ಭದ್ರಾವತಿ: ನಾಡಹಬ್ಬ ದಸರಾ ಉತ್ಸವ-2018 ಭವ್ಯ ಅಲಂಕೃತಗೊಂಡ ದೇವಾನುದೇವತೆಗಳ ಮೆರವಣಿಗೆಗೆ ಈ ಭಾರಿ ಉಪವಿಭಾಗಾಧಿಕಾರಿ ಪ್ರಕಾಶ್ ಚಾಲನೆ ನೀಡಲಿದ್ದಾರೆಂದು ಪೌರಾಯುಕ್ತ ಶ್ರೀಕಂಠಸ್ವಾಮಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಿಂದಾಗಿ ನಗರಸಭೆಯು ಪ್ರಸ್ತುತ ವರ್ಷ ಆಡಂಬರವಲ್ಲದ ಸರಳ ದಸರಾ ನಾಡಹಬ್ಬವನ್ನು ಆಚರಿಸುತ್ತಿದೆ. ಆದರೆ ಪ್ರತಿವರ್ಷದಂತೆ ನಗರದ ಸುತ್ತ ಮುತ್ತಲ ದೇವಾಲಯಗಳ ಉತ್ಸವ ಮೂರ್ತಿಗಳ ವಿಶೇಷ ಅಲಂಕೃತ ದೇವತೆಗಳನ್ನು ಮೆರವಣಿಗೆಯಲ್ಲಿ ತರುತ್ತಿರುವ ಪದ್ದತಿಗೆ ಯಾವುದೇ ಅಡ್ಡಿ ಉಂಟಾಗಿಲ್ಲ.
ಅ.19 ರ ನಾಳೆ ಶುಕ್ರವಾರ ಮಧ್ಯಾಹ್ನ 2.30 ಕ್ಕೆ ನಗರದ ಲೋಯರ್ ಹುತ್ತಾ ಶ್ರೀ ತಿರುಮಲ ವೆಂಕಟೇಶ್ವರ ದೇವಾಲಯದ ಮುಂಭಾಗ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಂದಿ ಧ್ವಜಕ್ಕೆ ನಮಿಸಿ ಭವ್ಯ ಮೆರವಣಿಗೆಗೆ ಎಸಿ ಚಾಲನೆ ನೀಡಲಿದ್ದಾರೆ. ಉತ್ಸವದಲ್ಲಿ 40 ಕ್ಕೂ ಹೆಚ್ಚು ದೇವಾನು ದೇವತೆಗಳ ಅಲಂಕೃತಗೊಂಡ ವಾಹನಗಳು ಪಾಲ್ಗೊಳ್ಳಲಿವೆ.
ಮೆರವಣಿಗೆಯು ಲೋಯರ್ ಹುತ್ತಾದಿಂದ ಹೊರಟು ಪ್ರಮುಖ ನಗರದ ರಸ್ತೆಗಳ ಮೂಲಕ ಕನಕಮಂಟಪ ಮೈದಾನಕ್ಕೆ ಸಂಗಮಗೊಳ್ಳಲಿದೆ. ತಹಸೀಲ್ದಾರ್ ಎಂ.ಆರ್. ನಾಗರಾಜ್ ರವರನ್ನು ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಶ್ರೀ ರಂಗನಾಥಶರ್ಮ ಮತ್ತು ತಂಡದ ಸದಸ್ಯರು ಕರೆತಂದು ಮೈದಾನದಲ್ಲಿ ಸಂಗಮಗೊಂಡ ದೇವಾನುದೇವತೆಗಳಿಗೆ ವಿಶೇಷ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿ ನಂತರ ನಿರ್ಮಾಣಗೊಂಡ ಅಲಂಕೃತ ಬನ್ನಿ ಮುಡಿಯುವ ವೇದಿಕೆಗೆ ಆಗಮಿಸಿ ಶಮಿಪೂಜೆ ನೆರವೇರಿಸಲಿದ್ದಾರೆ.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post