ದಿನ ಬೆಳಗಾದರೆ ಅದೇ ಗುಡ್ ಮಾರ್ನಿಂಗ್ ಮೆಸೇಜು, ಅದೇ 11 ಜನರಿಗೆ ಕಳಿಸಿದರೆ ಇವತ್ತು ಸಂಜೆಯೊಳಗೆ ನಿಮಗೆ ಒಳ್ಳೆದಾಗುತ್ತೆ, ಇಲ್ಲ ಅಂದ್ರೆ ನೀವು ಇಷ್ಟಪಡುವವರು ದೂರಾಗುತ್ತಾರೆ ಅನ್ನುವ ಡಬಲ್ ಡಬ್ಬಾ ಮೆಸೇಜು, ನಾನು ನಿನ್ನ ಬೆಸ್ಟ್ ಫ್ರೆಂಡ್ ಆಗಿದ್ದರೆ ನನ್ನ ಫೋಟೋ/ಹೆಸರು ಸ್ಟೇಟಸ್ ಗೆ ಹಾಕು ಅನ್ನುವ ಆನ್ ಲೈನ್ ಅಮರ ಸ್ನೇಹದ ಮೆಸೇಜು ಇವುಗಳನೆಲ್ಲ ನೋಡಿ ನೋಡಿ ಯಾಕೋ ಈ ವಾಟ್ಸಾಪ್, ಫೇಸ್ ಬುಕ್ ಇವುಗಳಿಗಿಂತ ಊರಿನ ಗೂಡಂಗಡಿಗಳೇ ಬೆಸ್ಟ್ ಅಂತ ಅನಿಸೋಕೆ ಶುರುವಾಗಿದೆ..!!
ಎಲ್ಲೋ ನಡೆದ ಘಟನೆಯನ್ನು ಇಲ್ಲಿಯೇ ನಡೆದಿದೆ ಅನ್ನುವಂತೆ ಬಿಂಬಿಸಿ ಎಡಿಟ್ ಮಾಡಿ ಹರಿಯಬಿಡುವ ಕಪೋಲಕಲ್ಪಿತ ಫೋಟೋ, ವಿಡಿಯೋಗಳು ಒಂದೆಡೆಯಾದರೆ, ಹಿಂಸೆ, ಕ್ರೂರತೆಯನ್ನು ಕೂಡ ಮನರಂಜನೆಯಾಗಿಸಿ ನೋಡುಗರ ಮಾನವೀಯ ಮೌಲ್ಯಗಳನ್ನೆ ಗೆದ್ದಲಿನಂತೆ ತಿನ್ನುತ್ತಿರುವ ವಾಟ್ಸಾಪ್, ಫೇಸ್ ಬುಕ್ ಗಳಿಗಿಂತ ಊರಿನ ಗೂಡಂಗಡಿಗಳು ಎಷ್ಟೋ ಮೇಲೂ…
ಅಂಥದ್ದು ಏನಪ್ಪಾ ಇದೆ ಈ ಗೂಡಂಗಡಿಗಳಲ್ಲಿ ಅಂತ ನಿಮಗೆ ಅನಿಸಿದರೆ ಒಂದು ಸಲ ಬಿಡುವು ಮಾಡಿಕೊಂಡು ಗೂಡಂಗಡಿ ಬಾಗಿಲಲ್ಲಿ ನಿಂತು ನೋಡಿ ಅಲ್ಲೊಂದು ಮಿನಿ ವಿಕಿಪೀಡಿಯ ಸಿಗುತ್ತೆ.
