ನವದೆಹಲಿ: ಪ್ರಭು ಶ್ರೀರಾಮಚಂದ್ರ ಜನಿಸಿದ ಅಯೋಧ್ಯೆಯಲ್ಲಿಯೇ ಫೆ.21ರಿಂದ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಪರಮ್ ಧರ್ಮ ಸಂಸತ್ ಘೋಷಣೆ ಮಾಡಿದೆ.
ಧಾರ್ಮಿಕ ಮುಖಂಡರ ತಂಡ ಪ್ರಯಾಗ್’ರಾಜ್’ನ ಕುಂಭದಲ್ಲಿ ಭೇಟಿಯಾಗಿ, ಚರ್ಚೆ ನಡೆಸಿ ತೀರ್ಮಾನಕ್ಕೆ ಬಂದಿದ್ದು, ಸುಪ್ರೀಂ ಕೋರ್ಟ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅತ್ಯಂತ ಗೌರವದೊಂದಿಗೇ ನಾವು ಈ ತೀರ್ಮಾನವನ್ನು ಕೈಗೊಂಡಿದ್ದೇವೆ. ಆದರೆ, ಈಗ ನಮಗೆ ನಿರ್ಮಾಣ ಕಾರ್ಯ ಆರಂಭ ಮಾಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಅಲ್ಲದೇ, ಇಲ್ಲಿಂದ ನಾಲ್ಕು ಶಿಲೆಗಳನ್ನು ತೆಗೆದುಕೊಂಡು ಅಯೋಧ್ಯೆಗೆ ತರಳಲಿದ್ದೇವೆ ಎಂದು ಮುಖಂಡರು ತಿಳಿಸಿದ್ದಾರೆ.
ವಿವಾದಿತ ಅಯೋಧ್ಯೆ ಸ್ಥಳದ ಸುತ್ತಲೂ ಸ್ವಾಧೀನಪಡಿಸಿಕೊಂಡಿರುವ ಹೆಚ್ಚುವರಿ ಖಾಲಿ ಭೂಮಿಯನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್ ಅನುಮತಿ ಕೋರಿದೆ. ಅಯೋಧ್ಯೆಯಲ್ಲಿ ದೇವಾಲಯದ ನಿರ್ಮಾಣವನ್ನು ಉತ್ತೇಜಿಸಲು ಮತ್ತು ಮೇಲ್ವಿಚಾರಣೆಗೆ ರೂಪಿಸಲಾದ ಟ್ರಸ್ಟ್ ರಾಮ್ ಜನ್ಮಭೂಮಿ ನ್ಯಾಸ್’ಗೆ ಹೆಚ್ಚುವರಿ ಭೂಮಿಯನ್ನು ಹಸ್ತಾಂತರಿಸಬೇಕೆಂದು ಕೇಂದ್ರವು ಒತ್ತಾಯಿಸಿದೆ.

















