ಭದ್ರಾವತಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಇಎಸ್ಐ ಸೌಲಭ್ಯವನ್ನು ಅಕ್ಟೋಬರ್ 2 ರಿಂದ ಪುನರಾರಂಭ ಮಾಡಲಾಗಿದೆ ಎಂದು ಇಎಸ್ಐ ವಿಮಾದಾರರ ಕ್ಷೇಮಾಭಿವೃದ್ದಿ ಜಿಲ್ಲಾ ಸಂಘದ ಸಲಹೆಗಾರ ಶ್ರೀನಿವಾಸಗೌಡ ತಿಳಿಸಿದ್ದಾರೆ.
ಉಡುಪಿ ಮಣಿಪಾಲ ಆಸ್ಪತ್ರೆಯಲ್ಲಿ ಸಾವಿರಾರು ಕಾರ್ಮಿಕ ಮತ್ತು ಅಸಂಘಟಿತ ಕಾರ್ಮಿಕರಿಗೆ ಇಎಸ್ಐ ಮೂಲಕ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದರಿಂದ ಕಾರ್ಮಿಕ ಕುಟುಂಬಗಳಿಗೆ ಮತ್ತು ಅವಲಂಭಿತರಿಗೆ ವರದಾನವಾಗಿತ್ತು. ಆದರೆ ದುರಾದೃಷ್ಟಕರವೆಂಬಂತೆ ಆಸ್ಪತ್ರೆ ಆಡಳಿತ ಮಂಡಳಿಯು ಈ ಸೌಲಭ್ಯವನ್ನು ನವೀಕರಣಗೊಳಿಸದೆ ಕಳೆದ ಏಪ್ರಿಲ್ ತಿಂಗಳಿನಿಂದ ಇಎಸ್ಐ ಸೌಲಭ್ಯವನ್ನು ಸ್ಥಗಿತಗೊಳಿಸಿತ್ತು.
ಮಣಿಪಾಲ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷತನ ಮತ್ತು ಅವೈಜ್ಞಾನಿಕ ನೀತಿಯಿಂದಾಗಿ ಆಸ್ಪತ್ರೆಯ ಸಿಬ್ಬಂದಿಗಳು ಸೇರಿದಂತೆ ಇಎಸ್ಐ ಸೌಲಭ್ಯ ಪಡೆಯುತ್ತಿದ್ದ ಸಹಸ್ರಾರು ಕಾರ್ಮಿಕ ಕುಟುಂಬಗಳು ವಂಚನೆಗೊಳಗಾಗಿದ್ದವು. ಇದನ್ನರಿತ ಶಿವಮೊಗ್ಗ ಜಿಲ್ಲಾ ಇಎಸ್ಐ ವಿಮಾದಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಂ. ನಾರಾಯಣ, ಸಲಹೆಗಾರ ಶ್ರೀನಿವಾಸಗೌಡ ಮುಂತಾದವರ ತಂಡ ಕಳೆದ ಮೇ: 31 ರಂದು ಬೆಂಗಳೂರಿನ ರಾಜ್ಯ ಕಾರ್ಮಿಕ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕರಿಗೆ ನಿಯೋಗ ತೆರಳಿ ಮನವಿ ಸಲ್ಲಿಸಿ ಕಾರ್ಮಿಕರು ಪಡುತ್ತಿರುವ ಸಂಕಷ್ಟಗಳನ್ನು ವಿವರಿಸಿದ್ದರಿಂದ ಪರಿಶೀಲನೆ ಮಾಡಿದ ಅಧಿಕಾರಿಗಳು ಈ ಯೋಜನೆಯನ್ನು ಅ: 2 ರ ಗಾಂಧಿ ಜಯಂತಿ ದಿನದಿಂದ ಕಾರ್ಮಿಕರಿಗೆ ಮತ್ತು ಕುಟುಂಬ ಸದಸ್ಯರಿಗೆ ಇಎಸ್ಐ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯ ಪುನರಾರಂಭಿಸಿದೆ. ಇದರಿಂದ ಸಂಘದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಮಿಕರು ಇನ್ನು ಮುಂದೆ ನೂರಾರು ಶಸ್ತ್ರ ಚಿಕಿತ್ಸೆಯ ಕೌಶಲ್ಯತೆ ಹೊಂದಿರುವ ವಿಶೇಷ ಅನುಭವಿ ನುರಿತ ತಜ್ಞ ವೈದ್ಯರನ್ನು ಹೊಂದಿರುವ ಹಾಗು ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ಕೊಡುವ 24*7 ಮಣಿಪಾಲ ಆಸ್ಪತ್ರೆಯಲ್ಲಿ ಇಎಸ್ಐ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾರ್ಮಿಕ ವಲಯಕ್ಕೆ ಶ್ರೀನಿವಾಸಗೌಡ ಮನವಿ ಮಾಡಿದ್ದಾರೆ. ಅಲ್ಲದೆ ಕಾರ್ಮಿಕರ ಸಂಕಷ್ಟಕ್ಕೆ ಮತ್ತು ಸಂಘದ ಮನವಿಗೆ ಸ್ಪಂಧಿಸಿದ ಕಾರ್ಮಿಕ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕ ಎನ್.ಎಚ್. ನಾಯಕ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ

















