುಟುಂಬಸ್ಥರಿಗೆ ತೀವ್ರ ಆಘಾತವನ್ನುಂಟು ಮಾಡಿದ್ದು, ಹತ್ತಿಸರ ಗ್ರಾಮದಲ್ಲೂ ದುಃಖದ ವಾತಾವರಣ ನಿರ್ಮಾಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











