ಭದ್ರಾವತಿ: ಸಮಸ್ತ ಮಾನವ ಕಲ್ಯಾಣಕ್ಕಾಗಿ ಹುಟ್ಟಿಕೊಂಡಿರುವ ವೇದ ಉಪ ನಿಷತ್ತುಗಳ ಸಾರವನ್ನು ಉಪದೇಶ, ಕೃತಿ, ನಡವಳಿಗಳ ಮೂಲಕ ಎತ್ತಿ ಹಿಡಿಯುವ ಕೆಲಸ ಶ್ರೀ ಭಗವತ್ಪಾದರು ಮಾಡುತ್ತಿದ್ದಾರೆ ಎಂದು ಕೆ.ಆರ್.ನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠಾಧೀಶ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಅವರು ಜನ್ನಾಪುರ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಶೀವಚನ ನೀಡಿದರು.
ವಿದ್ಯಾರ್ಥಿಗಳಿಗೆ ಸ್ತೋತ್ರ ಹೇಳಿಕೊಡುವುದು ಸಾಮಾನ್ಯ ಆದರೆ ಶ್ರೀ ಕ್ಷೇತ್ರವು ತಂದೆ ತಾಯಿಗಳಿಗೆ, ಗುರು ಹಿರಿಯರಿಗೆ, ಕೊಡಬೇಕಾದ ಗೌರವ, ಧರ್ಮದ ಆಚರಣೆಗಳ ಬಗ್ಗೆ ವಿಶೇಷ ಅರಿವು ಮೂಡಿಸಲು ಉಪಯುಕ್ತವಾಗಿರುವ “ವಿವೇಕ ದೀಪಿನಿ” ಯನ್ನು ಹೇಳಿಕೊಡುವ ಕೆಲಸ ರಾಜ್ಯದೆಲ್ಲೆಡೆ ಮಾಡಲಾಗುತ್ತಿದೆ.
ತಾಯಿಯೆ ಮೊದಲ ದೇವರು ಎಂದು ಉಪದೇಶ ಮಾಡಿದ ಶಂಕರರು ತಾವು ಮಾಡಿದ ಉಪದೇಶಗಳೆಲ್ಲವನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಕೇವಲ ಉಪದೇಶಕ್ಕಾಗಿ ಸೀಮಿತರಾದವರು ಮಾಡುವ ಉಪದೇಶದಿಂದಾಗಿ ಯಾವುದೇ ಸಮಾಜ ಬದಲಾವಣೆಯಾಗಲು ಸಾಧ್ಯವಿಲ್ಲ. ಸಮಾಜದ ಪ್ರತಿಯೊಬ್ಬರು ಸಾಧ್ಯವಾಗುವಷ್ಟು ಶಂಕರರ ತತ್ವಗಳನ್ನು ಅಳವಡಿಸಿಕೊಂಡು ಮನುಷ್ಯ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಹಾಗೂ ದ್ವೈತ ಉಪನಿಷತ್ತಿನ ಸಾರವನ್ನು ಪ್ರತಿಯೊಬ್ಬರೂ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.
ದೇವಸ್ಥಾನದ ಅರ್ಚಕ ಕೃಷ್ಣಮೂರ್ತಿ ಸೋಮಯಾಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನೆರೆದಿದ್ದ ಅಪಾರ ಭಕ್ತರು ಗುರುಗಳ ಪಾದುಕ ಪೂಜೆ ನೆರವೇರಿಸಿದರು. ಶ್ರೀಗಳು ಮಂತ್ರಾಕ್ಷತೆ ನೀಡಿ ಹರಸಿದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post