ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೊಬೈಲ್ ಫೋನ್, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಳೆದುಕೊಂಡು ಸ್ವಂತ ಊರಿಗೆ ಮರಳಲು ಸಾಧ್ಯವಾಗದೆ ಶಿವಮೊಗ್ಗ (Shivamogga) ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕುಳಿತಿದ್ದ 19 ವರ್ಷದ ಯುವತಿಯನ್ನು ಅಕ್ಕ ಪಡೆ (Akka squad) ಅಧಿಕಾರಿಗಳು ರಕ್ಷಿಸಿ, ಆಕೆಯ ತಾಯಿಯೊಂದಿಗೆ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.
ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಅಕ್ಕ ಪಡೆಯ ಅಧಿಕಾರಿಗಳು ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ಯುವತಿಯೊಬ್ಬಳು ಒಬ್ಬಳೇ ಕುಳಿತಿರುವುದು ಅವರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆಕೆಯ ಬಳಿ ತೆರಳಿ ವಿಚಾರಿಸಿದಾಗ, ಯುವತಿ ತನ್ನ ಸಮಸ್ಯೆಯನ್ನು ವಿವರಿಸಿದ್ದಾಳೆ.
ಯುವತಿ ಅರಸೀಕೆರೆ ನಿವಾಸಿಯಾಗಿದ್ದು, ಕಾರಣಾಂತರಗಳಿಂದ ಶಿವಮೊಗ್ಗಕ್ಕೆ ಬಂದಿದ್ದಳು. ಈ ಸಂದರ್ಭದಲ್ಲಿ ಆಕೆಯ ಮೊಬೈಲ್ ಫೋನ್, ಆಧಾರ್ ಕಾರ್ಡ್ ಹಾಗೂ ಇತರೆ ಅಗತ್ಯ ದಾಖಲೆಗಳು ಕಳೆದುಹೋಗಿದ್ದವು. ಮೊಬೈಲ್ ಮತ್ತು ದಾಖಲೆಗಳು ಇಲ್ಲದ ಕಾರಣ ಪೋಷಕರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ಊರಿಗೆ ವಾಪಸ್ ತೆರಳಲು ಸಹ ಸಾಧ್ಯವಾಗದೆ ಬಸ್ ನಿಲ್ದಾಣದಲ್ಲಿಯೇ ಒಬ್ಬಳೇ ಕುಳಿತಿದ್ದಾಗಿ ಯುವತಿ ಅಕ್ಕ ಪಡೆ ಅಧಿಕಾರಿಗಳಿಗೆ ತಿಳಿಸಿದ್ದಾಳೆ.
Shivamogga: ಪೋಷಕರನ್ನು ಸಂಪರ್ಕಿಸಿದ ಅಕ್ಕ ಪಡೆ
ಯುವತಿ ಒಬ್ಬಳೇ ಇರುವುದನ್ನು ಗಮನಿಸಿದ ಅಕ್ಕ ಪಡೆ ಅಧಿಕಾರಿಗಳು ಆಕೆಯ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಯುವತಿಯ ತಾಯಿಯ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಅವರನ್ನು ಸಂಪರ್ಕಿಸಿ, ಮಗಳು ಶಿವಮೊಗ್ಗದಲ್ಲಿ ಇರುವುದರ ಜೊತೆಗೆ ಮೊಬೈಲ್ ಹಾಗೂ ಅಗತ್ಯ ದಾಖಲೆಗಳನ್ನು ಕಳೆದುಕೊಂಡಿರುವ ವಿಚಾರವನ್ನು ತಿಳಿಸಿದ್ದಾರೆ.
ಮಗಳ ಪರಿಸ್ಥಿತಿಯ ಮಾಹಿತಿ ಪಡೆದ ತಾಯಿ, ತಾವೇ ಶಿವಮೊಗ್ಗಕ್ಕೆ ಬಂದು ಮಗಳನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ.
Also read>> ಏನಿದು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್? ಭಾರತೀಯ ರೈಲ್ವೆಯಲ್ಲಿ ಕ್ರಾಂತಿಕಾರಕ ಹೆಜ್ಜೆ
ಈ ನಡುವೆ ಯುವತಿಯನ್ನು ಸುರಕ್ಷಿತವಾಗಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು, ಮಹಿಳಾ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಇರಿಸಲಾಗಿದೆ. ತಾಯಿ ಶಿವಮೊಗ್ಗಕ್ಕೆ ಆಗಮಿಸುವವರೆಗೆ ಯುವತಿಯ ಸುರಕ್ಷತೆ ಹಾಗೂ ಅಗತ್ಯ ನೆರವಿನ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಿದ್ದಾರೆ.
ನಂತರ ಯುವತಿಯ ತಾಯಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಆಗಮಿಸಿ ಮಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ. ಅಕ್ಕ ಪಡೆ ಅಧಿಕಾರಿಗಳ ಸಮಯೋಚಿತ ಸ್ಪಂದನೆ ಹಾಗೂ ಮಾನವೀಯ ಕಾಳಜಿಯಿಂದಾಗಿ ಸಂಕಷ್ಟದಲ್ಲಿದ್ದ ಯುವತಿಗೆ ನೆರವು ದೊರೆತಿದ್ದು, ಆಕೆ ತನ್ನ ತಾಯಿಯೊಂದಿಗೆ ಸುರಕ್ಷಿತವಾಗಿ ಊರಿಗೆ ಮರಳುವಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











