ದಾವಣಗೆರೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಐತಿಹಾಸಿಕ ವಿಜಯ ಸಾಧಿಸಿ ಇತಿಹಾಸವನ್ನೇ ನಿರ್ಮಾಣ ಮಾಡಿದ್ದರು. ಆ ವಿಜಯಕ್ಕೆ ಕೋಟ್ಯಂತರ ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ್ದರು. ಅಂತಹ ಶ್ರಮದಲ್ಲಿ ಪ್ರಮುಖವಾಗಿದ್ದ ನಮೋ ಬ್ರಿಗೇಡ್ ಈಗ ಮತ್ತೆ ಅಖಾಡಕ್ಕೆ ಇಳಿದಿದೆ.
ಇಂತಹ ನಮೋ ಬ್ರಿಗೇಡ್ ಈಗ ಮತ್ತೆ ಅಖಾಡಕ್ಕೆ ಇಳಿದಿದ್ದು, ಜುಲೈ 22ರ ನಾಳೆ ದಾವಣಗೆರೆಯಿಂದ ತಮ್ಮ ಕಾರ್ಯವನ್ನು ಆರಂಭಿಸಲಿದ್ದು, ಬಿಜೆಪಿಯಿಂದ 365 ಸಂಸದರನ್ನು ಗೆಲ್ಲಿಸುವ ಘೋಷ ವಾಕ್ಯದೊಂದಿಗೆ ಸಜ್ಜಾಗಿದ್ದಾರೆ.
ದಾವಣಗೆರೆಯ ರಾಂ ಅಂಡ್ ಕೋ ಸರ್ಕಲ್ನಲ್ಲಿ ಅಭಿಯಾನ ಆರಂಭವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವಂತೆ ಕೋರಲಾಗಿದೆ.
2014ರ ಚುನಾವಣೆಯಲ್ಲಿ ಮೋದಿಯತ್ತ ರಾಜ್ಯದ ಯುವಕರನ್ನು ಆಕರ್ಷಿಸುವಲ್ಲಿ ಹಾಗೂ ಪ್ರಬಲ ವಾತಾವರಣ ಮೂಡಿಸುವಲ್ಲಿ ಬ್ರಿಗೇಡ್ ಪ್ರಮುಖ ಪಾತ್ರ ವಹಿಸಿತ್ತು. ಬಿಜೆಪಿ ಜತೆಗೆ ನೇರವಾಗಿ ಗುರುತಿಸಿಕೊಳ್ಳದ ಯುವಕರು ಹಾಗೂ ಟೆಕ್ಕಿಗಳ ಬಹುದೊಡ್ಡ ಗುಂಪು ಸಾಮಾಜಿಕ ಜಾಲತಾಣದ ಜತೆಗೆ ನೇರವಾಗಿಯೂ ಪ್ರಚಾರದಲ್ಲಿ ತೊಡಗಿಸಿ ಕೊಂಡಿತ್ತು.

ಪ್ರಸ್ತುತ ಈಗ ಅಖಾಡಕ್ಕೆ ಇಳಿಯಲಿರುವ ನಮೋ ಬ್ರಿಗೇಡ್, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಪರ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸುವ ಕಾರ್ಯ ಮಾಡಲಿದೆ.
ಕೇಂದ್ರದ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವುದು ಹೇಗೆ, ಜನರಿಗಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಹೇಗೆ ದೇಶದ ಅಭಿವೃದ್ದಿಗೆ ಸಹಕಾರಿಯಾಗಲಿವೆ ಎಂಬ ಕುರಿತಾಗಿ ಜಾಗೃತಿ ಮೂಡಿಸಲಿದ್ದಾರೆ.

















