ಆ ಸಂಜೆ ಕುವೆಂಪು ರಂಗಮಂದಿರ ರಂಗೇರಿತ್ತು. ಹಲವಾರು ಪ್ರೇಕ್ಷಕರು ಅಲ್ಲಿ ನೆರೆದಿದ್ದರು. ಕಾರಣ ಇಷ್ಟೇ. ಭರತಮುನಿಯಿಂದ ಬಂದ ಭರತನಾಟ್ಯದೆಂಬ ಸರಪಳಿಗೆ ಒಂದು ಹೊಸ ಕೊಂಡಿ ಸೇರಿಕೊಳ್ಳಲು ವೇದಿಕೆಯು ಸಜ್ಜಾಗಿತ್ತು.
ನಾನೇನು ಹೇಳ ಹೊರಟಿರುವೆ ಎಂದರೆ. ಇತ್ತೀಚೆಗೆ ಕುವೆಂಪು ರಂಗಮಂದಿರದಲ್ಲಿ ನಡೆದ ಕು. ಸಿಂಚನಾ ಎನ್. ಅಜ್ಮನಿಯವರ ರಂಗಪ್ರವೇಶ ಕಾರ್ಯಕ್ರಮದ ಬಗ್ಗೆ ರಂಗಮಂದಿರದ ವೇದಿಕೆಯದು.
ದೀಪಗಳಿಂದ ಅಲಂಕೃತವಾಗಿತ್ತು. ಒಂದು ಆಸನದಲ್ಲಿ ಕುಳಿತು ಎಲ್ಲಿಂದ ವೇದಿಕೆ ಚೆನ್ನಾಗಿ ಕಾಣುತ್ತೆ ಎಂದು ಹುಡುಕಿಕೊಂಡು ಕುಳಿತಿದ್ದ ನಮಗೆ ಸರ್ವರಿಗೂ ನಮಸ್ಕಾರ ಎಂದು ಧ್ವನಿಯು ಕಾರ್ಯಕ್ರಮಕ್ಕೆ ಒಳ್ಳೆಯ ಆರಂಭವನ್ನು ನೀಡಿತು. ಸಾಂಪ್ರದಾಯಿಕವಾಗಿ ತನ್ನ ಗುರುವಾದ ಡಾ. ಕೆ.ಎಸ್. ಪವಿತ್ರಾರೊಂದಿಗೆ ಸಿಂಚನಾ ರವರು ರಂಗಮಂದಿರದ ಹೊರಗಿನಿಂದ ಬಂದು ವೇದಿಕೆಯನ್ನೇರಿ ನಟರಾಜನನ್ನು ನಮಿಸಿದರು ಹಾಗೂ ಗುರುಗಳಾದ ಡಾ. ಪವಿತ್ರಾರ ಆಶೀರ್ವಾದವನ್ನೂ ಪಡೆದರು.
ಮತ್ತೆ ಅದೇ ನಿರೂಪಕಿಯ ಧ್ವನಿಯು ನಮ್ಮನ್ನು ಮತ್ತೊಮ್ಮೆ ಸೆಳೆಯಿತು. ಆ ದನಿಯು ಡಾ. ಕೆ.ಎಸ್. ಚೈತ್ರಾರದ್ದು. ನಿರೂಪಣೆಗೆಂದೆ ಹೇಳಿ ಮಾಡಿಸಿದ ಧ್ವನಿ ಅದಾಗಿತ್ತು. ನೋಡು ನೋಡುತ್ತಿದ್ದಂತೆಯೇ ಮೊದಲ ನೃತ್ಯ ಮೇಳ ಪ್ರಾಪ್ತಿ ಹಾಗೂ ಗಣೇಶ ವಂದನೆ ಪ್ರಾರಂಭವಾಯಿತು. ತಮ್ಮ ಮೊದಲ ಹೆಜ್ಜೆಯಲ್ಲೇ ಕು. ಸಿಂಚನಾ ಎಲ್ಲರ ಗಮನ ಸೆಳೆದರು.
