ಭದ್ರಾವತಿ: ಖಾಸಗೀ ವ್ಯಕ್ತಿಗಳು ಭೂ ಕಬಳಿಸಲು ಸ್ಪಂದಿಸಿದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ಮಿನಿ ವಿಧಾನಸೌಧ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮದ 5 ಎಕರೆ 18 ಗುಂಟೆ ಗ್ರಾಮಠಾಣಾ ಜಮೀನು ಜಾಗವನ್ನು ಖಾಸಗೀ ವ್ಯಕ್ತಿಗಳು ಕಬಳಿಸಲು ಮುಂದಾಗಿದ್ದು ಇದಕ್ಕೆ ಅಧಿಕಾರಿಗಳು ಸಹ ಸ್ಪಂಧಿಸಿದ್ದಾರೆ. ಭೂಕಬಳಿಕೆಗೆ ಸ್ಪಂಧಿಸಿ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಗಳನ್ನು ಕೂಡಲೆ ಅಮಾನತ್ತು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರಕಾರ ಅಧಿಕಾರಿಗಳಿಗೆ ಸಹಸ್ರಾರು ರೂ ಸಂಬಳ ನೀಡುತ್ತಿದ್ದರು ಖಾಸಗೀ ವ್ಯಕ್ತಿಗಳ ಜೊತೆ ಶಾಮೀಲಾಗಿ ಲಂಚ ಪಡೆದು ಸರಕಾರಕ್ಕೆ ಮೋಸ ಮಾಡುತ್ತಿರುವುದು ಖಂಡನೀಯ. ಇಂತಹ ಅಧಿಕಾರಿಗಳ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಬೇಕು, ನವಲೆ ಬಸಾಪುರ ಗ್ರಾಮದ ಸರ್ವೆ ನಂ: 999 ಪಹಣಿಯಲ್ಲಿ 5 ಎಕರೆ 18 ಗುಂಟೆ ಗ್ರಾಮಠಾಣಾ ಜಾಗವು ಸಾರ್ವಜನಿಕರ ಉಪಯೋಗಕ್ಕೆ ಅವಕಾಶವಿದ್ದು, ನಿವೇಶನಗಳಿಲ್ಲದ ಬಡವರಿಗೆ ಗ್ರಾಮಾಠಾಣದ ಕಾನೂನಾಗಿರುತ್ತದೆ. ಆದರೆ ಇಲ್ಲಿನ ಪಂಚಾಯಿತಿ ಹಾಗು ಉನ್ನತ ಅಧಿಕಾರಿಗಳು ಆ ಜಾಗವನ್ನು ಅದೇ ಗ್ರಾಮದ ಚನ್ನಬಸಪ್ಪ ಬಿನ್ ಚನ್ನಪ್ಪ ಎಂಬ ಖಾಸಗೀ ವ್ಯಕ್ತಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆಂದು ಅಧಿಕಾರಿಗಳೆ ಗ್ರಾಮಸ್ಥರಿಗೆ ತಿಳಿಸಿ ಹಕ್ಕು ಪತ್ರ ನೀಡಿದ್ದು ಪ್ರಕರಣ ಬೆಳಕಿಗೆ ಬಂದ ನಂತರ ಹಕ್ಕುಪತ್ರ ವಾಪಸ್ಸು ಪಡೆದಿರುವುದು ಖಂಡನೀಯ.
ಅಲ್ಲದೆ ಗ್ರಾಮದಲ್ಲಿ ಸುಮಾರು 1500 ಜನರು ವಾಸಿಸುತ್ತಿದ್ದು, ಅಂತಿಮ ಸಂಸ್ಕಾರ ನಡೆಸಲು ಸ್ಮಶಾನ ಸಹ ಇಲ್ಲದಂತಾಗಿದೆ. ಅದು ಸಹ ಗ್ರಾಮದ ಜನರಿಗೆ ಮಾಡಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುತ್ತಾರೆ. ಅದ್ದರಿಂದ ಕೂಡಲೇ ಗ್ರಾಮಸ್ಥರಿಗೆ ಸ್ಮಶಾನಕ್ಕೆ ಭೂಮಿ ಒದಗಿಸಬೇಕು. ಹಲವು ವರ್ಷಗಳಿಂದ ಮನೆಗಳಿಲ್ಲದೆ ಅರ್ಜಿಗಳನ್ನು ಸಲ್ಲಿಸುತ್ತಲೇ ಬಂದಿರುವವರಿಗೆ ನಿವೇಶನಗಳನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್.ರಾಜು ಪ್ರತಿಭಟನೆಯ ನೇತೃತ್ವವಹಿಸಿದ್ದರು. ಡಿ.ಸಿ.ಮಾಯಣ್ಣ, ಶಶಿಕುಮಾರ್ ಎಸ್ ಗೌಡ ಮಾತನಾಡಿದರು. ಮುಖಂಡರಾದ ಐ.ಎಲ್. ಅರುಣ್ ಕುಮಾರ್, ಗವಿಸಿದ್ದಯ್ಯ, ಬ್ರಹ್ಮಲಿಂಗಯ್ಯ, ಸೋಮಣ್ಣ, ಅಕ್ರಂ ಖಾನ್, ಆರ್.ಬಸವರಾಜ್ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿ ಉಪ ತಹಶೀಲ್ದಾರ್ ಮಲ್ಲಿಕಾರ್ಜುನ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post