ಚಳ್ಳಕೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತಿನ ಗಾಡಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಂದು ಎತ್ತು ಹಾಗೂ ಓರ್ವ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ನಗರದ ಬಳ್ಳಾರಿ ಹಾಗೂ ಬೆಂಗಳೂರು ರಸ್ತೆಯ ಎಸ್’ಆರ್’ಎಸ್ ಕಾಲೇಜಿನ ಸಮೀಪ ಇಂದು ಮುಂಜಾನೆ ಆರು ಗಂಟೆ ವೇಳೆಗೆ ಬೆಂಗಳೂರು ಮಾರ್ಗವಾಗಿ ಬಂದ ಸಿಮೆಂಟ್ ಮಿಕ್ಷರ್ ತುಂಬಿದ ಟ್ಯಾಂಕರ್ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಎತ್ತಿನ ಗಾಡಿಗೆ ರಭಸವಾಗಿ ಹಿಂದಿನಿಂದ ಢಿಕ್ಕಿ ಹೊಡೆದಿದೆ.
ಪರಿಣಾಮ ಸೋಮಗುದ್ದು ನಿವಾಸಿಯಾದ ಕೆಂಚಪ್ಪ(40) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಎತ್ತು ಕೂಡ ಸಾವನ್ನಪ್ಪಿದೆ. ಮತ್ತೊಂದು ಎತ್ತು ಗಂಭೀರವಾಗಿ ಗಾಯಗೊಂಡಿದೆ.
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪಿಎಸ್’ಐ ಎನ್. ಗುಡ್ಡಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)















