ಕಲ್ಪ ಮೀಡಿಯಾ ಹೌಸ್ | ಬಾರಕೂರು(ಉಡುಪಿ) |
ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಸತ್ಯತೀರ್ಥ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆ ಹಾಗೂ ಅವರ ಶಿಷ್ಯರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರ 47ನೇ ಚಾತುರ್ಮಾಸ್ಯ ವ್ರತದ ಶುಭಸಂದರ್ಭದಲ್ಲಿ (Udupi) ಉಡುಪಿಯ ಬಾರಕೂರಿನ ಭಂಡಾರಕೇರಿ ಮಠದಲ್ಲಿ (Bandarakeri Matha) ಹತ್ತು ಮಂದಿ ಸಾಮವೇದ ವಿದ್ವಾಂಸರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನೂರು ಜನ ವೇದವಿದ್ವಾಂಸರ ಸಮ್ಮಾನದ ಅಂಗವಾಗಿ ಆಯೋಜಿಸಲಾಗಿರುವ ವಿಶೇಷ ಕಾರ್ಯಕ್ರಮದ ಭಾಗವಾಗಿ ಹತ್ತು ಸಾಮವೇದ ವಿದ್ವಾಂಸರಿಗೆ ‘ಸಾಮಗಾನಸುರಾಚಾರ್ಯ’, ‘ಸಾಮೋದ್ಗಾನದೇಶಿಕ’ ಹಾಗೂ ‘ಸಾಮಗಾನಶುಚಿವ್ರತ’ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಶ್ರೀ ವಿದ್ಯೇಶತೀರ್ಥ ಶ್ರೀಪಾದರು ವಿವಿಧ ರಾಜ್ಯಗಳ ವಿಶಿಷ್ಟ ಸಾಧಕರನ್ನು ಶಾಲು ಹೊದಿಸಿ, ಪ್ರಶಸ್ತಿ ಹಾಗೂ ಯೋಗ್ಯ ಸಂಭಾವನೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದ ಬಳಿಕ ಸಮ್ಮಾನಿತ ಸೇರಿದಂತೆ ಎಲ್ಲ ವೇದವಿದ್ವಾಂಸರು ಒಂಬತ್ತು ದಿನಗಳ ಕಾಲ ನಡೆಸಿದ ಸಾಮವೇದ ಪಾರಾಯಣ ಯಜ್ಞವನ್ನು ಶ್ರೀ ವಿದ್ಯೇಶತೀರ್ಥ ಶ್ರೀಪಾದರ ಮೂಲಕ ಶ್ರೀಕೃಷ್ಣನಿಗೆ ಸಮರ್ಪಿಸುವುದರೊಂದಿಗೆ ಸಮಾಪ್ತಿಗೊಳಿಸಿದರು.
Udupi : ಸಾಮವೇದ ವಿದ್ಯೆ ಉಳಿಸುವ ವಿದ್ವಾಂಸರ ಸೇವೆ ಶ್ಲಾಘನೀಯ
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ತಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರು ಜ್ಞಾನಸೇವೆಯ ಮೂಲಕ ಶ್ರೀಕೃಷ್ಣನನ್ನು ಒಲಿಸಿಕೊಂಡ ಮಹಾನ್ ಸಂತರು ಎಂದು ಸ್ಮರಿಸಿದರು. ಅವರ ಅತ್ಯುಚ್ಚ ಜ್ಞಾನ ದಾನ ನಡೆದ ಪವಿತ್ರ ಸ್ಥಳವೇ ಭಂಡಾರಕೇರಿ ಮಠವಾಗಿದ್ದು, 1925ರಲ್ಲಿ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರು ಸತ್ಯತೀರ್ಥ ಪೀಠವನ್ನು ಅಲಂಕರಿಸಿದ್ದರು. ಅವರ ಸ್ಮರಣಾರ್ಥವಾಗಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
