ಇಂದೋರ್: ಜಾತ್ಯತೀತ ಪಕ್ಷ ಎಂಬ ಕಲ್ಪನೆಯಡಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಹತ್ತಾರು ಪಕ್ಷಗಳು ವೋಟ್ ಬ್ಯಾಂಕ್ಗಾಗಿ ನಾಟಕವಾಡುತ್ತಲೇ ಬಂದಿರುವುದನ್ನು ದೇಶ ಕಂಡಿದೆ. ಆದರೆ, ಇವೆಲ್ಲಕ್ಕೂ ಅಪವಾದವಾಗಿ ನಿಂತು, ಮುಸಲ್ಮಾನದ ಪ್ರೀತಿ ಸಂಪಾದಿಸಿರುವ ಮೋದಿಯವರ ಆಡಳಿತಕ್ಕೆ ಈಗ ಮತ್ತೊಂದು ಗರಿ ಮೂಡಿದೆ.
ಹುತಾತ್ಮ ಇಮಾಮ್ ಹುಸೇನ್ ಅವರ ಸ್ಮರಣಾರ್ಥ ಇಂದು ಇಂದೋರ್ನಲ್ಲಿ ದಾವೂದಿ ಬೊಹ್ರಾ ಸಮುದಾಯದಿಂದ ಅಶರಾ ಮುಬಾರಕ್ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿ ದೊರೆತ ಸ್ವಾಗತ ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎಂಬ ಪ್ರಧಾನಿಯವರ ನಂಬಿಕೆಯನ್ನು ಇಮ್ಮಡಿ ಮಾಡಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ಈ ವೇಳೆ ಮಾತನಾಡಿರುವ ಮೋದಿ, ಇಮಾಮ್ ಹುಸೇನ್ ಅವರ ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸಿ, ನ್ಯಾಯ, ಸತ್ಯಕ್ಕಾಗಿ ಹೋರಾಡಿದ ತ್ಯಾಗಮಯಿ ಎಂದು ಕೊಂಡಾಡಿದರು.
ಇದೇ ನಿಟ್ಟಿನಲ್ಲಿ ಡಾ.ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರನ್ನು ಪ್ರಶಂಸಿದ ಮೋದಿ, ಇವರ ದೇಶಭಕ್ತಿ, ದೇಶಕ್ಕಾಗಿ ಇವರ ಸೇವೆ ಹಾಗೂ ಬೋಧನೆ ಎಲ್ಲರೂ ಮೆಚ್ಚುವಂತಹದ್ದು ಎಂದರು.

ಸಂಸ್ಕೃತಿ ಹಾಗೂ ಸಂಸ್ಕಾರ ಎನ್ನುವುದು ನಮ್ಮನ್ನು ವಿಶಿಷ್ಟತೆಯೆಡೆಗೆ ಕೊಂಡೊಯ್ಯುತ್ತದೆ. ನಾವು ನಮ್ಮ ಭೂತಕಾಲದ ಬಗ್ಗೆ ಹೆಮ್ಮೆ ಪಡೆಬೇಕು, ವರ್ತಮಾನದ ಬಗ್ಗೆ ನಂಬಿಕೆಯಿಡಬೇಕು ಹಾಗೂ ಭವ್ಯ ಭವಿಷ್ಯದ ಬಗ್ಗೆ ಅಪಾರವಾದ ಭರವಸೆಯನ್ನು ಹೊಂದಿರಬೇಕು ಎಂದರು.
ಜಾತ್ಯತೀತರು ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಡಪಕ್ಷಗಳ ಮುಖಂಡರು ಮುಸಲ್ಮಾನ ದರ್ಗಾ ಹಾಗೂ ಕಾರ್ಯಕ್ರಮಗಳಿಗೆ ಭೇಟಿ ನೀಡಿದಾಗ ಮುಸಲ್ಮಾನ ಟೋಪಿ ಧರಿಸಿ, ವೋಟ್ ಬ್ಯಾಂಕ್ ರಾಜಕಾರಣವನ್ನು ನಡೆಸುವುದು ಮಾಮೂಲಾಗಿದ್ದು, ಇದರ ನಡುವೆಯೇ ಮುಸಲ್ಮಾನರ ಇಂತಹ ದೊಡ್ಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ, ನಾಟಕಕ್ಕಾಗಿ ಟೋಪಿ ಧರಿಸದೇ, ಮನದಿಂದ ಗೌರವಿಸಿ ಪ್ರಧಾನಿ ಮುಸಲ್ಮಾನರ ಮನಗೆದ್ದಿದ್ದಾರೆ.

ಕಾರ್ಯಕ್ರಮಕ್ಕೆ ಪ್ರಧಾನಿಯವರು ಆಗಮಿಸಿದ ವೇಳೆ ನೆರೆದಿದ್ದ ಪ್ರತಿ ಮುಸಲ್ಮಾನರೂ ಸಹ ಕೈಮುಗಿದು ಅವರನ್ನು ಸ್ವಾಗತಿಸಿದ್ದು, ಮೋದಿಯವರನ್ನು ಮುಸಲ್ಮಾನರು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿತ್ತು.
















