ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೈಸೂರು: ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಸಾಕು ಕೋಳಿ ಹಾಗೂ ಸ್ಮಶಾನದಲ್ಲಿ ಸತ್ತಿದ್ದ ಒಂದು ಪಕ್ಷಿಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ವಿವಿಧ ಭಾಗಗಳಲ್ಲಿ ಸಾವನ್ನಪ್ಪಿದ 7 ಪಕ್ಷಿಗಳನ್ನು ಮಾರ್ಚ್ 12 ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ಎರಡು ಪಕ್ಷಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಉಳಿದ ಪಕ್ಷಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕುಂಬಾರಕೊಪ್ಪಲಿನ 1 ಕಿಮೀ ವ್ಯಾಪ್ತಿಯ ಸುತ್ತಳತೆಯಲ್ಲಿ ವಾಸಿಸುವ ಸಾಕುಪಕ್ಷಿವಧೆ ಮಾಡುವ ಪ್ರಕ್ರಿಯೆಯನ್ನು ಶಿಷ್ಟಾಚಾರದಂತೆ ಕೈಗೊಳ್ಳಲಾಗುವುದು ಎಂದರು.
ಹಕ್ಕಿ ಜ್ವರದ ಭೀತಿಯ ಹಿನ್ನೆಲೆಯಲ್ಲಿ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಈ ಜ್ವರವು ಪಕ್ಷಿಗಳಿಗೆ ಮಾತ್ರ ಸರಾಗವಾಗಿ ಹರಡುತ್ತದೆ. ಮನುಷ್ಯರಿಗೆ ಹರಡುವುದು ಅಪರೂಪ. ಈ ಕಾರಣದಿಂದಾಗಿ ಸಾಕು ಪಕ್ಷಿಗಳವಧೆ ಮಾಡಲು ಮೈಸೂರು ಮಹಾನಗರ ಪಾಲಿಕೆ ಹಾಗೂ ಪಶುಪಾಲನ ಇಲಾಖೆ ತಕ್ಷಣದಿಂದಲೇ ಕ್ರಮ ಕೈಗೊಳ್ಳಲಿವೆ ಎಂದು ಹೇಳಿದರು.
ಹಕ್ಕಿ ಜ್ವರ ಪತ್ತೆಯಾದ ಸ್ಥಳದಿಂದ 10 ಕಿ.ಮೀ ವ್ಯಾಪ್ತಿಯೊಳಗೆ ಕೋಳಿ ಮಾಂಸ ಮಾರಾಟವನ್ನು ನಿಷೇಧ ಮಾಡಲಾಗುತ್ತದೆ. ಅಲ್ಲದೆ ಕೋಳಿಗಳನ್ನು ಅಕ್ರಮವಾಗಿ ಸ್ಥಳಾಂತರಿಸದಂತೆ ಚೆಕ್ ಪೋಸ್ಟ್ ತೆರೆಯಲಾಗುವುದು ಎಂದು ಮಾಹಿತಿ ನೀಡಿದರು.
(ವರದಿ: ಪುನೀತ್ ಜಿ ಕೂಡ್ಲೂರು, ಮೈಸೂರು)
Get in Touch With Us info@kalpa.news Whatsapp: 9481252093
Discussion about this post