“ವೇದಾನಾಂ ಸಾಮವೇದೋಸ್ಮಿ” ಎಂಬ ಶ್ರೀಕೃಷ್ಣನ ವಾಕ್ಯವನ್ನು ಉಲ್ಲೇಖಿಸಿದ ಅವರು, ವೇದಗಳಲ್ಲಿ ಸಾಮವೇದಕ್ಕೆ ಇರುವ ವಿಶೇಷ ಮಹತ್ವವನ್ನು ವಿವರಿಸಿದರು. ಇಂದಿನ ಕಾಲದಲ್ಲಿ ಸಾಮವೇದವನ್ನು ಅಧ್ಯಯನ ಮಾಡುವ ವಿದ್ವಾಂಸರು ಅತ್ಯಂತ ವಿರಳರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಪಾರ ಶ್ರಮ ಹಾಗೂ ಶ್ರದ್ಧೆಯಿಂದ ಸಾಮವೇದದ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವ ವಿದ್ವಾಂಸರ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಒಂಬತ್ತು ದಿನಗಳ ಅವಧಿಯಲ್ಲಿ ವಿದ್ವಾಂಸರು ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಸಾಮವೇದ ಗಾನವನ್ನು ನಡೆಸಿದ್ದಾರೆ. ಅವರ ಈ ಅಪೂರ್ವ ಸೇವೆಗೆ ಶ್ರೀ ಮಧ್ವವ್ಯಾಸರ ಅನುಗ್ರಹ ದೊರೆಯಲಿ ಹಾಗೂ ಮುಂದಿನ ದಿನಗಳಲ್ಲಿಯೂ ಅವರು ಹೆಚ್ಚಿನ ವ್ಯಾಙ್ಮಯ ಸೇವೆ ನಡೆಸುವಂತಾಗಲಿ ಎಂದು ಶ್ರೀಪಾದರು ಹಾರೈಸಿದರು.
ಸಾಮವೇದ ಅಧ್ಯಯನಕ್ಕೆ ಯುವಕರು ಮುಂದಾಗಬೇಕು
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ವಿದ್ವಾನ್ ಶ್ರೀ ಉದಯಕುಮಾರ ಸರಳತ್ತಾಯ ಅವರು ಶ್ರೀ ಕೃಷ್ಣ ಮುಖ್ಯಪ್ರಾಣರ ಗಂಧಪ್ರಸಾದವನ್ನು ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಗೆ ಅರ್ಪಿಸಿದರು. ಶ್ರೀಪಾದರು ನಡೆಸುತ್ತಿರುವ ಇಂತಹ ವಿಶಿಷ್ಟ ಕಾರ್ಯಕ್ರಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರೇರಣೆ ಪಡೆದು ಸಾಮವೇದ ಅಧ್ಯಯನದತ್ತ ಮುಖಮಾಡುವಂತಾಗಲಿ ಎಂದು ಅವರು ಆಶಿಸಿದರು.
ಸಮ್ಮಾನಿತರಾದ ಶ್ರೀ ಪ್ರಭಾಕರ ಅಡಿಗ, ಶ್ರೀ ದತ್ತಾತ್ರೇಯ ಶರ್ಮಾ ಹಾಗೂ ಶ್ರೀ ಸುದರ್ಶನ ಸಾಮಗ ಅವರು ಮಾತನಾಡಿ, ಗ್ರಾಮೀಣ ಪರಿಸರದ ಮಧ್ಯದಲ್ಲಿರುವ ಶ್ರೀಮಠದಲ್ಲಿ ಶ್ರೀಪಾದರು ನಡೆಸುತ್ತಿರುವ ಅಭೂತಪೂರ್ವ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಸಾಮವೇದ ವಿದ್ಯೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ಈ ಅಪರೂಪದ ವೇದ ವಿದ್ಯೆಯನ್ನು ಉಳಿಸಿ ಬೆಳೆಸಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಸಾಮವೇದದ ಪಾರಂಪರಿಕ ಜ್ಞಾನ, ಗಾನ ಪರಂಪರೆ ಮತ್ತು ವೇದಾಧ್ಯಯನವನ್ನು ಉಳಿಸುವ ನಿಟ್ಟಿನಲ್ಲಿ ಬಾರಕೂರಿನಲ್ಲಿ ನಡೆದ ಈ ಕಾರ್ಯಕ್ರಮ ಗಮನ ಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



