ಭದ್ರಾವತಿ: ಪ್ಲೆಕ್ಸ್ ಹಾವಳಿಯಿಂದಾಗಿ ಚಿತ್ರಕಲೆ ಹಾಗೂ ಚಿತ್ರ ಕಲಾವಿದರ ಬದುಕು ಅತಂತ್ರವಾಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ತನ್ನ ಚಿತ್ರಕಲೆಯ ಮೂಲಕ ಗಮನಸೆಳೆಯುತ್ತಿರುವ ಪ್ರತಿಭೆ ಭದ್ರಾವತಿಯ ವಿಷ್ಣು ಕುಮಾರ್.
ಯುವ ಜನತೆ ಇಂದು ಕೇವಲ ಐಟಿ, ಬಿಟಿಗಳ ಕಡೆ ಒಲವು ತೋರುತ್ತಿರುವ ಸಂದರ್ಭದಲ್ಲಿ ಚಿತ್ರಕಲೆಯ ಮೂಲಕವೇ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆ ವಿಷ್ಣುಕುಮಾರ್.
ಭದ್ರಾವತಿ ಕಾಗದನಗರದ ನಿವಾಸಿಗಳಾದ ಚಂದ್ರಶೇಖರ್ ಹಾಗೂ ಸರಸ್ವತಿ ದಂಪತಿಗಳ ದ್ವಿತೀಯ ಪುತ್ರನಾಗಿರುವ ವಿಷ್ಣುಕುಮಾರ್ ತನ್ನ ಕಿರಿಯ ವಯಸ್ಸಿನಲ್ಲಿಯೇ ಕಲೆಯ ಆಸಕ್ತಿ ಬೆಳೆಸಿಕೊಂಡ ಪ್ರತಿಭೆ. ಪ್ರೌಢಶಾಲಾ ಶಿಕ್ಷಣದ ನಂತರ ಶಿವಮೊಗ್ಗದ ಖ್ಯಾತ ಕಲಾವಿದರುಗಳಾದ ಜ್ಞಾನೇಶ್ವರ್ ಹಾಗೂ ಪ್ರವೀಣ್ ಕವಟೇಕರ್ ಬಳಿ ತರಬೇತಿ ಪಡೆದರು.

ಇವರ ಸಾಧನೆಯನ್ನು ಕಂಡು ಶಿವಮೊಗ್ಗ ಜಿಲ್ಲೆಯ ಅನೇಕ ಸಂಘ, ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಫ್ಲೆಕ್ಸ್ ಹಾವಳಿಗಳ ನಡುವೆಯೂ ಎದೆಗುಂದದೆ ತನ್ನ ಪ್ರತಿಭೆಯ ಮೂಲಕ ಬದುಕುಕಟ್ಟಿಕೊಳ್ಳಲು ಹಾತೊರೆಯುತ್ತಿರುವ ಕಲಾವಿದನಿಗೆ ಮತ್ತಷ್ಟು ಪ್ರೋತ್ಸಾಹ ಹಾಗೂ ಅವಕಾಶಗಳ ಒದಗಬೇಕಿದೆ.
ಚಿತ್ರಕಲೆ ಕಲಿಕೆಯ ಆಸಕ್ತರಿಗೊಂದು ಸುವರ್ಣಾವಕಾಶ
ಅಪರೂಪ ಹಾಗೂ ಅಪ್ರತಿಮ ಕಲೆಯನ್ನು ಹೊಂದಿರುವ ಭದ್ರಾವತಿಯ ವಿಷ್ಣು ಕುಮಾರ್ ಅವರ ಮಾರ್ಗದರ್ಶನದಲ್ಲಿ ಚಿತ್ರಕಲೆಯನ್ನು ಕಲಿಯುವ ಅವಕಾಶ ಉಕ್ಕಿನ ನಗರಿಯ ಮಂದಿಗೆ ಒದಗಿಬಂದಿದೆ.

ಚಿತ್ರಕಲೆಯ ವಿವಿಧ ಆಯಾಮಗಳನ್ನು ಪರಿಚಯ, ಮಕ್ಕಳ ಸೃಜನಶೀಲತೆ ಹಾಗೂ ಕಲ್ಪನಾ ಶಕ್ತಿ ಹೆಚ್ಚಿಸುವುದರೊಂದಿಗೆ ಅದಕ್ಕೆ ಜೀವಂತಿಕೆ ನೀಡುವ ಉದ್ದೇಶವನ್ನು ಹೊಂದಿದ್ದು, ಮಕ್ಕಳ ಮಾನಸಿಕ ಬೇಸರ ಮರೆಸಿ, ತಾಳ್ಮೆ ಏಕಾಗ್ರತೆ ಹಾಗೂ ಮನೋಲ್ಲಾಸ ತುಂಬುವ ಜೊತೆಯಲ್ಲಿ ಬಣ್ಣಗಳ ಕುರಿತಾಗಿ ಅರಿವನ್ನೂ ಸಹ ಮೂಡಿಸುವ ಉದ್ದೇಶವನ್ನು ಹೊಂದಿದ್ದಾರೆ ವಿಷ್ಣು ಅವರು.


(ವಿಶೇಷ ವರದಿ: ಆರ್.ವಿ. ಕೃಷ್ಣ, ಭದ್ರಾವತಿ)









Discussion about this post