ಕಲ್ಪ ಮೀಡಿಯಾ ಹೌಸ್ | ಗೋಕರ್ಣ (ಉತ್ತರ ಕನ್ನಡ) |
ಮಾನವ ಜನಾಂಗದ ಅಧಃಪತನಕ್ಕೆ ಆಹಾರ ಸೇವನೆಯಲ್ಲಿನ ಅತಿರೇಕವೇ ಮೊದಲ ಕಾರಣವಾಗಿದ್ದು, ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸೇವನೆಯ ಪರಿಣಾಮವಾಗಿ ಮನುಷ್ಯನ ದೇಹ, ಮನಸ್ಸು ಹಾಗೂ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳು ಉಂಟಾದವು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು (Shree Raghaveshwara Bharathi Swamiji) ಹೇಳಿದರು.
ಗೋಕರ್ಣದ (Gokarna) ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಡಿ ಪ್ರವಚನ ಅನುಗ್ರಹಿಸಿ ಅವರು ಮಾತನಾಡಿದರು.
ಭಾರತೀಯ ಪರಂಪರೆ ಮತ್ತು ಆಧುನಿಕ ದೃಷ್ಟಿಕೋನದಲ್ಲಿ ವ್ಯತ್ಯಾಸ
ಮಾನವರ ಮೂಲದ ಕುರಿತು ಭಾರತೀಯ ಪರಂಪರೆ ಮತ್ತು ಆಧುನಿಕ ಚಿಂತನೆಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಆಧುನಿಕರ ದೃಷ್ಟಿಯಲ್ಲಿ ಸೃಷ್ಟಿಯ ಆದಿಯಲ್ಲಿ ಮಾನವನು ಸಂಸ್ಕೃತಿಹೀನನಾಗಿದ್ದು, ಕಾಡು ಮನುಷ್ಯನಂತೆ ಬದುಕುತ್ತಿದ್ದ ಎಂಬ ಕಲ್ಪನೆಗಳನ್ನು ಮುಂದಿಡಲಾಗಿದೆ. ಅಲ್ಲದೆ, ಮಂಗನಿಂದ ಮಾನವ ವಿಕಾಸ ಹೊಂದಿದ್ದಾನೆ ಎಂಬ ಸಿದ್ಧಾಂತವೂ ಇದೆ. ಇಂತಹ ಕಲ್ಪನೆಗಳು ನಮ್ಮ ಪೂರ್ವಜರ ಕುರಿತು ಜುಗುಪ್ಸೆ ಮೂಡಿಸುವಂತಿವೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಭಾರತೀಯ ಪರಂಪರೆಯ ಪ್ರಕಾರ ಕೃತಯುಗದಲ್ಲಿ ದೇವರು ಜಗತ್ತನ್ನು ಅತ್ಯಂತ ಸುಂದರವಾಗಿ ಸೃಷ್ಟಿಸಿದ್ದನು. ದೇವರು ಸೃಷ್ಟಿಸಿದ ರೀತಿಯಲ್ಲಿಯೇ ಜಗತ್ತು ಇದ್ದ ಕಾಲವೇ ಕೃತಯುಗ. ಒಳಿತಿನ ಒಳಿತೆಂದರೆ ಕೃತಯುಗವಾದರೆ, ಕೆಡುಕಿನ ಕೆಡುಕು ಎನ್ನಬಹುದಾದ ಕಾಲ ಕಲಿಯುಗವಾಗಿದೆ ಎಂದು ಅವರು ವಿಶ್ಲೇಷಿಸಿದರು.
Shree Raghaveshwara Bharathi Swamiji : ಕೃತಯುಗದಲ್ಲಿ ಪರಿಪೂರ್ಣ ಆರೋಗ್ಯ
ಕೃತಯುಗದಲ್ಲಿ ಜನರು ಪರಿಪೂರ್ಣ ಆರೋಗ್ಯ ಹೊಂದಿದ್ದರು. ಆ ಕಾಲದ ವರ್ಣನೆಯನ್ನು ಕೇಳಿದಾಗ ಇಂದಿನ ಮನುಷ್ಯನಿಗೆ ಅದು ಅತಿಶಯೋಕ್ತಿಯಂತೆ ಕಾಣಬಹುದು. ಏಕೆಂದರೆ ಅಂತಹ ವಾತಾವರಣವನ್ನು ನಾವು ಪ್ರತ್ಯಕ್ಷವಾಗಿ ಕಂಡಿಲ್ಲ. ಹೀಗಾಗಿ ಅದು ನಿಜವಲ್ಲ ಎಂದು ಭಾವಿಸುವ ಸಾಧ್ಯತೆಯೂ ಇದೆ ಎಂದು ಶ್ರೀಗಳು ಹೇಳಿದರು.
