ಚಳ್ಳಕೆರೆ: ಇಲ್ಲಿನ ಗ್ರಾಮೀಣ ಪ್ರತಿಭೆ ರಾಜು ಬೆಳಗೆರೆ ಎಂಬ ಯುವ ನಿರ್ದೇಶಕರ ನೇತೃತ್ವದಲ್ಲಿ ನಿಗೂಢ ಸಿನೆಮಾದ ಚಿತ್ರೀಕರಣ ಇದೇ ತಿಂಗಳ 25ರಂದು ಆರಂಭವಾಗಲಿದೆ.
ತಾಲೂಕಿನ ಬೆಳಗೆರೆ ಗ್ರಾಮಿಣ ಪ್ರತಿಭೆ ರಾಜು ಬೆಳಗೆರೆ ಚಿತ್ರಕಥೆ, ಸಂಭಾಷಣೆ, ನಿರೂಪಣೆಯಲ್ಲಿ ಸಿನೆಮಾ ತಯಾರಾಗುತ್ತಿದೆ. ರಾಜು ಸುಮಾರು 15 ವರ್ಷಗಳಿಂದ ಸ್ಯಾಂಡಲ್’ವುಡ್’ನಲ್ಲಿ ಕಥೆಗಾರನಾಗಿ, ಸಂಭಾಷಣೆಕಾರನಾಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
ಈ ಸಿನೆಮಾಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ರಾಜು ಅವರೇ ಸ್ವತಃ ಸಂಭಾಷಣೆಯನ್ನೂ ಬರೆದಿದ್ದಾರೆ.
ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಯುವ ನಿರ್ದೇಶಕ ರಾಜು ಬೆಳಗೆರೆ, ಮೇ 25ರಂದು ಚಿತ್ರೀಕರಣ ಆರಂಭವಾಗಲಿದ್ದು, ಸುಂದರ ತಾಣಗಳಾದ ಸಕಲೇಶಪುರ, ಮಡಿಕೇರಿ, ಕೊಡಗು ಜಿಲ್ಲೆಯ ಹಲವು ಸ್ಥಳಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ ಎನ್ನುತ್ತಾರೆ.
ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದ್ದು, ಪರಿವರ್ತನ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 2 ನೆಯ ಚಿತ್ರ ಇದಾಗಿದೆ.

ಕನಕಪುರದ ಚಿನ್ನಸ್ವಾಮಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಚಿನ್ನಸ್ವಾಮಿ ಅವರು ಸುಮಾರು ವರ್ಷಗಳಿಂದ ಸಿನೆಮಾ ನಿರ್ಮಾಣ ಮಾಡುವ ಬಯಕೆ ಹೊಂದಿದ್ದರು. ರಾಜು ಬೆಳಗೆರೆ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡ ಅವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು ಈ ಚಿತ್ರಕ್ಕೆ ರಾಂಗ್ಕಾಲ್ ಚಂದ್ರು ಎನ್ನುವ ಯುವ ನಟ ಈ ಚಿತ್ರಕ್ಕೆ ನಾಯಕ ನಟರಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡು ತೆರೆಗೆ ಬರಲು ಸಿದ್ದವಾಗುತ್ತಿರುವ ಪಂಚಮುಖಿ ಎಂಬ ಚಿತ್ರದ ನಾಯಕನಾಗಿರುವ ಈ ಚಿತ್ರಕ್ಕೂ ಸಹ ಆಯ್ಕೆಯಾಗಿದ್ದಾರೆ.

ಈ ಕುರಿತಂತೆ ಮಾತನಾಡಿದ ನಾಯಕ ನಟ ಚಂದ್ರು, ಕನ್ನಡ ಸಿನೆಮಾದಲ್ಲಿ ಅವಕಾಶಗಳು ಸಿಗುತ್ತಿದ್ದು, ರಾಜು ಬೆಳಗೆರೆ ನಿರ್ದೇಶನ ಸಿನೆಮಾದಲ್ಲಿ ನಟಿಸಲು ಅವಕಾಶ ದೊರೆತಿದ್ದು ಸಂತೋಷವಾಗಿದೆ. ಚಿತ್ರಕಥೆ ಇಷ್ಟವಾಗಿದ್ದು, ಈ ಸಿನೆಮಾ ಚಿತ್ರರಸಿಕರಿಗೆ ಒಳ್ಳೆಯ ಮನರಂಜನೆ ನೀಡಲಿದೆ ಎನ್ನುತ್ತಾರೆ.
ಈ ಚಿತ್ರಕ್ಕೆ ನಾಯಕಿ ಆಯ್ಕೆ ನಡೆಯುತ್ತಿದ್ದು, ಖಳನಟರಾಗಿ ಹಪ್ತಾಬ್ಖಾರನ್ ಹೊಸದಾಗಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು ವಿಜಯ ಭರಮಸಾಗರ್ ಗೌಸ್ಪೀದರ್, ಸಂತೋಷ್ ನಾಯ್ಕರವರ ಸಾಹಿತ್ಯವಿದೆ. ಕೆಜಿಎಫ್ ಚಿತ್ರದಲ್ಲಿ ಕೆಲಸ ಮಾಡಿದ್ದ ಶ್ರೀಕಾಂತ್ ಈ ಚಿತ್ರಕ್ಕೆ ಸಂಕಲನ ಮಾಡಲಿದ್ದು, ಪ್ರೇಮ್ ಸಹಕಾರವಿದೆ.
ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಕೊರಿಯೋಗ್ರಾಫರ್ ಅರವಿಂದ(ಕಾಲಭೈರವ), ಸಹಕಲಾವಿದರಾಗಿ ಮಿಲ್ಲುಚಂದ್ರು, ಮಧುಗಿರಿ ನಟಿಸಲಿದ್ದಾರೆ.
ಒಟ್ಟಾರೆ ಹೊಸದಾಗಿ ಸ್ವತಂತ್ರವಾಗಿ ಆಕ್ಷನ್ ಕಟ್ ಹೇಳಲು ಹೊರಟಿರುವ ಯುವ ನಿರ್ದೇಶಕ ರಾಜು ಬೆಳಗೆರೆ ಅವರ ಪ್ರಯತ್ನ ಸಕ್ಸಸ್ ಕಾಣಲಿ ಎಂಬುದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರೈಕೆ.
-ಎಸ್. ಸುರೇಶ್ ಬೆಳಗೆರೆ, ಚಳ್ಳಕೆರೆ

















