ಬೆಂಗಳೂರು: ಅಂದಿನ ಕಾಲದಲ್ಲಿ ರಾಜ್ಯದ ಹಲವು ಆಡಳಿತಗಾರರಿಗೆ ಡಿ.ವಿ. ಗುಂಡಪ್ಪನವರು ರಾಜಗುರುವಾಗಿದ್ದರು ಎಂದು ಅವರ ಮೊಮ್ಮಕ್ಕಳು ನೆನೆದಿದ್ದಾರೆ.
ಡಿವಿಜಿ ಅವರ ಜನ್ಮ ದಿನ ನಿಮಿತ್ತ ಬಸವನಗುಡಿಯ ಬ್ಯೂಗಲ್ ರಾಗ್’ನಲ್ಲಿರುವ ಡಿವಿಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರ ಮೊಮ್ಮಕ್ಕಳು ಹಲವು ರಾಜಕಾರಣಿಗಳು ಅವರ ಬಳಿ ಸಲಹೆ ಕೇಳಲು ಆಗಮಿಸುತ್ತಿದ್ದರು. ಈ ಮೂಲಕ ಹಲವರಿಗೆ ರಾಜಗುರುವಾಗಿದ್ದರು ಎಂದರು.
ಡಿವಿಜಿಯವರು ತಾವು ಹೇಳಿದಂತೆಯೇ, ಬರೆದಂತೆಯೇ ಅವರೂ ಸಹ ಬದುಕಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಿ, ನಮ್ಮ ನೆನಪಿನಲ್ಲೇ ಉಳಿದಿರುವ ನಮ್ಮ ಅಜ್ಜ ಡಿ.ವಿ. ಗುಂಡಪ್ಪನವರು, ಲೋಕಕ್ಕೆ ಹೇಳಿದಂತೆಯೇ ತಾವೂ ಸಹ ನಡೆದುಕೊಂಡಿದ್ದರು ಎಂದು ಅವರ ಮೊಮ್ಮಕ್ಕಳು ನೆನೆದರು.
ಅವರಿಗೆ ಬ್ಯೂಗಲ್ ರಾಕ್ ಎಂದರೆ ಅತ್ಯಂತ ಪ್ರೀತಿಯ ಪ್ರದೇಶ. ಹೀಗಾಗಿ, ಇಲ್ಲಿಗೆ ಪ್ರತಿದಿನ ಅವರು ಭೇಟಿ ನೀಡುತ್ತಿದ್ದರು. ಅವರೊಂದಿಗೆ ಜಿ.ಪಿ. ರಾಜರತ್ನಂ, ಪಂಜೆ ಮಂಗೇಶರಾಯರು, ಗೋವಿಂದ ಪೈ ಅವರೂ ಸಹ ಕೆಲವು ಬಾರಿ ಬರುತ್ತಿದ್ದರು. ಎಲ್ಲರೂ ಇಲ್ಲಿಗೆ ಆಗಮಿಸಿ ಪ್ರಸಕ್ತ ವಿದ್ಯಮಾನಗಳು, ಸಾಹಿತ್ಯದ ಕುರಿತಾಗಿ ಚರ್ಚೆ ನಡೆಸುತ್ತಿದ್ದರು ಎಂದು ಮೆಲುಕು ಹಾಕಿದರು.
ಯಾವುದೇ ರೀತಿಯ ಜಾತಿ ಪದ್ದತಿಯನ್ನು ಪಾಲಿಸದೇ ಇದ್ದ ಅವರು, ಹಿಂದಿನ ಕಾಲದ ಹಲವು ಸಂಪ್ರದಾಯಗಳನ್ನು ಅವರು ವಿರೋಧಿಸಿದ್ದರು. ಅರ್ಥವಿಲ್ಲದ ಸಂಪ್ರದಾಯ ಹಾಗೂ ಆಚರಣೆಗಳ ಬಗ್ಗೆ ಜನರಿಗೆ ತಿಳಿ ಹೇಳುವ ಕಾರ್ಯವನ್ನು ಮಾಡುತ್ತಿದ್ದ ಅವರು, ನಮ್ಮ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು ಎಂದರು.
Discussion about this post