ಚರಕ ಸಂಹಿತೆಯ ಉಲ್ಲೇಖವನ್ನು ನೀಡಿದ ಅವರು, ಸೃಷ್ಟಿಯ ಆದಿಯಲ್ಲಿ ಮನುಷ್ಯರು ದೇವರಿಗೆ ಸರಿಸಮಾನವಾದ ಓಜಸ್ಸನ್ನು ಹೊಂದಿದ್ದರು. ಗಟ್ಟಿಮುಟ್ಟಾದ ಶರೀರ, ಪ್ರಸನ್ನವಾದ ಇಂದ್ರಿಯಗಳು ಹಾಗೂ ಪರಿಪೂರ್ಣ ಆರೋಗ್ಯ ಅವರಲ್ಲಿತ್ತು. ಆ ಸಂದರ್ಭದಲ್ಲಿ ರೋಗಗಳೇ ಇರಲಿಲ್ಲ. ರೋಗಗಳಿಲ್ಲದ ಕಾರಣ ವೈದ್ಯರೂ ಇರಲಿಲ್ಲ, ವೈದ್ಯಶಾಸ್ತ್ರವೂ ಇರಲಿಲ್ಲ ಹಾಗೂ ಔಷಧದ ಅಂಗಡಿಗಳ ಅಗತ್ಯವೂ ಇರಲಿಲ್ಲ ಎಂದು ವಿವರಿಸಿದರು.
ಆಹಾರದಿಂದಲೇ ಆರಂಭವಾಯಿತು ಮೊದಲ ತಪ್ಪು ಹೆಜ್ಜೆ
ಕೃತಯುಗದಲ್ಲಿಯೇ ಅಗ್ನಿ ಹಾಗೂ ಆಹಾರದ ವಿಚಾರದಲ್ಲಿ ಮಾನವ ಜನಾಂಗದ ಮೊದಲ ತಪ್ಪು ಹೆಜ್ಜೆ ಆರಂಭವಾಯಿತು. ಕೆಲವರು ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸೇವಿಸಲು ಆರಂಭಿಸಿದರು. ಇದರ ಪರಿಣಾಮವಾಗಿ ಮಾನವನ ದೇಹ ಸ್ಥೂಲವಾಗತೊಡಗಿತು. ಬಳಿಕ ಆಲಸ್ಯ, ಕೂಡಿಡುವ ಬುದ್ಧಿ, ಲೋಭ, ದ್ರೋಹ, ಸುಳ್ಳು, ಕಾಮ, ಕ್ರೋಧ ಸೇರಿದಂತೆ ಒಂದರ ಹಿಂದೆ ಒಂದರಂತೆ ಹಲವು ದುರ್ಗುಣಗಳು ಬೆಳೆಯತೊಡಗಿದವು. ಇದರಿಂದ ಮನುಷ್ಯನ ವ್ಯಕ್ತಿತ್ವ ಪತನದ ದಾರಿಯನ್ನು ಹಿಡಿಯಿತು ಎಂದು ಶ್ರೀಗಳು ಹೇಳಿದರು.
ಅಗ್ನಿಯಲ್ಲಿನ ವ್ಯತ್ಯಾಸದಿಂದ ವಾತದಲ್ಲಿ ಬದಲಾವಣೆ ಉಂಟಾಗಿ, ಅದರ ಪರಿಣಾಮವಾಗಿ ರೋಗಗಳು ಮನುಷ್ಯನನ್ನು ಆಕ್ರಮಿಸಲು ಆರಂಭಿಸಿದವು ಎಂಬುದನ್ನು ಚರಕ ಸಂಹಿತೆಯ ಆಧಾರದಲ್ಲಿ ಅವರು ವಿವರಿಸಿದರು.
