ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ವಿವಿಧ ಬ್ಯಾಂಕ್ಗಳ ಏಳು ಸಂಘಟನೆಗಳನ್ನು ಒಳಗೊಂಡ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೀಡಿದ್ದ ಕರೆಯ ಮೇರೆಗೆ ನಡೆದ ಅಖಿಲ ಭಾರತ ಬ್ಯಾಂಕ್ ಮುಷ್ಕರವು ಶಿವಮೊಗ್ಗದಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಮುಷ್ಕರದ ಅಂಗವಾಗಿ ಇಂದು ಶಿವಮೊಗ್ಗದ ಬಿ.ಹೆಚ್. ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಂತರ ಎಸ್ಬಿಐ ಮುಂಭಾಗದಿಂದ ಗೋಪಿ ಸರ್ಕಲ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲಿನ ವಿವಿಧ ಬ್ಯಾಂಕ್ಗಳ 500ಕ್ಕೂ ಹೆಚ್ಚು ನೌಕರರು ಮತ್ತು ಅಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಪಿಎಲ್ಐ ತಾರತಮ್ಯ ಸರಿಪಡಿಸಲು ಆಗ್ರಹ
ಬ್ಯಾಂಕಿನ ವ್ಯವಹಾರ ವೃದ್ಧಿ, ಗ್ರಾಹಕ ಸೇವೆ, ಠೇವಣಿ ಸಂಗ್ರಹ, ಸಾಲ ವಿತರಣೆ, ಸಾಲ ವಸೂಲಿ, ಬ್ಯಾಂಕಿನ ಒಟ್ಟಾರೆ ಕಾರ್ಯಕ್ಷಮತೆ ಹಾಗೂ ಲಾಭದಾಯಕತೆಯಲ್ಲಿ ಪ್ರತಿಯೊಬ್ಬ ನೌಕರ ಮತ್ತು ಅಧಿಕಾರಿಯ ಕೊಡುಗೆ ಮಹತ್ವದ್ದಾಗಿದೆ.
ಆದ್ದರಿಂದ ಪರ್ಫಾರ್ಮೇನ್ಸ್ ಲಿಂಕ್ಡ್ ಇನ್ಸೆಂಟಿವ್ ಹಂಚಿಕೆಯಲ್ಲಿ ಯಾವುದೇ ರೀತಿಯ ತಾರತಮ್ಯ ಇರಬಾರದು. ಸಮಾನ ಕೊಡುಗೆಗೆ ಸಮಾನ ಗೌರವ ಮತ್ತು ನ್ಯಾಯಯುತ ಪಿಎಲ್ಐ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಒತ್ತಾಯ
ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಬಹುಕಾಲದ ನ್ಯಾಯಸಮ್ಮತ ಬೇಡಿಕೆಯಾಗಿರುವ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಐದು ದಿನಗಳ ಬ್ಯಾಂಕಿಂಗ್ ಕುರಿತು ಐಬಿಎ ಮತ್ತು ಯುಎಫ್ಬಿಯು ನಡುವೆ ಒಪ್ಪಂದವಾಗಿದ್ದು, 2024ರ ವೇತನ ಪರಿಷ್ಕರಣೆ ಒಪ್ಪಂದದಲ್ಲಿಯೂ ಈ ವಿಚಾರಕ್ಕೆ ಬದ್ಧತೆ ವ್ಯಕ್ತವಾಗಿದೆ. ಆದಾಗ್ಯೂ, ಅಂತಿಮ ಅನುಮೋದನೆ ಹಾಗೂ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬವನ್ನು ಐಎಫ್ಬಿಯು ಖಂಡಿಸಿದೆ.
Also read>> ಭಾರತದ ಉದ್ಯಮಗಳಲ್ಲಿ ಎಐ ಹೂಡಿಕೆ ಶೇ.119ರಷ್ಟು ಏರಿಕೆ: ಸರ್ವಿಸ್ನೌ
ಇತರೆ ಪ್ರಮುಖ ಬೇಡಿಕೆಗಳು
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಯುಎಫ್ಬಿಯು ಶಿವಮೊಗ್ಗ ಸಂಚಾಲಕ ನೆಲ್ಸನ್ ಅವರು, ಬ್ಯಾಂಕಿನ ಕಾರ್ಯಕ್ಷಮತೆ ಮತ್ತು ಲಾಭದಾಯಕತೆಯ ಹಿಂದೆ ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿವರೆಗೆ ಪ್ರತಿಯೊಬ್ಬರ ಶ್ರಮ ಮತ್ತು ಕೊಡುಗೆ ಇದೆ. ಆದ್ದರಿಂದ ಪಿಎಲ್ಐ ಹಂಚಿಕೆಯಲ್ಲಿ ಯಾವುದೇ ರೀತಿಯ ತಾರತಮ್ಯ ಇರಬಾರದು. ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡಲೇ ಜಾರಿಗೆ ತರಬೇಕು. ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ಹಳೆಯ ಪಿಂಚಣಿ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕು ಹಾಗೂ ನಿವೃತ್ತರ ಪಿಂಚಣಿ ಪರಿಷ್ಕರಿಸಬೇಕು. ಈ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರಿಯಲಿದೆ,” ಎಂದು ಹೇಳಿದರು.
ವಿವಿಧ ಬ್ಯಾಂಕ್ಗಳ ನೌಕರರು, ಅಧಿಕಾರಿಗಳ ಭಾಗವಹಿಸುವಿಕೆ
ಎಸ್ಬಿಐ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ಗಳ ನೌಕರರು ಮತ್ತು ಅಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಮುಷ್ಕರದಲ್ಲಿ SBIಯ ಪುನೀತ್ ಕುಮಾರ್, ಪ್ರದೀಪ್, ಸಂತೋಷ್, ಕೆನರಾ ಬ್ಯಾಂಕಿನ ಹೊನ್ನಪ್ಪ, ಧೀರಜ್, ಮಿಥುನ್ ಗೌಡ, ಸುರೇಶ್; ಕರ್ನಾಟಕ ಬ್ಯಾಂಕಿನ ವಿಶ್ವನಾಥ್, ಮಂಜುನಾಥ್, ಮುರಳಿಧರ್; ಯೂನಿಯನ್ ಬ್ಯಾಂಕಿನ ವಲ್ಲಭ, ರವಿರಾಜ್ ಹಾಗೂ ರಾಜು ಎಂ.ಎಸ್. ಸೇರಿದಂತೆ ವಿವಿಧ ಸಂಘಟನೆಗಳ ನಾಯಕರು ಮತ್ತು ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