ಅಲ್ಲಿ ನಡೆಯುವ ಮಾತುಕತೆಯಲ್ಲಿ ಖುಶಿಯಿದೆ, ಕಷ್ಟವನ್ನು ಮೀರಿ ನಗುವ ನಗುವಿದೆ, ಟೀ ಆರುವ ಮುನ್ನ ನೊಂದ ಜೀವಕೆ ಆಸರೆಯ ಕೈಗಳು ಸಿಗುತ್ತದೆ. ಒಂದು ಗೂಡಂಗಡಿಯ ಬೆಂಚಿನಮೇಲೆ ಡೋಂಗಿ ಸ್ವಾಮೀಜಿಗಳಿಂದ ಹಿಡಿದು ಡೋನಾಲ್ಡ್ ಟ್ರಂಪ್ ವರೆಗೂ, ದಾಲಾ ಪನ್ಲೆ ಲತಕ್ಕಾನಿಂದ ಹಿಡಿದು ಲಂಡನಲ್ಲಿರುವ ಇಂಗ್ಲೆಂಡ್ ರಾಣಿಯವರೆಗೂ ಲೋಕದ ಎಲ್ಲಾ ಸುದ್ದಿ ಸಮಾಚಾರಗಳ ಸಂಪೂರ್ಣ ವಿಶ್ಲೇಷಣೆಗಳು ನಡೆದು ಎಲ್ಲಾ ಮಾಹಿತಿಗಳು ಒಂದೇ ಸೂರಿನಡಿ ಸಿಗುತ್ತದೆ:
ಹೀಗೆ ಒಂದು ಗೂಡಂಗಡಿಯಲ್ಲಿ ನಡೆದ ಮಾತುಕತೆಯ ವಿಚಾರವೇ ಈ ಲೇಖನ ಹುಟ್ಟಲು ಕಾರಣ. ಅಂದ ಹಾಗೆ ಇತ್ತೀಚೆಗೆ ನಾನು ಅಪರೂಪಕ್ಕೆ ಗೂಡಂಗಡಿ ಬೆಂಚಿನ ಮೇಲೆ ಕುಳಿತಿದ್ದಾಗ ನಮ್ಮ ಊರಿನ ಸುಮಾರು ಎಪ್ಪತ್ತರ ಹರೆಯದ ಹಿರಿಯರೊಬ್ಬರು ಈರೆನ ಇಲ್ಲಗ್ ಪಿಲಿ ಬತ್ತ್ಂಡ…?
(ನಿಮ್ಮ ಮನೆಗೆ ಹುಲಿ ಬಂತಾ)ಎಂದು ಕೇಳಿದರು..!! ಭಯ ಪಟ್ಕೋಬೇಡಿ ಅವರು ಕೇಳಿದ್ದು ಕಾಡಿನ ಹುಲಿಯನ್ನಲ್ಲ ಬದಲಾಗಿ ನಾಡಿನ ಹುಲಿಯನ್ನು.
ಹೌದು ನಮ್ಮ ಕರಾವಳಿಯಲ್ಲಿ ನವರಾತ್ರಿ ಅಂದ್ರೆ ಹುಲಿವೇಷ, ಹುಲಿವೇಷ ಅಂದ್ರೆ ನವರಾತ್ರಿ ಅನ್ನುವಷ್ಟರ ಮಟ್ಟಿಗೆ ಇಲ್ಲಿನ ಹುಲಿವೇಷಗಳು ಫೇಮಸ್ಸು ಕೆಲವರಿಗೆ ಹುಲಿವೇಷ ಕಂಡಾಗಲೆ ಮಾರ್ನೆಮಿ(ನವರಾತ್ರಿ) ಆರಂಭವಾಯಿತೆಂದು ಅರಿವಾಗುವುದು…

ಹುಲಿವೇಷ ಬಂದಿತ್ತಾ ಎಂದು ಅವರು ಕೇಳಿದ ಪ್ರಶ್ನೆಗೆ ಹಾ ಒಂದು ವೇಷ ಬಂದಿತ್ತು ತಾತಾ ಎಂದು ಉತ್ತರಿಸಿದಾಗ ಇವಾಗೆಲ್ಲ ಎಂಥ ಹುಲಿವೇಷ ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎಂದು ಅವರು ಮರು ಉತ್ತರಿಸಿ ಅವರು ಕಂಡ ಹುಲಿವೇಷವನ್ನು ವಿವರಿಸಲು ಆರಂಭಿಸಿದರು. ಅವರ ಉತ್ಸಾಹವ ಕಂಡು ನಾನು ಅವರ ಮಾತಿಗೆ ಕೇಳುವ ಕಿವಿಯಾದೆ…
