ಹುಬ್ಬಳ್ಳಿ: ಶಿರೂರು ಶ್ರೀಗಳ ಅಕಾಲಿನ ನಿಧನ ನಮ್ಮ ಮನಸ್ಸಿಗೆ ಆಘಾತವನ್ನು ನೀಡಿದೆ. ಆದರೆ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಪದ್ದತಿ ನಮ್ಮಲ್ಲಿ ಇಲ್ಲ. ಹೀಗಾಗಿ, ಹೋಗುವುದಿಲ್ಲ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಶಿರೂರು ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ಪೂರ್ವನಿಗದಿತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಶಿರೂರು ಶ್ರೀಗಳ ಅಂತಿಮದರ್ಶನ ಪಡೆಯಲು ಹೋಗುವುದಿಲ್ಲ. ನಾನು ಪ್ರವಾಸದಲ್ಲಿದ್ದೇನೆ, ಶಿರಸಿಯಲ್ಲಿ ನನಗೆ ಕಾರ್ಯಕ್ರಮ ಪೂರ್ವನಿಗದಿಯಾಗಿರುವುದರಿಂದ ಅಲ್ಲಿಗೆ ತೆರಳುತ್ತಿದ್ದೇನೆ. ರಾತ್ರಿ ಉಡುಪಿಗೆ ಹೋಗಿ ಎಲ್ಲಾ ಮಾಹಿತಿ ಪಡೆಯುತ್ತೇನೆ. ಅಂತಿಮ ವಿಧಿವಿಧಾನಕ್ಕೆ ನಾನು ಹೋಗುವುದಿಲ್ಲ, ಹೋಗುವ ಕ್ರಮವೂ ಇಲ್ಲ ಎಂದು ತಿಳಿಸಿದರು.
ಶ್ರೀಗಳ ಸಾವಿನ ಕುರಿತಾಗಿ ವಿಷಪ್ರಾಶನವಾಗಿದೆ ಎಂಬ ಕುರಿತಾಗಿ ನಮಗೆ ಯಾವುದೇ ರೀತಿಯ ಮಾಹಿತಿಯಿಲ್ಲ. ಇಂತಹ ವಿಚಾರಗಳನ್ನು ಪೊಲೀಸರು ತನಿಖೆಯಲ್ಲಿ ನಿರ್ಧಾರ ಮಾಡುತ್ತಾರೆ. ನಾವು ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

