Also read>> AUMOVIO ಇಂಡಿಯಾದಿಂದ ದುಂತೂರು ಕೆರೆ ಪುನಶ್ಚೇತನ: 8 ಗ್ರಾಮಗಳ 1,700 ಕುಟುಂಬಗಳಿಗೆ ಜಲ ಭದ್ರತೆ
ಆಹಾರದ ಕುರಿತು ಪ್ರತಿಯೊಬ್ಬರೂ ಅರಿವು ಹೊಂದಬೇಕು
ಹುಟ್ಟಿದ ಪ್ರತಿಯೊಂದು ಜೀವಿಯೂ ಆಹಾರದ ಒಳಹೊರಗನ್ನು ತಿಳಿದುಕೊಳ್ಳಬೇಕಿದೆ. ಆಹಾರದ ವಿಚಾರವನ್ನು ತಿಳಿದುಕೊಳ್ಳದೆ ಬದುಕುವುದು ಮನುಷ್ಯನಾಗಿ ಜೀವಿಸುವ ಹಕ್ಕನ್ನೇ ಕಳೆದುಕೊಂಡಂತಾಗುತ್ತದೆ. ಹೀಗಾಗಿ ನಾವು ಆಹಾರದ ಕುರಿತು ಗಂಭೀರವಾಗಿ ವಿಮರ್ಶೆ ಮಾಡಬೇಕು. ಏನು ತಿನ್ನಬೇಕು, ಎಷ್ಟು ತಿನ್ನಬೇಕು ಹಾಗೂ ಆಹಾರವು ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಅರಿವು ಬೆಳೆಸಿಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.
“ಎಲ್ಲಿ ತಪ್ಪಿದ್ದೇವೋ ಅಲ್ಲೇ ಸರಿಪಡಿಸಿಕೊಳ್ಳಬೇಕು ಎಂಬಂತೆ, ಅಂದಿನ ನಮ್ಮ ಪೂರ್ವಜರ ತಪ್ಪನ್ನು ಇಂದು ನಾವು ಸರಿಪಡಿಸಿಕೊಳ್ಳಬೇಕು. ಅಂದು ನಮ್ಮ ಪೂರ್ವಜರ ಅಧಃಪತನ ಊಟದ ವಿಷಯದಿಂದಲೇ ಆರಂಭವಾಯಿತು. ಇಂದು ನಾವು ಅದನ್ನು ಸರಿಪಡಿಸಿಕೊಳ್ಳುವ ಮೂಲಕ ಅಗ್ನಿಯನ್ನು ಸರಿಪಡಿಸಿಕೊಳ್ಳಬೇಕು. ನಮ್ಮನ್ನು ಸರಿಪಡಿಸಿಕೊಂಡರೆ, ಕಲಿಯುಗದಲ್ಲೂ ನಮ್ಮಲ್ಲಿ ನಾವು ಕೃತಯುಗವನ್ನು ತಂದುಕೊಳ್ಳಬಹುದು.”
— ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
ಸಂಸದ ಕಾಗೇರಿ ಸೇರಿದಂತೆ ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂಜುನಾಥ ಜನ್ನು, ಮಹೇಶ ಶೆಟ್ಟಿ, ಹನುಮಂತ ಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಉಪ್ಪಿನಂಗಡಿ ಹವ್ಯಕ ಮಂಡಲದ ಮಾಣಿ, ಕಬಕ, ಉಜಿರೆ, ಉಪ್ಪಿನಂಗಡಿ, ಉರುವಾಲು ಹಾಗೂ ವೇಣೂರು ಹವ್ಯಕ ವಲಯಗಳ ಪರವಾಗಿ ವೈ. ಗಣರಾಜ ಕೊಣಮ್ಮೆ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು.
ನಾರಾಯಣ ಭಟ್ ಹಾರೆಕೆರೆ, ಅರವಿಂದ ದರ್ಬೆ, ಗಣಪತಿ ಜಟ್ಟಿಮನೆ, ಮಹೇಶ ಕುದಪುಲಾ, ಪರಮೇಶ್ವರ ಭಟ್ ವೇಣೂರು, ಶಿವಪ್ರಸಾದ ವೇಣೂರು ಹಾಗೂ ದಿನಪ್ರಧಾನರಾಗಿ ವೆಂಕಟಗಿರಿ ಎಂ.ಆರ್. ದಂಪತಿಗಳು ಉಪಸ್ಥಿತರಿದ್ದರು.
ಆಹಾರ ಪದ್ಧತಿ, ದೇಹಾರೋಗ್ಯ ಮತ್ತು ಜೀವನಶೈಲಿಯ ನಡುವಿನ ಸಂಬಂಧವನ್ನು ಭಾರತೀಯ ಪರಂಪರೆಯ ದೃಷ್ಟಿಕೋನದಲ್ಲಿ ವಿವರಿಸಿದ ಶ್ರೀಗಳ ಪ್ರವಚನವು ಧರ್ಮಸಭೆಯಲ್ಲಿ ನೆರೆದಿದ್ದ ಭಕ್ತರ ಗಮನ ಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