ಹಿಂದೆಲ್ಲಾ ಮಾರ್ನೆಮಿ(ನವರಾತ್ರಿ) ಅಂದರೆ ಒಂಬತ್ತು ದಿನವೂ ಎಲ್ಲಿಲ್ಲದ ಸಂಭ್ರಮ, ಸಡಗರ. ಕಿರಿಯರಿಂದ ಹಿರಿಯರವರೆಗೂ ಹುಲಿ ವೇಷದ ಅಬ್ಬರದ ಸದ್ದಿಗೆ, ಭರ್ಜರಿ ಕುಣಿತಕ್ಕೆ ಮಾರು ಹೋಗದವರಿಲ್ಲ. ಇನ್ನೂ ಮಕ್ಕಳಿಗಂತೂ ಒಳಗೊಳಗೆ ಭಯವಿದ್ದರೂ ಹುಲಿ ವೇಷದ ಹಿಂದೆಯೇ ಕುಣಿಯುತ್ತಾ ನಲಿಯುತ್ತಾ ಸಾಗುವ ಆ ಕುಶಿ ಅದನ್ನು ಅನುಭವಿಸಿದ ನನ್ನಂತವರಿಗೆ ಗೊತ್ತು ಆ ಕುಶಿ ಗಮ್ಮತ್ತು…
ಹಾಗೆ ಕುಣಿಯುವಾಗ ಎಲ್ಲಾದರೂ ಹುಲಿ ತಿರುಗಿದರೆ ಮುಗಿಯತು. ಮಕ್ಕಳೆಲ್ಲ ಓಲಂಪಿಕ್ಸ್ ನಲ್ಲಿ ಉಸೇನ್ ಬೋಲ್ಟ್ ಓಡಿದಂತೆ ಓಡಿ ಮನೆ ಸೇರುತ್ತವೆ…
ಆದರೆ ಈಗ ಎಲ್ಲಿದೆ ಆ ನವರಾತ್ರಿಯ ಹುಲಿವೇಷದ ಸಡಗರ…!? ಎಲ್ಲಿದೆ ಆ ಖುಶಿ ಆ ಸಂಭ್ರಮ..!!?

ಹಿಂದಿನಂತೆ ಇಂದು ಅಪಾರ ಸಂಖ್ಯೆಯ ಹುಲಿವೇಷಗಳು ಇಲ್ಲ ಅದನ್ನು ಕಂಡು ಮಾರುಹೋಗುವ ಜನರೂ ಇಲ್ಲ…!
ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಸಾಗಿದರೆ ಕಾರಣಗಳು ಅನೇಕ ಆದ್ದರಿಂದ ಅವರ ಅನುಭವದ ಮಾತುಗಳನ್ನೇ ಇಲ್ಲಿ ಬರೆದಿದ್ದೇನೆ…. ಅಂದಿನ ಜನರು ಮತ್ತು ಜನಜೀವನದಲ್ಲಿ ಸಾಮರಸ್ಯ, ಒಗ್ಗಟ್ಟು, ಪ್ರಮುಖ ಭಾಗವಾಗಿತ್ತು. ಜನರಲ್ಲಿ ಮುಗ್ಧತೆಯಿತ್ತು, ನಾವೆಲ್ಲರೂ ಒಂದೇ ಎಂಬ ಏಕತೆಯಿತ್ತು ಪರಸ್ಪರ ಸಹಕಾರ ಮನೋಭಾವವಿತ್ತು, ನಂಬಿಕೆಯಿತ್ತು. ಹಾಗಾಗಿ ಅಲ್ಲಿ ಮೋಸ, ವಂಚನೆಗೆ ಅವಕಾಶವಿರಲಿಲ್ಲ. ಆದ್ದರಿಂದ ವೇಷ ಅನ್ನುವುದು ಅಪರೂಪವಾಗಿತ್ತು, ಹಾಗಾಗಿ ಅಲ್ಲಿ ಬಣ್ಣದ ವೇಷಗಳನ್ನು ಬೆರಗುಗಣ್ಣಿಂದ ನೋಡುವ ಕಣ್ಣುಗಳಿದ್ದವು…
ಆದರೆ ಇಂದಿನ ಜನರಲ್ಲಿ ಇಂತಹ ಮಾನವೀಯ ಮೌಲ್ಯಗಳು ಕ್ಷೀಣವಾಗಿ ದಿನ ಬೆಳಗಾದರೆ ಬರೀ ಮೋಸ, ವಂಚನೆ, ಕಪಟ ಮುಖವಾಡಗಳೇ ಜಾಸ್ತಿಯಾಗಿದೆ.. ದಿನಾ ನೋಡುವ ಪರಿಚಯಸ್ಥರಿಂದಲೇ ಮೋಸ, ವಂಚನೆ, ಎದುರಾದರೂ ಆಶ್ಚರ್ಯವೇನಿಲ್ಲ…
