ಕರುನಾಡು ಹಲವು ಧಾರ್ಮಿಕ ಚಿಂತಕರ ಧಾರ್ಮಿಕ ಕ್ಷೇತ್ರಗಳ ಸಾಧು ಸಂತರ ನೆಲೆ. ಇಂತಹ ಕರ್ನಾಟಕದ ಕರಾವಳಿ ಭಾಗದಲ್ಲಿ ಇರುವ ಒಂದು ಪ್ರಮುಖ ಧಾರ್ಮಿಕ ಕ್ಷೇತ್ರ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ.
ಶ್ರೀ ಮಂಜುನಾಥ ಈ ಕ್ಷೇತ್ರದ ದೈವ. ಈ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು. ಕೇವಲ ಧಾರ್ಮಿಕ ಕಾರ್ಯಗಳಿಗೆ ಮಾತ್ರ ತಮ್ಮನ್ನು ತೊಡಗಿಸಿಕೊಳ್ಳದೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.
ಸ್ವ ಸಹಾಯ ಸಂಘಗಳನ್ನು ಸ್ವ ಉದ್ಯೋಗ ಸಂಘಗಳನ್ನು ಹುಟ್ಟುಹಾಕಿ ಜನರನ್ನು ಸ್ವಾವಲಂಬನೆ ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಹಲವು ಸ್ಥಳಗಳಲ್ಲಿ ಸುಸಜ್ಜಿತ ವಿದ್ಯಾಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ಅಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಧಾರೆ ಎರೆಯುತ್ತಿದ್ದಾರೆ. ಜೊತೆಗೆ ಹಲವು ಬಗೆಯ ವಿದ್ಯಾರ್ಥಿ ವೇತನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುತ್ತಿದ್ದಾರೆ.
ಯಾವುದೇ ಸ್ವಾರ್ಥ ಬಯಸದೇ ನಿಸ್ವಾರ್ಥ ಮನೋಭಾವದಿಂದ ಸಮಾಜದ ಏಳಿಗೆಗೆ ದುಡಿಯುತ್ತಿದ್ದಾರೆ. ಅಲ್ಲದೆ ಸಾಂಸ್ಕೃತಿಕ ರಂಗದಲ್ಲಿ ಕೂಡಾ ಇವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಕಲಾವಿದರಿಗೆ ಹಲವಾರು ರೀತಿಯಲ್ಲಿ ನೆರವು ನೀಡಿ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದ್ದಾರೆ. ಸ್ಪರ್ಧೆಗಳನ್ನು ಆಯೋಜಿಸಿ ಸ್ಪರ್ಧಾಳುಗಳಲ್ಲಿರುವ ಪ್ರತಿಭೆಗಳನ್ನು ಸಮಾಜದ ಮುನ್ನೆಲೆಗೆ ತರುತ್ತಿದ್ದಾರೆ. ಇಂತಹ ಸಮಾಜಮುಖಿ ಗಣ್ಯರಿಗೆ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಪಟ್ಟಾಭಿಷೇಕವಾಗಿ 51 ವರ್ಷದ ಸಂಭ್ರಮ.
ಇಂತಹ ಗಣ್ಯರ ಸಮಾಜಮುಖಿ ಕಾರ್ಯ ಹೀಗೆ ಮುಂದುವರೆಯಲಿ. ಇನ್ನೂ ಅಸಂಖ್ಯಾತ ವಿದ್ಯಾರ್ಥಿಗಳು ಕಲಾವಿದರು ಇವರಿಂದ ಒಳತನ್ನು ಪಡೆಯಲಿ. ಭಗವಂತನ ಕೃಪೆ ಇವರ ಮೇಲಿರಲಿ. ಆಯಸ್ಸು ಆರೋಗ್ಯ ನೀಡಿ ಹರಸಲೆಂದು ಬೇಡುತ್ತೇವೆ.
ಲೇಖನ: ರೋಹನ್ ಪಿಂಟೋ ಗೇರುಸೊಪ್ಪ
Discussion about this post