ಕಲಾಸ್ವಾದಕರನ್ನು ರಂಜಿಸಿದರು. ಕಣ್ಣಲ್ಲಿ ತುಂಬ ಕಾಜಲ್, ಜಲ್ಲೆನ್ನುವ ಗೆಜ್ಜೆ, ಹಾವಭಾವಗಳನ್ನು ಲೀಲಾಜಾಲವಾಗಿ ತೋರುತ್ತಿದ್ದ ಮುಖ, ಲಾಲಿತ್ಯಮಯವಾದ ಭಂಗಿಗಳು ರಸಿಕರ ಕಣ್ಣಿಗೆ ಒಂದೆಡೆ ತಂಪೀಯುತ್ತಿದ್ದರೆ, ರಘುರಾಮ್ರವರ ಸಂಗೀತ, ಜನಾರ್ಧನ ಅವರ ಮೃದಂಗ, ರಾಕೇಶ್ ಸುಧೀರ್ರವರು ಕೊಳಲಿ, ರಾಘವೇಂದ್ರ ರಂಗಧೋಳ್ರವರ ರಿದಂ ಪ್ಯಾಡ್ ಕಿವಿಗಳಿಗೆ ಆನಂದವನ್ನುಂಟುಮಾಡುತ್ತಾ ನೃತ್ಯಕ್ಕೆ ಸಾಥ್ ನೀಡುತ್ತಿದ್ದವು. ಅಲ್ಲಿ ಸಿಂಚನಾರವರು ಗುರುವಿಗೆ ನಂದಿಸುತ್ತಿದ್ದರೆ ಇಲ್ಲ ನಮ್ಮ ಮೈಯಲ್ಲಿ ಅದೇನೊ ರೋಮಾಂಚನ, ನಂತರದ ಜತಿಸ್ವರ ಹಾಗೂ ಗಂಗಾಧರ ಕೌತುವಮ್, ಪದವರ್ಣಗಳು ನಾವೂ ಸ್ಟೇಜ್ ಮೇಲೆ ಒಮ್ಮೆಯಾದರೂ ಹೀಗೆ ನರ್ತಿಸಬೇಕು ಎಂಬ ಆಸೆಯನ್ನು ಹುಟ್ಟಿಸುವಂತಿದ್ದರೆ, ಸೀತಾ ಸ್ವಯಂವರವು ನಮ್ಮನ್ನು ಮಂಥಿಲೆಗೆ ಕರೆದೊಯ್ಯಿತು.
ಸಭಾ ಕಾರ್ಯಕ್ರಮವೂ ಅಷ್ಟೇ. ಸೂರ್ಯಪ್ರಸಾದ್, ಅರುಣಾದೇವಿ, ಚಂದ್ರಶೇಖರ್, ದೀಪಾ ರವಿಶಂಕರ್ ಇವರ ಇವರ ಹಿತಮಿತವಾದ ಭಾಷಣವು ಕಾರ್ಯಕ್ರಮವನ್ನು ಅಂದಗಾಣಿಸಿತು. ಮತ್ತೆ ಶುರುವಾದ ನೃತ್ಯವನ್ನು ನೋಡುವಾಗ ನಮ್ಮ ಕಣ್ಣುಗಳು ಅದೇಕೋ ಗುರು ಡಾ. ಕೆ.ಎಸ್. ಪವಿತ್ರಾರನ್ನು ನೋಡಿದವು. ನೋಡುವುದೆಂತು ಅಲ್ಲಿ ಅವರ ಮುಖದಲ್ಲಿ ಹೆಮ್ಮೆಯ ನಗು ತನ್ನ ಎರಡನೆಯ ಶಿಷ್ಯೆ ರಂಗಪ್ರವೇಶ ಮಾಡುತಿದ್ದಾಳೆಂಬ ಹೆಮ್ಮೆ ಹಾಗೂ ಅವಳ ಮುಖದಲ್ಲಿ ಮೂಡುತ್ತಿದ್ದ ಪ್ರತಿಯೊಂದು ಭಾವನೆಗಳು ಇದರ ಮುಖದಲ್ಲೂ ಸ್ವಲ್ಪ ಹೊತ್ತು ಸಿಂಚನಾರನ್ನು ಬಿಟ್ಟು ಪವಿತ್ರಾರನ್ನು ನೋಡುವ ಭಾಗ್ಯ ನಮ್ಮದಾಗಿತ್ತು.