ಅಂದು ಮಿತ್ರನಾಗಿದ್ದವನು, ಒಂದೇ ತಟ್ಟೆಯ ಅನ್ನ ತಿಂದವನು ಮುಂದೊಂದು ದಿನ ಶತ್ರುವಾಗಿ ಕಾಡಿದಂತಹ ಉದಾಹರಣೆಗಳು ಸಾಕಷ್ಟಿವೆ…

ಮೋಸಗಾರರಲ್ಲಿ ಹುಲಿ ವೇಷಗಳಂತ ಬಣ್ಣಬಣ್ಣದ ವೇಷ ಭೂಷಣಗಳಿಲ್ಲದಿದ್ದರೂ ಬಣ್ಣ ಬಣ್ಣದ ಮಾತುಗಳ ಮೂಲಕ ಮುಗ್ಧರನ್ನು ಯಾಮಾರಿಸುವ ಕಪಟತನ ಹೆಚ್ಚಾಗಿದೆ. ತಾನೊಬ್ಬ ಬದುಕಿದರೆ ಸಾಕೆನ್ನುವ ಸ್ವಾರ್ಥ ಅತಿಯಾಗಿದೆ. ನೋಡುವ ಕಂಗಳಿಗೆ ಸೌಮ್ಯವಾಗಿ ಕಾಣುವ ಮುಖದ ಹಿಂದಿರುವ ವ್ಯಾಘ್ರ ಸ್ವಭಾವದ ಜನರನ್ನು ನೋಡಿ ನೋಡಿ ಸಾಕಾಗಿ ಹೋಗಿರುವುದರಿಂದ ಇಂತಹ ಯಾವುದೇ ವೇಷಭೂಷಣಗಳಿಲ್ಲದಿದ್ದರೂ ವೇಷ ಬದಲಾಯಿಸುವ ಮನಃಸ್ಥಿತಿಯ ಮೋಸಗಾರರನ್ನು ನೋಡಿ ನೋಡಿ ಅಭ್ಯಾಸವಾಗಿ ಹೋಗಿರುವುದರಿಂದ ಈ ಹುಲಿ ವೇಷಗಳ ಅಷ್ಟೇನು ವಿಶೇಷವಲ್ಲವೆಂಬ ಭಾವನೆ ಮೂಡಿ, ಹುಲಿವೇಷವನ್ನು ಕಂಡು ಮಾರುಹೋಗುವ ಜನರು ಕಡಿಮೆಯಾಗಿದ್ದಾರೆ… ಎಂದು ಹೇಳಿದಾಗ ಮುಪ್ಪಾದ ಅವರ ಮುಖಭಾವದಲ್ಲಿ ಗಾಢವಾದ ಬೇಸರವೊಂದು ಎದ್ದು ಕಾಣಿಸುತಿತ್ತು.
ಆ ಎಪ್ಪತ್ತರ ಹರೆಯದ ಹಿರಿಯರು ಹೇಳಿದ ಮಾತು ಯಾಕೋ ನಮ್ಮಂತ ಇಂದಿನ ಪೀಳಿಗೆಯ ಜನರು ಬದುಕುತ್ತಿರುವ ಬದುಕಿಗೆ ಹಿಡಿದ ಕೈಗನ್ನಡಿಯಂತಿತ್ತು…!
ಇಂದು ಅಳಿಸಿ ಹೋಗುತ್ತಿರುವುದು ಕೇವಲ ನಮ್ಮ ಸಂಸ್ಕೃತಿಗಳು ಮಾತ್ರವಲ್ಲ ನಮ್ಮೊಳಗಿನ ನಾವೇ ಇಂದು ಕಳೆದುಹೋಗುತ್ತಿರುವೆವು. ನಾವೆಲ್ಲ ಇಂದು ಬದುಕುತ್ತಿರುವ ಬದುಕು ಅರ್ಥಕಳೆದುಕೊಳ್ಳುತ್ತಿದೆ ಎಂದು ಅನಿಸುತಿದೆ, ಯೋಚಿಸಬೇಕಿದೆ ಮನ ನಮ್ಮೊಳಗಿನ ನಾವು ಸಂಪೂರ್ಣವಾಗಿ ಅಳಿಸಿಹೋಗುವ ಮುನ್ನ…!
ಲೇಖನ: ಭರತ್ ಕುಮಾರ್

