ಮುಂದೆ ಸಾಗಿದ ನೃತ್ಯವು ವಚನವನ್ನು ಮುಗಿಸಿ, ತಿಲ್ಲಾನವನ್ನು ತಲುಪಿಯೇ ಬಿಟ್ಟಿತು. ತಿಲ್ಲಾನದ ನಂತರ ಮಂಗಳ ಅಯ್ಯೋ ಕಾರ್ಯಕ್ರಮ ಮುಗಿದೇ ಬಿಟ್ಟಿತಾ… ಇನ್ನೂ ಒಂದೆರಡು ನೃತ್ಯ ಇರಬಹುದಿತ್ತು ಎಂಬ ಭಾವನೆ ನೋಡುಗರಿಗೆ. ನಂತರದ ಊಟದ ಸವಿಯೂ ನಮ್ಮನ್ನು ಸೆಳೆದ ಅಂಶಗಳಲ್ಲೊಂದು. ಒಟ್ಟಿನಲ್ಲಿ ಈ ಕಾರ್ಯಕ್ರಮವು ಓಡುತಿರುವ ನಮ್ಮ ಜೀವನದಲ್ಲಿ ಆನಂದವನನು ಉಂಟುಮಾಡಿತು.
ಇಂತಹಾ ಬಿಜಿ ಜಗದಲ್ಲಿ ಎಲ್ಲಿಯೋ ಕಲೆಯನ್ನು ಕಳೆದು ಕೊಳ್ಳುತಿದ್ದೇವೇನೋ ಎಂಬ ಭಾವನೆಯುಳ್ಳ ನಮಗೆ ಎಲ್ಲಾ ಕಲೆಯು ಇನ್ನೂ ಉಳಿದಿದೆ, ಬೆಳಯುತ್ತಿದೆ ಎಂಬ ಆಶಾಭಾವನೆಯನ್ನು ಸಿಂಚನಾ ಮೂಡಿಸಿದರೆ, ಬರೀದೇ ಟಿಆರ್’ಪಿ ಕಾರ್ಯಕ್ರಮಕ್ಕಾಗಿ ಮಕ್ಕಳನ್ನು ತಯಾರು ಮಾಡುತ್ತಿವ ಆಧುನಿಕ ಗುರುಗಳ ಮಧ್ಯೆ ಸಾರ್ಥಕತೆಗಾಗಿ ತಮ್ಮ ಸಂಪೂರ್ಣ ವಿದ್ಯೆನ್ನು ಧಾರೆಯೆರೆಯುತಿರುವ ನೃತ್ಯ ಗುರು ಡಾ. ಕೆ.ಎಸ್. ಪವಿತ್ರಾರವರು. ನಮ್ಮಲ್ಲಿ ಗೌರವ ಭಾವನೆಯನ್ನು ಮೂಡಿಸುತ್ತಾರೆ. ಒಟ್ಟಿನಲ್ಲಿ ಇಂತಹ ಅದ್ಭುತ ಸಂಜೆಯನ್ನು ನೀಡಿದ ಎಲ್ಲರಿಗೂ ಧನ್ಯವಾದಗಳು.
ಲೇಖನ: ಬ್ರಾಹ್ಮೀ
















